ಈ ಹಳ್ಳಿಯಲ್ಲಿ ಸತ್ತರೆ ಮಣ್ಣು ಮಾಡುವವರೂ ಗತಿಯಿಲ್ಲ!
ಮೈಸೂರು, ಆಗಸ್ಟ್ 16 : 'ಹಳ್ಳಿಗಳು ವೃದ್ಧರ ಆಶ್ರಯತಾಣಗಳಾಗುತ್ತಿವೆ, ಯುವಕರೆಲ್ಲ ಪಟ್ಟಣ ಸೇರುತ್ತಿದ್ದಾರೆ' ಎಂಬ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೇ, ಕಳೆದ ಕೆಲ ವರ್ಷಗಳಿಂದ ಸಮರ್ಪಕವಾಗಿ ಮಳೆಯಾಗದೆ ಕೃಷಿಯೂ ನೆಲಕಚ್ಚಿರುವುದರಿಂದ ಮೈಸೂರಿನ ಹಳ್ಳಿಯೊಂದರ ಜನ ಗುಳೆ ಹೋಗಿ ಇಡೀ ಊರಿನಲ್ಲಿ ಸ್ಮಶಾನ ಮೌನ ಆವರಿಸುತ್ತಿದೆ.
ಸಾಮಾನ್ಯವಾಗಿ ಉತ್ತರ ಕರ್ನಾಟಕದಲ್ಲಿ ಹಳ್ಳಿ ಬಿಟ್ಟು ಗುಳೆ ಹೋಗುವುದನ್ನು ಕಾಣುತ್ತೇವೆ. ಆದರೆ ಮೈಸೂರು ಜಿಲ್ಲೆಯ ಗ್ರಾಮವೊಂದರ ಸುಮಾರು ಮೂವತ್ತೆಂಟು ಕುಟುಂಬಗಳು ಪಟ್ಟಣ ಸೇರಿದ್ದರಿಂದ ಇಡೀ ಗ್ರಾಮ ಪಾಳುಬಿದ್ದಿದೆ. ಇದು ಅಚ್ಚರಿಯಾದರೂ ಸತ್ಯ. [ಸಕಲ ಸೌಲಭ್ಯ ವಂಚಿತ ಕುಗ್ರಾಮ ಕೊಡಗಿನ ಅಂಚೆತಿಟ್ಟು]
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ಕ್ಷೇತ್ರದ ವ್ಯಾಪ್ತಿಗೆ ಸೇರಿದ ದೊಡ್ಡಕವಲಂದೆ ಹೋಬಳಿಯ ಕಾರ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಳಿಕಟ್ಟೆಹುಂಡಿ ಜನರಿಲ್ಲದೆ ಬಿಕೋ ಎನ್ನುತ್ತಿರುವ ಗ್ರಾಮ.
ಇಷ್ಟಕ್ಕೂ ಈ ಗ್ರಾಮದಲ್ಲಿ ಮೂಲಭೂತ ಸೌಕರ್ಯಕ್ಕೇನು ಕೊರತೆಯಿಲ್ಲ. ಉತ್ತಮ ರಸ್ತೆ, ವಿದ್ಯುತ್, ಅಂಗನವಾಡಿ, ಶಾಲೆ ಎಲ್ಲವೂ ಇದೆ, ಆದರೆ ಜನರಿಲ್ಲ! ಇದು ಏಕೆ ಎನ್ನುವ ಚಿದಂಬರ ಪ್ರಶ್ನೆಗೆ ಇಲ್ಲಿದೆ ಉತ್ತರ. [ಸ್ವಚ್ಛತೆ ಕಾಣದ ಹಗಿನವಾಳು ಗ್ರಾಮಕ್ಕೆ 'ರೋಗ ಭಾಗ್ಯ'!]
ಕೃಷಿ ನಂಬಿದ ಜನ ಮಳೆಯಿಲ್ಲದೆ ಕಂಗಾಲು
ಇಲ್ಲಿ ಇದ್ದವರು ಕೃಷಿ ಮಾಡಿ ಜೀವನ ನಿರ್ವಹಿಸುತ್ತಿದ್ದರು. ಆದರೆ ಇತ್ತೀಚಿಗಿನ ವರ್ಷಗಳಲ್ಲಿ ಮಳೆ ಬಾರದೆ, ಕೃಷಿ ಮಾಡಲಾಗದೆ, ಹೊಟ್ಟೆಪಾಡಿಗಾಗಿ ಅನಿವಾರ್ಯವಾಗಿ ಹಳ್ಳಿ ಬಿಟ್ಟು ಬೇರೆ ಊರು ಸೇರುತ್ತಿದ್ದಾರೆ.
ಅತ್ತ ಹೋದವರು ಇತ್ತ ಬರಲೇ ಇಲ್ಲ!
