ಖಾದ್ಯ ಪ್ರಿಯರಿಗೆ ಈ ಬಾರಿ ದಸರೆಯಲ್ಲಿ ಹಬ್ಬವೋ ಹಬ್ಬ!
ಈ ಬಾರಿಯ ದಸರಾ ಸಂಭ್ರಮದ ವೇಳೆ, ಮೈಸೂರಿನ ಮೂರು ಕಡೆ ಆಹಾರ ಮೇಳ ನಡೆಸಲು ಜಿಲ್ಲಾಡಳಿತ ನಿರ್ಧಾರ. ಜಿಲ್ಲಾಧಿಕಾರಿ, ಜಿಪಂ ಸದಸ್ಯರ ಸಭೆಯಲ್ಲಿ ನಡೆದ ಆಹಾರ ಮೇಳ ಉಪಸಮಿತಿಯ ಪ್ರಾಥಮಿಕ ಸಭೆಯಲ್ಲಿ ನಿರ್ಧಾರ.
ಮೈಸೂರು, ಆಗಸ್ಟ್ 12 : ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಈ ಬಾರಿ ಹೊಸತನದೊಂದಿಗೆ ನಗರದ 3 ಸ್ಥಳಗಳಲ್ಲಿ ಆಹಾರ ಮೇಳ ಯೋಜಿಸಲು ಚಿಂತನೆ ನಡೆಸಲಾಗಿದೆ.
ದಸರಾ ಉಪವಿಶೇಷಾಧಿಕಾರಿಯೂ ಆದ ಜಿಲ್ಲಾ ಪಂಚಾಯಿತಿ ಸಿಇಓ ಶಿವಶಂಕರ್ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಸಭೆಯಲ್ಲಿ ನಡೆದ ಆಹಾರ ಮೇಳ ಉಪಸಮಿತಿಯ ಪ್ರಾಥಮಿಕ ಸಭೆ ನಡೆಸಿ ಹಲವು ವಿಚಾರಗಳ ಬಗ್ಗೆ ಚರ್ಚಿಸಲಾಯಿತು. ದಸರಾ ಉನ್ನತ ಮಟ್ಟದ ಸಮಿತಿ ಹಾಗೂ ಕಾರ್ಯಕಾರಿ ಸಮಿತಿ ಸೂಚನೆ ಮೇರೆಗೆ ನಗರದ 3 ಕಡೆಗಳಲ್ಲಿ ಆಹಾರ ಮೇಳ ಏರ್ಪಡಿಸಲು ನಿರ್ಧರಿಸಲಾಯಿತು.
ಎಂದಿನಂತೆ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದ ಜೊತೆಗೆ ಲಲಿತ ಮಹಲ್ ಪ್ಯಾಲೇಸ್ ಸಮೀಪದ ಖಾಲಿ ಪ್ರದೇಶ, ಸಿದ್ಧಿಕ್ಕಿ ನಗರ ಬೆಂಗಳೂರು ರಸ್ತೆಯಲ್ಲಿ ರಾಯಲ್ ಫಂಕ್ಷನ್ ಹಾಲ್ ಸಮೀಪ ಅಥವಾ ಉದಯಗಿರಿಯಲ್ಲಿ ಈ ಬಾರಿ ಆಹಾರ ಮೇಳ ನಡೆಸಲು ಚಿಂತನೆ ನಡೆಸಲಾಗಿದ್ದು, ಸ್ಥಳ ಪರಿಶೀಲನೆ ನಡೆಸಿ, ಸಾಧಕ -ಭಾದಕಗಳನ್ನು ಪರಾಮರ್ಶಿಸಿದ ನಂತರ ಅಂತಿಮಗೊಳಿಸಲು ತೀರ್ಮಾನಿಸಲಾಯಿತು.
ಆಹಾರ ಮೇಳದಲ್ಲಿ ಭಾಗವಹಿಸುವ ಹಾರ ತಯಾರಕರು ಮತ್ತು ವ್ಯಾಪಾರಿಗಳನ್ನು ಸರ್ಕಾರಿ ಆಹಾರ ಸಂಸ್ಥೆಗಳು, ಪ್ರಾಯೋಜಕರು ಹಾಗೂ ಮುಕ್ತವಲಯ ವಿಭಾಗಗಳಿಂದ ಆಯ್ಕೆ ಮಾಡಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಬಾರಿ ಯಾವ ಸಂದೇಶದಡಿ ಮೇಳ ಏರ್ಪಡಿಸಬೇಕು. ಸಂಕೇತ ಚಿತ್ರ ಯಾವುದಿರಬೇಕು ಎಂಬುದರ ಬಗ್ಗೆ ಕೆಲ ದಿನಗಳಲ್ಲೇ ಪ್ರಕಟಿಸಲು ಕಾಯ್ದಿರಿಸಲಾಯಿತು.
ಸಾಂಪ್ರದಾಯಿಕ ಆಹಾರ ಖಾದ್ಯ ಸೇರಿದಂತೆ ದೇಶ, ವಿದೇಶಗಳ ಖಾದ್ಯಗಳನ್ನು ಪರಿಚಯಿಸುವ ಸಲುವಾಗಿ ಖಂಡಾಂತರ ಹಾರ ಪದ್ಧತಿಯನ್ನು ಈ ಬಾರಿಯ ಆಹಾರ ಮೇಳದಲ್ಲಿ ಕಾಣಬಹುದಾಗಿದೆ. ಜೊತೆಗೆ ಎಂದಿನಂತೆ ಆಹಾರ ತಯಾರಿ, ತಿಂಡಿ ತಿನಿಸು ಸೇವನೆ ಸ್ಪರ್ಧೆ, ವಿಚಾರ ಗೋಷ್ಠೀಗಳೂ ನಡೆಯಲಿದೆ. ಒಟ್ಟಾರೆ ಈ ಬಾರಿ ಆಹಾರ ಮೇಳದಲ್ಲಿ ಹೊಸತನ ಕಾಣಬಹುದಾಗಿದೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಹಿರಿಯ ಉಪನಿರ್ದೇಶಕ ಕಾ.ರಾಮೇಶ್ವರಪ್ಪ ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿದ ಆಹಾರ ಉಪಸಮಿತಿಯ ಉಪವಿಶೇಷಾಧಿಕಾರಿ ವಿ, ಶಿವಶಂಕರ್, ಬೆಂಗಳೂರು ಹಾಗೂ ತಿ ನರಸೀಪುರ ರಸ್ತೆಗಳ ಭಾಗಗಳಲ್ಲಿ ಆಹಾರ ಮೇಳ ನಡೆಸಲು ಚಿಂತನೆ ನಡೆಸಲಾಗಿದೆ. ಇದಕ್ಕೆ ವಿಶಾಲವಾದ ಮೈದಾನ, ಕುಡಿಯುವ ನೀರಿನ ಸೌಲಭ್ಯ, ವಾಹನ ನಿಲುಗಡೆಗೆ ಜಾಗ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳು ಇರಬೇಕು.
ಇದಕ್ಕಾಗಿ 4 ಜನರ ಸಮಿತಿಯೊಂದನ್ನು ರಚಿಸಲಾಗಿದೆ. ಅವರು ಸ್ಥಳ ಪರಿಶೀಲನೆ ನಡೆಸಿ ಜಾಗಗಗಳನ್ನು ಗುರುತಿಸಲಿದ್ದಾರೆ. ಅ.16 ಅಥವಾ 17 ರಂದು ಇದು ಅಂತಿಮಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.