ನಾಗರಹೊಳೆ ಅರಣ್ಯದಲ್ಲಿ ಎರಡು ಹುಲಿ ಸಾವನ್ನಪ್ಪಿದ್ದು ಹೇಗೆ?
ಮೈಸೂರು, ಜನವರಿ,21: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಕಳೆದ ಕೆಲ ದಿನಗಳಿಂದ ಎರಡು ಹುಲಿಗಳು ಸಾವನ್ನಪ್ಪಿವೆ. ಅದರಲ್ಲಿ ಒಂದು ಹುಲಿ ಆಹಾರ ಸೇವಿಸಲು ಸಾಧ್ಯವಾಗದೆ, ಮತ್ತೊಂದು ಹುಲಿ ಬೇರೊಂದು ಹುಲಿ ಜೊತೆ ಕಾದಾಡಲು ಹೋಗಿ ಮೃತಪಟ್ಟಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹುಣಸೂರು ವನ್ಯ ಜೀವಿ ವಿಭಾಗದ ಕಚುವಿನಹಳ್ಳಿಯ ತಟ್ಟೆಹಳ್ಳಪಾರೆ ಬಳಿ 12ವರ್ಷದ ಹೆಣ್ಣು ಹುಲಿ, ಆನೆಚಚೌಕೂರು ವಲಯದ ಮಾವಿನ ಮರ ಹಳ್ಳದ ಬಳಿ 9 ವರ್ಷದ ಗಂಡು ಹುಲಿ ಮೃತಪಟ್ಟಿದೆ.[ಹುಲಿ, ಮೇಕೆಯ ಹಾಡು..."ಯೇ ದೋಸತಿ ಹಮ್ ನಹಿ ಛೋಡೆಂಗೆ"]
ಹೆಣ್ಣು ಹುಲಿ ಸಾಯಲು ಕಾರಣ:
ಹುಣಸೂರು ವನ್ಯ ಜೀವಿ ವಿಭಾಗದ ಕಚುವಿನಹಳ್ಳಿ ಬಳಿ ಅರಣ್ಯ ಇಲಾಖೆ ನೌಕರರು ಗಸ್ತಿನಲ್ಲಿದ್ದಾಗ ತಟ್ಟೆಹಳ್ಳಪಾರೆ ಬಳಿ 12 ವರ್ಷದ ಹೆಣ್ಣು ಹುಲಿ ಸತ್ತಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ತಿಳಿದು ಪಶುವೈದ್ಯ ಡಾ.ಉಮಶಂಕರ್ ನೇತೃತ್ವದಲ್ಲಿ ಶವಪರೀಕ್ಷೆ ನಡೆಸಿದ್ದಾರೆ.
ಈ ಹೆಣ್ಣು ಹುಲಿಗೆ ವಯಸ್ಸಾಗಿದ್ದು, ನಾಲ್ಕು ಕೋರೆ ಹಲ್ಲುಗಳು ಸವೆದು ಹೋಗಿವೆ. ಹಾಗಾಗಿ ಆಹಾರ ಸೇವಿಸಲಾಗದೆ ಮೃತಪಟ್ಟಿದೆ ಎಂದು ಪಶು ವೈದ್ಯರು ತಿಳಿಸಿದ್ದಾರೆ. ಇದರ ಕೆಲವು ಭಾಗವನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.[ಭಾರತದಲ್ಲಿ ಅಳಿವಿನ ಅಂಚಿನಲ್ಲಿದೆಯಾ ಹುಲಿ ಸಂತತಿ?]
ಗಂಡು ಹುಲಿ ಸಾವನ್ನಪ್ಪಿದ್ದು ಹೇಗೆ?
ಹುಲಿಗಳ ಕಾದಾಟದಲ್ಲಿ ಮೃತಪಟ್ಟಿದ್ದ 9 ವರ್ಷದ ಗಂಡು ಹುಲಿಯು ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಆನೆಚಚೌಕೂರು ವಲಯದ ಮಾವಿನ ಮರದ ಹಳ್ಳದ ಬಳಿ ಮತ್ತೊಂದು ಹುಲಿ ಜೊತೆ ಕಾದಾಡುವಾಗ ಸಾವನ್ನಪ್ಪಿದೆ. ಈಗಾಗಲೇ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ಹೆಚ್ಚಿನ ತನಿಖೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಹುಲಿ ಯೋಜನೆ ನಿರ್ದೇಶಕ ಡಾ.ಕಾಂತರಾಜ್ ಹೇಳಿದ್ದಾರೆ.[ಕುದುರೆಮುಖ ಇನ್ನು ಸಂರಕ್ಷಿತ ಹುಲಿಧಾಮ]
ಅರಣ್ಯ ಇಲಾಖೆ ಅಧಿಕಾರಿಗಳು ಪಶು ವೈದ್ಯ ಡಾ.ಉಮಶಂಕರ್ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸ್ವಯಂ ಸೇವಾ ಸಂಸ್ಥೆ ಮುಖ್ಯಸ್ಥರು ಮತ್ತಿತರ ಅಧಿಕಾರಿಗಳ ಸಮ್ಮುಖದಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ.