ಚಿಲಿಪಿಲಿಗುಟ್ಟುವ ಪಕ್ಷಿಗಳಿಗಾಗಿ ಮೈಸೂರಿನಲ್ಲಿ ಗುಟುಕು
ಮೈಸೂರು, ಜೂನ್ 04 : ಮಾನವನ ದುರಾಸೆಯ ಫಲವಾಗಿ ಕಾಡು ದಿನದಿಂದ ದಿನಕ್ಕೆ ನಾಶವಾಗುತ್ತಿದ್ದು, ವನ್ಯಜೀವಿಗಳು ಪರಿತಪಿಸುತ್ತಿವೆ. ಅದರಲ್ಲಿಯೂ ನಗರ ಪ್ರದೇಶಗಳು ಕಾಂಕ್ರೀಟ್ಮಯವಾಗಿ ಹಸಿರು ಕಣ್ಮರೆಯಾಗುವ ಮೂಲಕ ಪಕ್ಷಿ ಸಂಕುಲ ಅವನತಿಯತ್ತ ಸಾಗುತ್ತಿದೆ.
ಈ ನಡುವೆ ಮುಂದಿನ ಪೀಳಿಗೆಗೆ ಪಕ್ಷಿಗಳ ಸಂತತಿ ಉಳಿಸುವುದಕ್ಕಾಗಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇನ್ನರ್ ವೀಲ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್ ಸಂಸ್ಥೆ ಶನಿವಾರ ಕಾರ್ಯಕ್ರಮವೊಂದನ್ನು ರೂಪಿಸುವ ಮೂಲಕ ಚಿಲಿಪಿಲಿಗುಟ್ಟುವ ಪಕ್ಷಿಗಳಿಗಾಗಿ ಮಮಕಾರ ಮೆರೆದಿದೆ. [ದೇಶ ವಿದೇಶದ ಹಕ್ಕಿಗಳ ನೋಡಲು ಗದಗಕ್ಕೆ ಬನ್ನಿ]
ಜೂ.6ರಂದು ಮೈಸೂರಿನಲ್ಲಿ ಪಕ್ಷಿಗಳಿಗೆ ನೀರುಣಿಸುವ ಹಾಗೂ ಸಿರಿ ಧಾನ್ಯಗಳನ್ನು ಪೂರೈಸುವ ಚಿಕ್ಕ ಚಿಕ್ಕ ಕಂಟೈನರ್ಗಳನ್ನು ಸಿದ್ಧಪಡಿಸಿದೆ. ಆ ಮೂಲಕ ಸಾರ್ವಜನಿಕರಿಗೆ ವಿತರಿಸಿ, ಪಕ್ಷಿಗಳಿಗೆ ಆಹಾರ ಮತ್ತು ನೀರು ಸರಬರಾಜು ಮಾಡುವುದಕ್ಕೆ ಕ್ರಮ ಕೈಗೊಳ್ಳುವ ಮೂಲಕ ಪಕ್ಷಿ ಸಂಕುಲದ ಉಳಿವಿಗೆ ತನ್ನದೇ ಆದ ಕೊಡುಗೆ ನೀಡಲು ಮುಂದಾಗಿದೆ.
ಪಕ್ಷಿಗಳಿಗೆ ಸಿರಿ ಧಾನ್ಯ ಮತ್ತು ನೀರು ಪೂರೈಕೆಗೆ ಪ್ಲಾಸ್ಟಿಕ್ ಡಬ್ಬದಲ್ಲಿ ಉತ್ತಮ ವಿನ್ಯಾಸಗೊಳಿಸಿರುವ ಕಂಟೈನರ್ಗಳನ್ನು ಸಿದ್ಧಪಡಿಸಲಾಗಿದೆ. ಮುಂಬೈನಲ್ಲಿ ಆರ್ಡರ್ ಕೊಟ್ಟು ಸುಮಾರು 300 ಕಂಟೈನರ್ಗಳನ್ನು ಆಮದು ಮಾಡಿಕೊಳ್ಳಲಾಗಿದೆ. [ಮನೆಗೆ ಬಂದ ಅಪರೂಪದ ಅತಿಥಿ ಬುಲ್ ಬುಲ್ ಹಕ್ಕಿ!]
