ತಾಯಿ ಹಾಲು ಸಿಗದೆ ಹುಲಿಮರಿಗಳ ದಾರುಣ ಸಾವು
ಮೈಸೂರು, ಜ. 16: ಹಸುಗೂಸಿಗೆ ಎಲ್ಲರಿಗಿಂತ ತಾಯಿಯ ಅನಿವಾರ್ಯತೆಯೇ ಹೆಚ್ಚು. ಮಗುವೊಂದು ಪರಿತ್ಯಕ್ತಗೊಂಡರೆ ಸಾವೇ ಬರುತ್ತದೆ. ಇದು ಮನುಷ್ಯರು ಮಾತ್ರವಲ್ಲ, ಪ್ರಾಣಿಗಳಿಗೂ ಅನ್ವಯಿಸುತ್ತದೆ. ಏಕೆಂದರೆ ಇದು ಪ್ರಕೃತಿ ನಿಯಮ.
"ಮೈಸೂರಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ತಾಯಿಯಿಂದ ಬೇರ್ಪಟ್ಟಿದ್ದ ಮೂರು ಹುಲಿ ಮರಿಗಳಲ್ಲಿ ಎರಡು ಹಸಿವಿನಿಂದ ಬಳಲಿ ದಾರುಣ ಸಾವನ್ನಪ್ಪಿವೆ. ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಮತ್ತೊಂದು ಮರಿಯನ್ನು ಚಿಕಿತ್ಸೆಗಾಗಿ ಮೈಸೂರು ಮೃಗಾಲಯಕ್ಕೆ ರವಾನಿಸಲಾಗಿದೆ. ಈ ಮರಿ ಪ್ರಾಣಾಪಾಯದಿಂದ ಪಾರಾಗಿದೆ" ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ. [ಚಿಕ್ಕಮಗಳೂರು ಹುಲಿಗೆ ಬೆಳಗಾವಿಯಲ್ಲೂ ಮಹಿಳೆ ಬಲಿ]
"ಮೆಟಿಕುಪ್ಪೆ ವಲಯದ ತದ್ದಹಾಲ್ ಪ್ರದೇಶದ ಪೊದೆಯೊಂದರ ಒಳಗೆ ಸಿಕ್ಕಿರುವ ಮೂರೂ ಮರಿಗಳಿಗೆ 6ರಿಂದ 8 ತಿಂಗಳು ವಯಸ್ಸಾಗಿತ್ತು. ಅವು ಇನ್ನೂ ಹಾಲನ್ನೇ ಆಹಾರವಾಗಿ ಸೇವಿಸುವ ಹಂತದಲ್ಲಿವೆ. ಆದರೆ, ತಾಯಿಯಿಂದ ಬೇರ್ಪಟ್ಟಿದ್ದ ಕಾರಣ ಆಹಾರ ಸಿಗದೆ ಹಸಿವಿನಿಂದ ಸಾವನ್ನಪ್ಪಿವೆ" ಎಂದು ರಾಷ್ಟ್ರೀಯ ಉದ್ಯಾನದ ನಿರ್ದೇಶಕ ಆರ್. ಗೋಕುಲ್ ತಿಳಿಸಿದ್ದಾರೆ. [ಶಿವಮೊಗ್ಗದಲ್ಲಿ ಮನೆಗಾವಲಿಗೆ ಹುಲಿ ಮರಿ!]