ನಾಳೆಯಿಂದ ಮೈಸೂರಿನಲ್ಲಿ ಟ್ರಿಣ್ ಟ್ರಿಣ್ ರಿಂಗಣ
ಮೈಸೂರು ಜಿಲ್ಲಾಡಳಿತ ಹಾಗೂ ಮೈಸೂರು ಮಹಾನಗರಪಾಲಿಕೆ ಜಂಟಿಯಾಗಿ ರೂಪಿಸಿರುವ ಟ್ರಿಣ್ ಟ್ರಿಣ್ ಯೋಜನೆಯ ವಿದ್ಯುಕ್ತ ಉದ್ಘಾಟನೆ ಹಲವಾರು ದಿನಗಳಿಂದ ಮುಂದೂಡುತ್ತಲೇ ಇತ್ತು. ಆದರೆ, ಈಗ ಅದಕ್ಕೆ ಕಾಲ ಕೂಡಿ ಬಂದಿದೆ.
ಮೈಸೂರು, ಮೇ 20 : ಹಲವು ದಿನಗಳಿಂದ ಮುಂದೂಡುತ್ತಲೇ ಬಂದಿದ್ದ ದೇಶದ ಮೊದಲ ಸಾರ್ವಜನಿಕ ಬೈಸಿಕಲ್ ಹಂಚಿಕೆ (ಪಿಬಿಎಸ್) ಯೋಜನೆ ಟ್ರಿಣ್ ಟ್ರಿಣ್ ಗೆ ಮೇ 20ರ ನಾಳೆ ವಿದ್ಯುಕ್ತ ಚಾಲನೆ ದೊರೆಯಲಿದ್ದು ಸಾಂಸ್ಕತಿಕ ನಗರಿ ಮೈಸೂರಿನಲ್ಲಿ ಟ್ರಿಣ್ ಟ್ರಿಣ್ ಸದ್ದು ರಿಂಗಣಿಸಲಿದೆ.
ಕೇಂದ್ರದ ನಗರ ರಸ್ತೆ ಸಾರಿಗೆ ಇಲಾಖೆ ಪರಿಸರ ಸ್ನೇಹಿ ಯೋಜನೆಯನ್ನು ಮೈಸೂರಿನಲ್ಲಿ ಮೊದಲ ಬಾರಿಗೆ ಆರಂಭಿಸಲು ಉತ್ಸಾಹ ತೋರಿಸಿ ಜಿಲ್ಲಾಡಳಿತ ಹಾಗೂ ಮೈಸೂರು ಮಹಾನಗರಪಾಲಿಕೆ ಜಂಟಿಯಾಗಿ ರೂಪಿಸಿರುವ ಟ್ರಿಣ್ ಟ್ರಿಣ್ ಯೋಜನೆ ಹಲವು ದಿನಗಳಿಂದ ಚಾಲನೆಗೊಳ್ಳದೆ ಮುಂದೂಡುತ್ತಲೇ ಇತ್ತು.[ಟ್ರಿಣ್ ಟ್ರಿಣ್ ಪರಿಸರ ಸ್ನೇಹಿ ಸೈಕಲ್ ತುಳಿದ ಮೈಸೂರಿನ ಡಿಸಿ]
ಜಿಲ್ಲಾಧಿಕಾರಿ ರಂದೀಪ್ ಅವರು ಸಾಂಕೇತಿಕವಾಗಿ ಚಾಲನೆ ನೀಡಿದ್ದರಾದರೂ ಯೋಜನೆಗೆ ವಿದ್ಯುಕ್ತವಾಗಿ ಚಾಲನೆ ದೊರೆತಿರಲಿಲ್ಲ. ಇದೀಗ ವಿದ್ಯುಕ್ತ ಉದ್ಘಾಟನೆಗೆ ಮುಹೂರ್ತ ನಿಗದಿಯಾಗಿದ್ದು ಮೇ 20ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.
ಮೈಸೂರು ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟ ಮತ್ತು ತಪ್ಪಲು, ರೈಲ್ವೇ ನಿಲ್ದಾಣ, ಸಿಟಿ ಹಾಗೂ ಸಬರ್ಬ್ ಬಸ್ ನಿಲ್ದಾಣ, ರಾಮಸ್ವಾಮಿ ವೃತ್ತ, ಆರ್ಟಿಓ ವೃತ್ತ, ಒಂಟಿಕೊಪ್ಪಲ್ ಆಕಾಶವಾಣಿ, ಸರಸ್ವತಿಪುರಂ ಅಗ್ನಿಶಾಮಕ ದಳ, ಬಲ್ಲಾಳ್ ವೃತ್ತ, ಮಿನಿ ವಿಧಾನಸೌಧ, ನಜರ್ಬಾದ್ ಸೇರಿದಂತೆ ನಗರದ ಒಟ್ಟು 52 ಡಾಕಿಂಗ್ ಸೆಂಟರ್ ಗಳು ವಾರ್ವಜನಿಕರ ಬಳಕೆಗೆ ಮುಕ್ತವಾಗಲಿವೆ. ಆ ಮೂಲಕ ನಗರದೆಲ್ಲೆಡೆ ಟ್ರಿನ್ ಟ್ರಿನ್ ಸದ್ದು ಜೋರಾಗಿ ಕೇಳಿಸಲಿದೆ.