2003ರಲ್ಲಿ ಗ್ರಾಮದಲ್ಲಿ ಸುಮಾರು 40 ಕುಟುಂಬಗಳು ವಾಸಿಸುತ್ತಿದ್ದವು. ಆದರೆ ಕೃಷಿ ಇವರ ಕೈ ಹಿಡಿಯಲಿಲ್ಲ. ಹೊಟ್ಟೆಯನ್ನು ತಣಿಸಲಿಲ್ಲ. ಇನ್ನು ಇಲ್ಲಿದ್ದರೆ ಬದುಕು ಕಷ್ಟ ಎಂದರಿತ ಜನ ಊರು ಬಿಡಲು ತಯಾರಾದರು. ಹೀಗೆ ಹೋದವರು ಮತ್ತೆ ಇತ್ತ ಬರುವ ಪ್ರಯತ್ನ ಮಾಡಲೇ ಇಲ್ಲ. ಪರಿಣಾಮ ಇಡೀ ಗ್ರಾಮ ಪಾಳು ಬಿದ್ದಿದೆ. ಸದ್ಯಕ್ಕೆ ಎರಡು ಕುಟುಂಬಗಳು ಮಾತ್ರ ಇಲ್ಲಿ ವಾಸಿಸುತ್ತಿವೆ.
ಇಲ್ಲೇ ಇರುತ್ತೇನೆ ಎಂದವರದು ನರಕ ಜೀವನ
ಸದ್ಯ ಊರು ಬಿಡದೆ ಬದುಕುತ್ತೇವೆ ಎಂದು ಹೊರಟ ಕುಟುಂಬಗಳದ್ದು ನರಕದ ಜೀವನವಾಗಿದೆ. ರಾತ್ರಿ ವೇಳೆ ಬೀದಿ ದೀಪಗಳಿಲ್ಲದೆ ಕಗ್ಗತ್ತಲಿನಲ್ಲಿ ಕಾಲ ಕಳೆಯುವಂತಾಗಿದೆ. ಸರ್ಕಾರ ನೀಡುವ ಅನ್ನ ಭಾಗ್ಯ ನಂಬಿ ಬದುಕುವಂತಾಗಿದೆ. ಇವರಿಗೆ ಕೂಲಿ ಮಾಡಿ ಬದುಕುವುದು ಅನಿವಾರ್ಯವಾಗಿದೆ. ಕೂಲಿ ಮಾಡೋಣ ಎಂದರೂ ಪಕ್ಕದ ಹಳ್ಳಿಗಳಿಗೆ ನಡೆದು ಹೋಗಬೇಕಾಗಿದೆ.
ಪಾಳುಬಿದ್ದ ಶಾಲೆ ವಿಷಜಂತುಗಳಿಗೆ ಆಶ್ರಯತಾಣ
ಇವರ ಜೀವನದ ವಿಡಂಬನೆ ಹೇಗಿದೆ ನೋಡಿ. ಸತ್ತರೆ ಶವಸಂಸ್ಕಾರಕ್ಕೂ ಜನರಿಲ್ಲದ ಸ್ಥಿತಿ ಗ್ರಾಮದ್ದಾಗಿದೆ. ಇದು ವಿಪರ್ಯಾಸವಾದರೂ ಸತ್ಯ. ಗ್ರಾಮದಲ್ಲಿ ಜನರೇ ಇಲ್ಲದ ಮೇಲೆ ಅಂಗನವಾಡಿ ಮತ್ತು ಶಾಲೆ ತಾನೆ ಹೇಗೆ ನಡೆಯಬೇಕು? ಅವು ಕೂಡ ಪಾಳು ಬಿದ್ದು ವಿಷ ಜಂತುಗಳ ಆಶ್ರಯ ತಾಣವಾಗಿವೆ.
ಜಾತ್ರೆಗೆ ಬಂದು ಮತ್ತೆ ಪಟ್ಟಣದ ದಾರಿ ಹಿಡಿಯುತ್ತಾರೆ
ಹಳ್ಳಿಬಿಟ್ಟು ಹೊರಗೆ ಹೋದವರು ವರ್ಷಕ್ಕೊಮ್ಮೆ ಪ್ರತಿವರ್ಷ ನವೆಂಬರ್ ತಿಂಗಳಲ್ಲಿ ನಡೆಯುವ ಶ್ರೀ ಸಿದ್ದೇಶ್ವರ ಜಾತ್ರೆಗೆ ಬರುತ್ತಾರಂತೆ. ಹಬ್ಬ ಮುಗಿಸಿ ಮತ್ತೆ ಹೊರಟು ಬಿಡುತ್ತಾರೆ. ಮತ್ತೆ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿ ಬಿಡುತ್ತದೆ. ಇಲ್ಲಿನವರು ಯಾರೂ ತಮ್ಮ ಜಮೀನನ್ನು ಮಾರದೆ ಹಾಗೆಯೇ ಬಿಟ್ಟು ಹೋಗಿದ್ದಾರೆ ಎನ್ನುವುದೇ ಸಂತಸದ ವಿಚಾರವಾಗಿದೆ.