ಬಿಜೆಪಿಯಲ್ಲಿ ಆತ್ಮಾವಲೋಕನದ ಅಗತ್ಯವಿದೆ: ಶ್ರೀನಿವಾಸ್ ಪ್ರಸಾದ್
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲನ್ನನುಭವಿಸಿದ್ದಕ್ಕೆ ನಾವು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿ.ಶ್ರೀನಿವಾಸ್ ಪ್ರಸಾದ್ ತಿಳಿಸಿದರು.
ಮೈಸೂರು, ಮೇ 15 : ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲನ್ನನುಭವಿಸಿದ್ದಕ್ಕೆ ನಾವು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿ.ಶ್ರೀನಿವಾಸ್ ಪ್ರಸಾದ್ ತಿಳಿಸಿದರು.
ಮೈಸೂರಿನ ರಾಜೇಂದ್ರ ಕಲಾಮಂದಿರದಲ್ಲಿ ನಿನ್ನೆ(ಮೇ 14) ನಡೆದ ಬಿಜೆಪಿ ನಗರ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಎನ್.ಆರ್, ಕೆ.ಆರ್, ಚಾಮರಾಜನಗರ ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯವಿತ್ತು. ಬಿಜೆಪಿ ಗೆಲ್ಲುತ್ತಿತ್ತು.ಅಷ್ಟೇ ಅಲ್ಲದೇ ಸದ್ಯ ಬಿಜೆಪಿಯನ್ನು ಎಲ್ಲ ಕಡೆಯೂ ಗೆಲ್ಲುವ ಹಾಗೇ ಕಾರ್ಯಯೋಜನೆಯನ್ನು ರೂಪಿಸಬೇಕು. ಮಿಷನ್ 150 ಯಶಸ್ವಿಯಾಗುವತ್ತ ನಾವು ಗಮನ ಹರಿಸಬೇಕು ಎಂದರು.[ಪಕ್ಷದ ಸಂಘಟನೆಯೇ ನನ್ನ ಗುರಿ : ಶ್ರೀನಿವಾಸ್ ಪ್ರಸಾದ್]
ಮುಖ್ಯಮಂತ್ರಿ ಇಲ್ಲಿಯವರೇ ಎಂದು ಧೃತಿಗೆಡುವ ಅಗತ್ಯವಿಲ್ಲ. ಅವರಿಗೆ ತಾಲೂಕುಪಂಚಾಯತ್, ಜಿಲ್ಲಾಪಂಚಾಯತ್ ಗಳನ್ನೇ ಗೆಲ್ಲೋದಿಕ್ಕೆ ಸಾಧ್ಯವಾಗಿಲ್ಲ. ಕಾಂಗ್ರೆಸ್ ನಲ್ಲಿ ದಿಗ್ವಿಜಯ್ ಸಿಂಗ್ ಉಸ್ತುವಾರಿ ಆಗಿರುವವರೆಗೂ ಅವರ ಸ್ಥಿತಿ ಗೊತ್ತಾಗುತ್ತಿರಲಿಲ್ಲ.ಈಗ ಉಸ್ತುವಾರಿ ಬದಲಾಗಿದ್ದಾರೆ. ಉಸ್ತುವಾರಿ ದಿಗ್ವಿಜಯ್ ಸಿಂಗ್ ಇರೋವರೆಗೂ ನಾನೇ ಸಿಎಂ ಎಂದು ಹೇಳುತ್ತಿದ್ದ ಸಿದ್ದರಾಮಯ್ಯ ಇದೀಗ ಪಕ್ಷದಲ್ಲಿ ಹಿಡಿತ ಕಳೆದುಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.
ನಂಜನಗೂಡು ಉಪಚುನಾವಣೆಯ ವೇಳೆ ಕಪಿಲಾ ನದಿಯಲ್ಲಿ ನೀರಿಲ್ಲದಿದ್ದರೂ ಹಣದ ಹೊಳೆಯನ್ನೇ ಹರಿಸಿದ್ದಾರೆ. ಪಕ್ಷದಲ್ಲಿ ಅಭ್ಯರ್ಥಿಗಳಿಲ್ಲದಿದ್ದರೂ , ಸಚಿವ ಮಹದೇವಪ್ಪ ಮಗನಿಗೆ ಟಿಕೆಟ್ ಕೊಡಿಸುತ್ತೇನಂದು ಸುಳ್ಳು ಹೇಳಿದರೂ. ಅಷ್ಟೇ ಅಲ್ಲದೇ ಬಿಜೆಪಿ ಅಭ್ಯರ್ಥಿಯನ್ನು ಕರೆತಂದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇವೇಗೌಡರ ವಿರುದ್ಧವೂ ಕಿಡಿಕಾರಿದ ಶ್ರೀನಿವಾಸ್ ಪ್ರಸಾದ್, ಅಪ್ಪ ಮಗನಿಗೆ ಕೃತಜ್ಞತೆಯೇ ಇಲ್ಲ. ಕಾಂಗ್ರೆಸ್ ಸಹಾಯದಿಂದ ಅಪ್ಪ ಪ್ರಧಾನಿಯಾದರು. ಬಿಜೆಪಿ ಸಹಾಯದಿಂದ ಮಗ ಮುಖ್ಯಮಂತ್ರಿಯಾದರು. ಎಲ್ಲ ಕಡೆಯಲ್ಲೂ ಒಳ ಒಪ್ಪಂದ ನಡೆಯುತ್ತದೆ. ಉಪಚುನಾವಣೆಯಲ್ಲೂ ಒಳ ಒಪ್ಪಂದ ನಡೆಸುವ ಮೂಲಕ ನನ್ನ ಸೋಲಿಗೆ ಕಾರಣರಾದರು ಎಂದರು.