ಮೈಸೂರು: ಉಬರ್ ಆನ್ ಲೈನ್ ಟ್ಯಾಕ್ಸಿ ಸರ್ವೀಸ್ ನಿಂದ ದ್ರೋಹ, ದೂರು ದಾಖಲು
ಮೈಸೂರು, ಡಿಸೆಂಬರ್ 27 : ಆನ್ ಲೈನ್ ಟ್ಯಾಕ್ಸಿ ಸರ್ವೀಸ್ 'ಉಬರ್' ಸಂಸ್ಥೆಯು ಮೈಸೂರಿನ ಟ್ಯಾಕ್ಸಿ ಚಾಲಕರು ಹಾಗೂ ಮಾಲೀಕರುಗಳಿಗೆ ಆರ್ಥಿಕವಾಗಿ, ಮಾನಸಿಕವಾಗಿ ತೊಂದರೆ ನೀಡುತ್ತಿದೆ ಎಂದು ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಒಕ್ಕೂಟದ ಸಂಚಾಲಕ ದೀಪಕ್ ಆರೋಪ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಕಂಪನಿಗಾಗಿ ಕಳೆದ ಒಂದೂವರೆ ವರ್ಷದಿಂದಲೂ ಉತ್ತಮ ಸೇವೆ ನೀಡಲಾಗಿದೆ. ಅಭಿವೃದ್ಧಿಯಾದ ನಂತರ ಸಂಸ್ಥೆ ಏಕಾಏಕಿ ನಿಗದಿತ ದರವನ್ನು ರು 12ನಿಂದ ರು.5ಗೆ ಇಳಿಸಿರುವುದನ್ನು ಪ್ರಶ್ನಿಸಿ ಮಾಲೀಕರು ಹಾಗೂ ಚಾಲಕರು ಕಳೆದೊಂದು ವಾರಗಳಿಂದಲೂ ಧರಣಿ ನಡೆಸುತ್ತಿದ್ದು ಸಂಸ್ಥೆ ನಮ್ಮ ಮನವಿಗೆ ನಿರ್ಲಕ್ಷ್ಯ ಧೋರಣೆ ಪ್ರದರ್ಶಿಸುತ್ತಿದೆ ಎಂದರು.[ತೀವ್ರ ನಷ್ಟ ಹಿನ್ನಲೆ: ಎರಡು ದಿನ ಓಲಾ, ಉಬರ್ ಟ್ಯಾಕ್ಸಿ ರಸ್ತೆಗಿಳಿಯಲ್ಲ]
ತಿಂಗಳಿಗೆ ರು 1 ಲಕ್ಷ ಆದಾಯ ಬರುವುದೆಂದು ನಂಬಿಸಿ ಸಂಸ್ಥೆಯು ವಾಹನ ಚಾಲಕ ಹಾಗೂ ಮಾಲೀಕರೊಂದಿಗೆ ಒಡಂಬಡಿಕೆಯನ್ನು ನಡೆಸಿಕೊಂಡಿತ್ತು, ಪ್ರಸ್ತುತ ಕಂಪನಿಯಿಂದ ಬರುವ ಹಣವು ಡೀಸೆಲ್, ಚಾಲಕರ ನಿರ್ವಹಣೆ ಹಾಗೂ ಇತರೆ ಖರ್ಚುಗಳು ಕಳೆದರೆ ತಿಂಗಳಿಗೆ ರು. 10 ಸಾವಿರ ರೂಪಾಯಿ ಉಳಿಯುವುದು ಕಷ್ಟವಾಗಿದ್ದು, ಬ್ಯಾಂಕ್ ಲೋನ್ ತೀರಿಸಲು ಸಾಧ್ಯವಾಗಿಲ್ಲ ಈ ಮಧ್ಯೆ ಯಾವುದೇ ಚರ್ಚೆ ನಡೆಸದೆ ದರ ಕಡಿತಗೊಳಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದರು.[ಬೆಂಗಳೂರಲ್ಲಿ ಕಾರು ಪೂಲಿಂಗ್ ಸೇವೆ ಆರಂಭಿಸಿದ ಊಬರ್]
ಆನ್ ಲೈನ್ ಪೇಮೆಂಟ್ ಆಗಿರುವುದರಿಂದ ಯಾತ್ರಿಗಳು ಎಷ್ಟು ಮೊತ್ತ ನೀಡುವರೋ ತಿಳಿಯುವುದಿಲ್ಲ. ಇದೊಂದು ಕಣ್ಣಾಮುಚ್ಚಾಲೆ ವ್ಯವಹಾರವಾಗಿದೆ ಎಂದು ದೂರಿ ಈ ಬಗ್ಗೆ ಪೊಲೀಸ್ ಕಮಿಷನರ್ ಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಮನವಿ ನೀಡಲಾಗಿದೆ ಹಾಗೂ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿಯೂ ಪ್ರಕರಣವನ್ನು ದಾಖಲಿಸಲಾಗಿದೆ. ಈಚೆಗೆ ಕಂಪನಿಯ ಕಚೇರಿಗೂ ಬೀಗ ಜಡಿದಿದೆ ಎಂದರು.