'ಕಾಂಗ್ರೆಸ್ ಗೆ ಕಪ್ಪ' ವಿಚಾರದಲ್ಲಿ ವಿವಾದದ ಕಿಡಿ ಹೊತ್ತಿಸಿದ ವಿಶ್ವನಾಥ್
ಹೈಕಮಾಂಡ್ ನ ಹಿಡಿತದಲ್ಲಿ ಇಟ್ಟುಕೊಳ್ಳುವುದಕ್ಕೆ ಕಪ್ಪ ಕೊಟ್ಟಿರಲೂಬಹುದು ಎಂದಿದ್ದಾರೆ ಮಾಜಿ ಸಚಿವ ಎಚ್ ವಿಶ್ವನಾಥ್. ಅಂದರೆ ಕೊಟ್ಟರೆ ಕಾಂಗ್ರೆಸ್ ಹೈಕಮಾಂಡ್ ಹಣ ತೆಗೆದುಕೊಳ್ಳುತ್ತಾ ಎಂಬ ಪ್ರಶ್ನೆ ಉದ್ಭವಿಸಲ್ಲವೆ? ವಿಶ್ವನಾಥ್ ಉತ್ತರಿಸಬೇಕು
ಮೈಸೂರು, ಫೆಬ್ರವರಿ 24: ಹೈಕಮಾಂಡ್ ಅನ್ನು ಬಿಗಿ ಹಿಡಿದಿಟ್ಟುಕೊಳ್ಳಲು ಕಪ್ಪ ನೀಡಿರಲೂಬಹುದು. ಎಲ್ಲ ಅಂಶಗಳ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಮೈಸೂರಿನಲ್ಲಿ ಶುಕ್ರವಾರ ಹೇಳಿದರು.
ಕಾಂಗ್ರೆಸ್ ಹೈಕಮಾಂಡ್ ಗೆ ಕಪ್ಪ ಸಲ್ಲಿಕೆಯಾಗಿದೆ ಎಂದು ಸುದ್ದಿಯಾಗಲು ಕಾರಣವಾಗಿರುವ ಡೈರಿ ಯಾರ ಮನೆಯಲ್ಲಿ ಸಿಕ್ಕಿತೋ, ಆತನ ಮೇಲೆ ದೂರು ದಾಖಲಾಗಬೇಕು ಎಂದು ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾಗಿರುವ ವಿಧಾನಪರಿಷತ್ ಸದಸ್ಯ ಗೋವಿಂದರಾಜು ಚಾರಿತ್ರ್ಯ ಸರಿಯಿಲ್ಲ ಎಂದು ಮೊದಲೇ ಗೊತ್ತಿತ್ತು. ಆದರೂ ಅವರನ್ನು ಸಂಸದೀಯ ಕಾರ್ಯದರ್ಶಿ ಮಾಡಿಕೊಂಡಿದ್ದಾರೆ. ಇಡೀ ಪ್ರಕರಣದ ಜವಾಬ್ದಾರಿಯನ್ನು ಗೋವಿಂದರಾಜು ಹೊರಬೇಕು ಎಂದಿದ್ದಾರೆ.['ಡೊನೇಶನ್ ಗೇಟ್' ಹಗರಣದ ಕೇಂದ್ರ ಬಿಂದು, ಯಾರು ಈ ಗೋವಿಂದರಾಜ್?]
ಈ ಪ್ರಕರಣದಲ್ಲಿ ಷಡ್ಯಂತ್ರ ನಡೆದಿದೆ ಅನ್ನೋದು ಮಾತ್ರ ಸತ್ಯ. ಈ ಷಡ್ಯಂತ್ರ ಬಿಜೆಪಿ ಹಾಗೂ ಗೋವಿಂದರಾಜುವಿನಿಂದಲೂ ಆಗಿರಬಹುದು. ಆದರೆ ಈ ಘಟನೆಯ ಸತ್ಯಾಂಶ ಕಾಂಗ್ರೆಸ್ ಕಾರ್ಯಕರ್ತರಿಗೆ ಹಾಗೂ ರಾಜ್ಯದ ಜನರಿಗೆ ಗೊತ್ತಾಗಬೇಕಿದೆ. ಆದರೆ ಕೆಪಿಸಿ ಅಧ್ಯಕ್ಷರು ಯಾಕೆ ಮೌನವಾಗಿದ್ದಾರೋ ಗೊತ್ತಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಯಾವ ಕ್ಷೇತ್ರದಲ್ಲೂ ಈಗ ಪಾವಿತ್ರ್ಯ ಉಳಿದುಕೊಂಡಿಲ್ಲ. ಇಡೀ ಇಲಾಖೆ ಅಷ್ಟೇ ಅಲ್ಲ, ರಾಜಕೀಯ ಸೇರಿದಂತೆ ಯಾವ ಕ್ಷೇತ್ರದಲ್ಲೂ ಪಾವಿತ್ರ್ಯ ಉಳಿದಿಲ್ಲ ಎಂದು ಹೇಳಿದ ಅವರು, ಪಾವಿತ್ರ್ಯ ಅನ್ನೋ ಪದವೇ ಅಪವಿತ್ರವಾಗಿ ಹೋಗಿದೆ. ಡೈರಿ ದಾಖಲೆ ಹೇಗೆ ಹೊರಗೆ ಬಂತು ಅನ್ನೋ ವಿಷಯವೂ ತನಿಖೆ ಆಗಬೇಕಿದೆ ಎಂದರು.[ಡೊನೇಷನ್ ಗೇಟ್ ಹಗರಣ : ಯಾರು ಏನು ಹೇಳುತ್ತಿದ್ದಾರೆ?]
ರಾಜಕೀಯ ಪಕ್ಷಗಳಿಗೆ ದೇಣಿಗೆ ಕೊಡೋದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಈಗಿನ ಡೈರಿ ವಿಷಯ ಜನರನ್ನು ದಾರಿ ತಪ್ಪಿಸುವ ಕೆಲಸ ಎಂದು ವಿಶ್ವನಾಥ್ ಹೇಳಿದ್ದಾರೆ.