ನಾಮಪತ್ರ ಸಲ್ಲಿಕೆ: ಚಿತ್ರಗಳಲ್ಲಿ ಉಪಚುನಾವಣೆ ರಂಗು
ಉಪಚುನಾವಣೆಯ ಕಾವೇರಿರುವ ಅರಮನೆ ನಗರಿ ಇಂದು ಘಟಾನುಘಟಿಗಳ ನಾಮಪತ್ರ ಸಲ್ಲಿಕೆಗೆ ಸಾಕ್ಷಿಯಾಯಿತು.
ಮೈಸೂರು ಮಾರ್ಚ್ 20: ಏ. 9 ರಂದು ನಡೆಯಲಿರುವ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣಾ ಕಣ ರಂಗೇರಿದ್ದು ಇಂದು ಘಟಾನುಘಟಿಗಳೆಲ್ಲ ತಮ್ಮ ನಾಮಪತ್ರ ಸಲ್ಲಿಸಿದರು. ಅಭ್ಯರ್ಥಿಗಳ ಉತ್ಸಾಹದೆದುರು ಬಿಸಿಲ ಝಳವೂ ಲೆಕ್ಕಕ್ಕೆ ಬರಲಿಲ್ಲ!
ಬಿಜೆಪಿ ಮತ್ತು ಕಾಂಗ್ರೆಸ್ ಉಭಯ ಪಕ್ಷಗಳಿಗೂ ಈ ಉಪಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಈಗಾಗಲೇ ಎರಡೂ ಪಕ್ಷಗಳೂ ಗೆಲುವಿಗಾಗಿ ಅವಿರತ ಪ್ರಚಾರ ಮಾಡುತ್ತಿವೆ.
ಗುಂಡ್ಲುಪೇಟೆ ಶಾಸಕರಾಗಿದ್ದ ಮಹದೇವ ಪ್ರಸಾದ್ ಅವರ ಅಕಾಲಿಕ ನಿಧನ ಮತ್ತು ನಂಜನಗೂಡು ಕ್ಷೇತ್ರದ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಪ್ರಸಾದ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರಿಂದಾಗಿ ತೆರವಾಗಿದ್ದ ಈ ಎರಡು ಕ್ಷೇತ್ರಗಳಿಗೆ ಏಪ್ರಿಲ್ 9 ರಂದು ಉಪಚುನಾವಣೆ ನಡೆಯುತ್ತಿದೆ.
ಇಂದು ಚುನಾವಣಾಧಿಕಾರಿ ಜೆ.ಜಗದೀಶ್ ಅವರಿಗೆ ನಂಜನಗೂಡು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವ ಮೂರ್ತಿ, ಜೊತೆಗೆ ಗುಂಡ್ಲುಪೇಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವ ಪ್ರಸಾದ್ ಮತ್ತು ಬಿಜೆಪಿ ಅಭ್ಯರ್ಥಿ ಇಂದು ನಾಮಪತ್ರ ಸಲ್ಲಿಸಿದರು.[ನಾಮಪತ್ರ ಸಲ್ಲಿಕೆ ವೇಳೆ ಮಾತಿನ ಚಕಮಕಿ-ಲಘುಲಾಠಿ ಪ್ರಹಾರ]
ಬೆಂಬಲಿಗರೊಡನೆ ಕಾಂಗ್ರೆಸ್ ಅಭ್ಯರ್ಥಿ
ಕಾಂಗ್ರೆಸ್ ಬಾವುಟಗಳನ್ನ ಹಿಡಿದು ಜೈಕಾರ ಕೂಗುತ್ತ, ಶಾಸಕ ಸತೀಶ್ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ, ಸಚಿವ ಯು.ಟಿ ಖಾದರ್ , ಶಾಸಕರಾದ ವಾಸು, ಪುಟ್ಟರಂಗಶೆಟ್ಟಿ, ಸಂಸದ ಧೃವನಾರಾಯಣ್, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ವಿಧಾನಪರಿಷತ್ತು ಸದಸ್ಯ ರಿಜ್ವಾನ್ ಅರ್ಷದ್ ಸೇರಿದಂತೆ ಹಲವು ಮುಖಂಡರು ಕಳಲೆ ಕೇಶವಮೂರ್ತಿಯವರಿಗೆ ನಾಮಪತ್ರ ಸಲ್ಲಿಕೆಗೆ ಜೊತೆಯಾದರು. ಗುಂಡ್ಲುಪೇಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವ ಪ್ರಸಾದ್ ಕೂಡ ಇಂದು ನಾಮಪತ್ರ ಸಲ್ಲಿಸಿದರು.
