ಜೋಡಿ ಮಾರ್ಗಕ್ಕಾಗಿ ಟಿಪ್ಪು ಮದ್ದಿನಮನೆ ಸ್ಥಳಾಂತರ : ಪ್ರತಾಪ್ ಸಿಂಹ
ಮೈಸೂರು , ಫೆಬ್ರವರಿ 23 : ಟಿಪ್ಪು ಮದ್ದಿನ ಮನೆ ಇದೆ ಎಂಬ ಕಾರಣಕ್ಕಾಗಿ ಬೆಂಗಳೂರು ಮತ್ತು ಮೈಸೂರು ನಡುವೆ 10 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಜೋಡಿ ರೈಲು ಮಾರ್ಗಕ್ಕೆ ಇತಿಶ್ರೀ ಹಾಡುವುದಾಗಿ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಶ್ರೀರಂಗಪಟ್ಟಣದ ಬಳಿ ಇರುವ ಟಿಪ್ಪುವಿನ ಮದ್ದಿನ ಮನೆಗಳಿಗೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅವರು, ಈ ಮಹತ್ವದ ಜೋಡಿ ಮಾರ್ಗವನ್ನು ಕೂಡಲೆ ಕಾರ್ಯರೂಪಕ್ಕೆ ತರುವುದಾಗಿ ನುಡಿದರು.
ಟಿಪ್ಪುವಿನ ಮದ್ದಿನ ಮನೆ ಇರುವುದರಿಂದ ಯಾವ ರೀತಿ ರೈಲು ಮಾರ್ಗವನ್ನು ನಿರ್ಮಿಸಬೇಕೆನ್ನುವುದೇ ಗೊಂದಲವಾಗಿ ಇನ್ನೂ ಕಾಮಗಾರಿ ಕೈಗೆತ್ತಿಕೊಳ್ಳದೇ ಸ್ಥಗಿತಗೊಳಿಸಲಾಗಿತ್ತು. ಅದಕ್ಕೆ ಒಂದು ಇತಿಶ್ರೀ ಹಾಡಲು ಸಂಸದ ಪ್ರತಾಪ್ ಸಿಂಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಜಾಗದಿಂದ 100 ಮೀಟರ್ ಅಂತರದಲ್ಲಿ ಒಳಗಡೆ ಟಿಪ್ಪು ಮದ್ದಿನ ಮನೆಯನ್ನು ಜರುಗಿಸಿ ನಂತರ ಕಾಮಗಾರಿ ಆರಂಭಿಸಲಾಗುತ್ತದೆ. ಏಪ್ರಿಲ್ ಒಳಗಡೆ ಜೋಡಿಮಾರ್ಗ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಕೇಂದ್ರ ಸರ್ಕಾರ ಇದಕ್ಕೆ ಅನುಮತಿ ನೀಡಿದೆ. ಇನ್ನು ಮಾರ್ಚ್ 3ರಂದು ಮದ್ದಿನ ಮನೆಯನ್ನು ಸ್ಥಳಾಂತರಗೊಳ್ಳಲಿದ್ದು, ಇದು 2 ದಿನಗಳವರೆಗೂ ನಡೆಯಲಿದೆ. ಸುಮಾರು 13 ಕೋಟಿ ವೆಚ್ಚದ ಕಾಮಗಾರಿ ಇದಾಗಿದೆ. ಭಾರತ ಹಾಗೂ ವಿದೇಶಿ ಕಂಪನಿಯ ಗುತ್ತಿಗೆ ಆಧಾರದ ಮೇಲೆ ಈ ಕಾಮಗಾರಿ ನಡೆದಿದ್ದು, ಏಪ್ರಿಲ್ ಅಂತ್ಯದೊಳಗಾಗಿ ಡಬಲ್ ಟ್ರ್ಯಾಕ್ ಜನರ ಉಪಯೋಗಕ್ಕೆ ಅಣಿಗೊಳ್ಳಲಿದೆ ಎಂದು ತಿಳಿಸಿದರು.
ಈ ಸಂದರ್ಭ ಹಿರಿಯ ಅಧಿಕಾರಿಗಳು, ಪ್ರಾಚ್ಯವಸ್ತು ಸಂಗ್ರಹಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.