ಬಂಡೀಪುರದಲ್ಲಿ ಕಳ್ಳರ ಹುಡುಕಾಟ ನಡೆಸುವ ಸಿಸಿ ಕ್ಯಾಮರಾ ಕಳವು
ಮೈಸೂರು, ಡಿಸೆಂಬರ್, 21: ಬಂಡೀಪುರ ಅರಣ್ಯದೊಳಕ್ಕೆ ಅಕ್ರಮವಾಗಿ ಪ್ರವೇಶ ಮಾಡುವ ಬೇಟೆಗಾರರು, ಮರಗಳ್ಳರು ಹಾಗೂ ಪ್ರಾಣಿಗಳ ಚಲನವಲನ ವೀಕ್ಷಿಸಲು ಅಳವಡಿಸಿದ್ದ ಸಿಸಿ ಕ್ಯಾಮರಾಗಳೇ ನಾಪತ್ತೆಯಾಗಿದೆ.
ಬಂಡೀಪುರ ವ್ಯಾಪ್ತಿಯ ಮದ್ದೂರು ಅರಣ್ಯ ಪ್ರದೇಶದಲ್ಲಿ ಅಳವಡಿಸಿರುವ ಕ್ಯಾಮರಾಗಳ ಪೈಕಿ ಎರಡು ಕ್ಯಾಮರಾಗಳು ನಾಪತ್ತೆಯಾಗಿದ್ದು, ಅಕ್ರಮ ಚಟುವಟಿಕೆಯಲ್ಲಿ ತೊಡಗಿರುವ ತಂಡಗಳ ಕೈವಾಡ ಇದ್ದಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.[ಬಂಡೀಪುರ, ನಾಗರಹೊಳೆಯಲ್ಲಿ ವನ್ಯಮೃಗಗಳ ದಹನ!]
ಅರಣ್ಯದೊಳಗೆ ಆಯ್ದ ಸ್ಥಳದಲ್ಲಿ ಮಾತ್ರ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಅರಣ್ಯ ಸಿಬ್ಬಂದಿಗಳು ಈ ಕ್ಯಾಮರಾ ಮೂಲಕ ಏನಾದರೂ ಕಳುವಾಗಿದೆಯೋ, ಅನಾಹುತವಾಗಿದೆಯೋ ಎಂಬುದನ್ನು ನೋಡುತ್ತಿದ್ದರು.
ಈ ನಡುವೆ ಎರಡು ಸಿಸಿ ಕ್ಯಾಮರ ನಾಪತ್ತೆಯಾಗಿರುವುದು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದಿದೆ. ದುಷ್ಕರ್ಮಿಗಳು ಎರಡು ಕ್ಯಾಮರಾವನ್ನು ಅದರ ಬಾಕ್ಸ್ ಸಹಿತ ಹೊತ್ತೊಯ್ದಿದ್ದಾರೆ.[ಬೆಂಗಳೂರಿಗೆ ಹೇಳಿ ಒಂದು ದಿನ ಗುಡ್ ಬೈ]
ಈ ಸಂಬಂಧ ಸಹಾಯಕ ವಲಯ ಅರಣ್ಯಾಧಿಕಾರಿ ಡಿ.ಬಿ.ಸ್ವಾಮಿ ಅವರು ಗುಂಡ್ಲುಪೇಟೆ ಠಾಣೆಗೆ ದೂರು ನೀಡಿದ್ದು, ಎಸ್ಐ ಸಂದೀಪ್ ಕುಮಾರ್ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.