ಮೈಸೂರು : ಕರ್ತವ್ಯ ನಿರತ ಸಂಚಾರಿ ಪೊಲೀಸ್ ಮೇಲೆ ಹಲ್ಲೆ
ಮೈಸೂರು, ಆ.08 : ಕರ್ತವ್ಯ ನಿರತ ಎಎಸ್ಐ ಮೇಲೆ ಬೈಕ್ ಸವಾರ ಹಲ್ಲೆ ನಡೆಸಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಎಎಸ್ಐ ಈ ಕುರಿತು ನಜಾರಾಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸಿದ್ಧಾರ್ಥ ನಗರದ ಸಂಚಾರಿ ಠಾಣೆಯ ಎಎಸ್ಐ ಪದ್ಮನಾಭ ಅವರ ಮೇಲೆ ಹಲ್ಲೆ ನಡೆಸಿ, ಶರ್ಟ್ ಹರಿದು ಹಾಕಲಾಗಿದೆ. ಎಂದಿನಂತೆ ಪದ್ಮನಾಭ ಅವರು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾಗ ಮನೀಶ್ ಎಂಬಾತ ಅವರ ಮೇಲೆ ಹಲ್ಲೆ ನಡೆಸಿ, ಪರಾರಿಯಾಗಿದ್ದಾನೆ.
ಲಷ್ಕರ್ ಮೊಹಲ್ಲಾದ ಮನೀಶ್ ಹೆಲ್ಮೆಟ್ ಧಸಿಸದೇ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದ. ಪದ್ಮನಾಭ ಅವರು ಬೈಕ್ ನಿಲ್ಲಿಸಿ ಪ್ರಶ್ನಿಸಲು ಹೋದಾಗ ಆತ ಪರಾರಿಯಾಗಲು ಪ್ರಯತ್ನ ನಡೆಸಿದೆ. ನಂತರ ಬೈಕ್ ನಿಂದ ಕೆಳಗೆ ಬಿದ್ದ.
ನಂತರ ಹೆಲ್ಮೆಟ್ ಹಾಕದಿದ್ದರೆ ಪ್ರಶ್ನೆ ಮಾಡ್ತಿರಾ?, ಮೊದಲು ರಸ್ತೆ ರಿಪೇರಿ ಮಾಡಿಸಿ ಎಂದು ಪದ್ಮನಾಭ ಅವರ ಜೊತೆ ಜಗಳವಾಡಿ ಹಲ್ಲೆ ಮಾಡಿದ್ದಾನೆ. ತನಗೆ ದೊಡ್ಡ ದೊಡ್ಡ ರಾಜಕೀಯ ನಾಯಕರ ಪರಿಚಯ ಇದೆ ಎಂದು ಕೂಗಾಡಿ ಬೈಕ್ ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.
ಈ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಸ್ ಐ ಪದ್ಮನಾಭ ಅವರು ನಜರಾಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹೆಲ್ಮೆಟ್ ಧರಿಸದೇ ಸಂಚಾರ ನಡೆಸುವುದು, ಹೆಚ್ಚಿನ ಶಬ್ದ ಮಾಡುವ ಬೈಕ್ ಗಳನ್ನು ಓಡಿಸುವುದು ಹೆಚ್ಚುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.