ಡಿ.29 ಮೈಸೂರಿಗೆ ರಾಷ್ಟ್ರಪತಿ: ಜಾಂಬೂರಿ ಉತ್ಸವ ಉದ್ಘಾಟನೆ
ಮೈಸೂರು, ಡಿಸೆಂಬರ್ 26: ಇಲ್ಲಿನ ನಂಜನಗೂಡು ರಸ್ತೆಯಲ್ಲಿರುವ ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ವಿ.ಪಿ. ದೀನದಯಾಳು ನಾಯ್ಡು ನಗರದಲ್ಲಿ ಡಿ.29ರಂದು 17ನೇ ರಾಷ್ಟ್ರೀಯ ಜಾಂಬೂರಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸ್ಕೌಟ್ಸ್ ಅಂಡ್ ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯ ತಿಳಿಸಿದರು.
ನಾಯ್ಡು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಡಿ.29ರಂದು ಮಧ್ಯಾಹ್ನ 3 ಗಂಟೆಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ರಾಜ್ಯಪಾಲ ವಜೂಬಾಯಿ ರೂಢಾಬಾಯಿ ವಾಲಾ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಸ್ಥಿತರಿರುವರು ಎಂದು ತಿಳಿಸಿದರು.[ರಾಷ್ಟ್ರಪತಿ ವೇತನ ಮೂರು ಪಟ್ಟು ಹೆಚ್ಚಿಸಲು ಪ್ರಸ್ತಾವ]
ದೇಶದ ಎಲ್ಲಾ ರಾಜ್ಯಗಳಿಂದ ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಸುಮಾರು 25 ಸಾವಿರ ಮಂದಿ ಪಾಲ್ಗೊಳ್ಳಲಿದ್ದಾರೆ. ಇದು 17ನೇ ಜಾಂಬೂರಿ ಉತ್ಸವವವಾಗಿದ್ದು ಇಲ್ಲಿಯವರೆಗೆ ಮೂರು ಉತ್ಸವಕ್ಕೆ ಕರ್ನಾಟಕ ಆತಿಥ್ಯ ನೀಡಿದೆ. ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ನಡೆಯಲಿದೆ.[ಸಂಶೋಧನಾ ಯುವವಿಜ್ಞಾನಿಗಳಿಗೆ ಅಬ್ದುಲ್ ಕಲಾಂ ಫೆಲೋಶಿಪ್]
ದೇಶದ ಎಲ್ಲಾ ಭಾಗಗಳಿಂದ ಆಗಮಿಸುವ ಸ್ಕೌಟ್ಸ್ ಮತ್ತು ಗೈಡ್ಸ್ ನ ವಿದ್ಯಾರ್ಥಿ ಸಮುದಾಯ ಹಾಗೂ ತರಬೇತುದಾರರಿಗೆ ಅವಶ್ಯಕವಾದ ಮೂಲಭೂತ ಸೌಕರ್ಯಗಳನ್ನು ಸೃಷ್ಟಿಸಲು ಅನೇಕ ಸಮಿತಿಗಳನ್ನು ರಚಿಸಲಾಗಿದೆ. ಆಹಾರ ಪೂರೈಕೆ, ವಸತಿ, ಆರೋಗ್ಯ, ಭದ್ರತೆ, ನೀರು ಮತ್ತು ವಿದ್ಯುತ್ ಪೂರೈಕೆ, ಸಾರಿಗೆ ಸಂಪರ್ಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಕುರಿತಂತೆ ಸಮಿತಿಗಳನ್ನು ರಚಿಸಲಾಗಿದೆ ಎಂದರು.
ಸಿದ್ದತೆ ಪರಿಶೀಲಿಸಿದ ಸಚಿವರು:
17ನೇ ರಾಷ್ಟ್ರೀಯ ಜಾಂಬೂರಿ ಉತ್ಸವ ನಡೆಯಲಿರುವ ಪ್ರದೇಶವನ್ನು ಸೋಮವಾರ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಭೇಟಿ ನೀಡಿ ಸಿದ್ಧತೆಯನ್ನು ಪರಿಶೀಲನೆ ನಡೆಸಿದರು.
ಡಿ.29ರಿಂದ ಆರಂಭಗೊಳ್ಳಲಿರುವ ಜಾಂಬೂರಿ ಉತ್ಸವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ವಿವಿಧ ರಾಜ್ಯಗಳಿಂದಾಗಮಿಸುವ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿ ಸಮುದಾಯ ಹಾಗೂ ತರಬೇತುದಾರರಿಗೆ ಅವಶ್ಯಕವಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ವ್ಯವಸ್ಥೆಗಳು ಯಾವ ರೀತಿಯಲ್ಲಿ ಸಿದ್ಧಗೊಳ್ಳುತ್ತಿವೆ ಎಂಬುದನ್ನು ಸಚಿವರು ಪರಿಶೀಲಿಸಿದರಲ್ಲದೇ, ಸಲಹೆ ಸೂಚನೆಗಳನ್ನು ನೀಡಿದರು. ಈ ವೇಳೆ ಸಂಸದ ಧ್ರುವನಾರಾಯಣ ಅವರು ಸಚಿವರ ಜೊತೆಗಿದ್ದರು.