ಬಿಜೆಪಿ ಅಭ್ಯರ್ಥಿಗೂ ಜೈಯಕಾರ
ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಅವರ ಹಿಂದೆಯೂ ನೂರಾರು ಜನರಿದ್ದು, ನಾಮಪತ್ರ ಸಲ್ಲಿಕೆಗೆ ಸಾಕ್ಷಿಯಾದರು. ಮಾಜಿ ಸಚಿವ ಶ್ರೀರಾಮುಲು, ಬಿಜೆಪಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನಪ್ಪ ಇವರೊಂದಿಗೆ ಹಾಜರಿದ್ದರು. ಗುಂಡ್ಲುಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಿರಂಜನ ಕುಮಾರ್ ಸಹ ಇದೇ ಸಂದರ್ಭದಲ್ಲಿ ನಾಮಪತ್ರ ಸಲ್ಲಿಸಿದರು.
ರಂಗೇರಿತು ಚುನಾವಣೆ
ನಾಮಪತ್ರ ಸಲ್ಲಿಕೆಗೂ ಮುನ್ನ ಎರಡು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡ್ಡಿಯೂರಪ್ಪ ಮೆರವಣಿಗೆಯಲ್ಲಿ ಭಾಗವಹಿಸಿದ್ದು, ಉಪಚುನಾವಣೆಯ ರಂಗನ್ನು ಮತ್ತಷ್ಟು ಹೆಚ್ಚಿಸಿತ್ತು.
ಮಾತಿನ ಚಕಮಕಿ-ಲಘುಲಾಠಿ ಪ್ರಹಾರ
ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ನಿರಂಜನಕುಮಾರ್ ಮತ್ತು ಡಾ.ಗೀತಾ ಮಹದೇವಪ್ರಸಾದ್ ನಾಮಪತ್ರ ಸಲ್ಲಿಸಸುತ್ತಿದ್ದ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪೊಲೀಸರು ಮಧ್ಯಪ್ರವೇಶಿಸಿ ಲಘುಲಾಠಿ ಪ್ರಹಾರ ನಡೆಸಿ, ಪರಿಸ್ಥಿತಿಯನ್ನು ತಹಬಂದಿಗೆ ತಂದಿದ್ದಾರೆ ಎನ್ನಲಾಗಿದೆ.
ಯಾರಿಗೆ ವಿಜಯಲಕ್ಷ್ಮಿ?
ನಾಮಪತ್ರ ಸಲ್ಲಿಕೆಗೆ ಮಾರ್ಚ್ 21 ಕೊನೆಯ ದಿನವಾಗಿದ್ದು, ಏಪ್ರಿಲ್ 9 ರಂದು ನಡೆಯುವ ಚುನಾವಣೆಯ ಫಲಿತಾಂಶ ಏಪ್ರಿಲ್ 13 ರಂದು ಹೊರಬೀಳಲಿದೆ. 2018 ರ ವಿಧಾನ ಸಭಾ ಚುನಾವಣೆಯ ದಿಕ್ಸೂಚಿ ಎಂದೇ ಕರೆಸಿಕೊಂಡಿರುವ ಚುನಾವಣೆಯಲ್ಲಿ ವಿಜಯಲಕ್ಷ್ಮಿ ಯಾರಿಗೆ ಒಲಿಯಲಿದ್ದಾಳೆ ಎಂಬುದನ್ನು ಕಾದು ನೋಡಬೇಕು.