ಪಕ್ಷಿಗಳಿಗೆ ನೀರು ಹಾಗೂ ಸಿರಿ ಧಾನ್ಯಗಳನ್ನು ಈ ಡಬ್ಬದಲ್ಲಿ ತುಂಬಿಟ್ಟು ಮನೆಯ ಮುಂದೆ, ಛಾವಣಿ ಬಳಿ ಅಥವಾ ಮರದ ಬಳಿ ನೇತು ಹಾಕಲಾಗುತ್ತಿದೆ. ಪಕ್ಷಿಗಳು ಕುಳಿತುಕೊಂಡು ಸಿರಿಧಾನ್ಯ ಮತ್ತು ನೀರು ಸೇವಿಸುವುದಕ್ಕೆ ಫ್ಲಾಟ್ಫಾರಂ ಸಿದ್ಧಪಡಿಸಲಾಗಿದೆ.
ಈಗಾಗಲೇ ರಾಮಕೃಷ್ಣನಗರ ಹಾಗೂ ಕುವೆಂಪುನಗರದಲ್ಲಿರುವ ಇನ್ನರ್ ವ್ಹೀಲ್ ಕ್ಲಬ್ ಆಫ್ ಮೈಸೂರು ಸೆಂಟರ್ ನ ಸದಸ್ಯರು ಮನೆಯ ಮುಂದೆ ನೀರು ಮತ್ತು ಆಹಾರಗಳನ್ನು ತುಂಬಿ ನೇತು ಹಾಕಿದ್ದಾರೆ. ಪ್ರಾಯೋಗಿಕವಾಗಿ ನಡೆಸಿದ ಈ ಪರೀಕ್ಷೆಯಲ್ಲಿ ಅನೇಕ ಪಕ್ಷಿಗಳು ಪ್ರತಿದಿನ ಕಂಟೈನರ್ ಬಳಿ ಬಂದು ಆಹಾರ ಸೇವಿಸಿ ನೀರು ಕುಡಿದು ಹೋಗುತ್ತಿರುವುದು ಗಮನಿಸಿದ ಬಳಿಕ ಈ ಕಾರ್ಯಕ್ರಮವನ್ನು ಆಯೋಜಿಸಲು ನಿರ್ಧರಿಸಿದ್ದಾರೆ. [ಪುರ್ರನೇ ಬಂದ ಅನಿರೀಕ್ಷಿತ ಅತಿಥಿ!]
ಪಕ್ಷಿ ಸಂಕುಲ ಉಳಿವಿಗಾಗಿ ಆಹಾರ ಮತ್ತು ನೀರು ಪೂರೈಕೆಗೆ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿರುವ ಇನ್ನರ್ ವ್ಹೀಲ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್ ನಿಯೋಜಿತ ಅಧ್ಯಕ್ಷೆ ಚಂದ್ರಿಕಾ ಸುದೀರ್ ಸಂಸ್ಥೆಯ ಈ ಉದಾತ್ತ ಉದ್ದೇಶದ ಬಗ್ಗೆ ವಿವರಿಸಿದರು.
"ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಕಾಡಿದ ತೀವ್ರತರವಾದ ಸುಡು ಬಿಸಿಲಿನಿಂದಾಗಿ ಪಕ್ಷಿಗಳು ಆಹಾರ, ನೀರಿಲ್ಲದೆ ಸಾವನ್ನಪ್ಪಿರುವ ಅನೇಕ ದೃಶ್ಯಗಳು ವಾಟ್ಸ್ಪ್ ಹಾಗೂ ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬಂದವು. ಈ ಹಿನ್ನೆಲೆಯಲ್ಲಿ ಪಕ್ಷಿಗಳ ಸಂತತಿ ಉಳಿಸಿ ಮುಂದಿನ ಪೀಳಿಗೆಗೆ ಕೊಡುಗೆ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲು ನಮ್ಮ ಕ್ಲಬ್ ನಿರ್ಧರಿಸಿತು" ಎಂದು ಹೇಳಿದರು.