ನಕಲಿ ಅಂಕಪಟ್ಟಿ ತಡೆಗೆ ಮೈಸೂರು ವಿವಿಯಲ್ಲಿ ಡಿಜಿಟಲ್ ಅಂಕಪಟ್ಟಿ!
ಮೈಸೂರು, ಆಗಸ್ಟ್ 11 : ನಕಲಿ ಅಂಕಪಟ್ಟಿ, ಪದವಿ ಪ್ರಮಾಣ ಪತ್ರದ ಹಾವಳಿ ತಪ್ಪಿಸುವ ಉದ್ದೇಶದಿಂದ ಡಿಜಿಟಲ್ ಅಂಕಪಟ್ಟಿಯನ್ನು ಜಾರಿಗೆ ತರಲು ಮೈಸೂರು ವಿಶ್ವವಿದ್ಯಾಲಯ ಮುಂದಾಗಿದೆ.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಎಂಸಿಎ ಸೇರಿ ತಾಂತ್ರಿಕ ಕೋರ್ಸ್ ಗಳನ್ನು ಈ ಪದ್ಧತಿಗೆ ಒಳಪಡಿಸಲು ಸಿದ್ಧತೆ ನಡೆಸಿದೆ. ವಿವಿಯ ಅನುದಾನ ಆಯೋಗ ( ಯುಜಿಸಿ) ಹಾಗೂ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಸೂಚನೆ ಮೇರೆಗೆ ಈ ನಿರ್ಧಾರ ಕೈಗೊಂಡಿದೆ. ಇದರಿಂದ ಅಂಕಪಟ್ಟಿ ಮುದ್ರಣ ವೆಚ್ಚಕ್ಕೆ ಕಡಿವಾಣ ಬೀಳಲಿದೆ ಎಂಬುದು ವಿವಿ ಲೆಕ್ಕಾಚಾರ.
ಎಲ್ಲಾ ಕೋರ್ಸ್ ಗಳು ಡಿಜಿಟಲ್ ಅಂಕಪಟ್ಟಿ ಅಳವಡಿಸಿಕೊಳ್ಳಬೇಕು ಎಂಬುದು ಯುಜಿಸಿ ಆಶಯ. ಈ ಪರಿಕಲ್ಪನೆ ಹೆಚ್ಚು ಜನರಿಗೆ ಗೊತ್ತಿಲ್ಲದಿದುರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತದೆ.
ಮೈಸೂರು ವಿವಿಯಲ್ಲಿ ಪ್ರಸಕ್ತ ವರ್ಷದಿಂದ ಜಿಎಸ್ಟಿ ಕುರಿತು ಪಾಠ
ಸ್ನಾತಕೋತ್ತರ ಹಂತದ ತಾಂತ್ರಿಕ ಕೋರ್ಸ್ ಗಳಿಗೆ ಈ ಪದ್ಧತಿ ಅಳವಡಿಸಿಕೊಂಡು ಸಾಧಕ -ಭಾಧಕ ಅರಿಯುತ್ತೇವೆ. ನಂತರ ಹಂತ-ಹಂತವಾಗಿ ಎಲ್ಲಾ ಕೋರ್ಸ್ ಗಳಿಗೆ ವಿಸ್ತರಿಸಲಾಗುವುದು ಎಂದು ಮೈಸೂರು ವಿವಿ ಪರಿಕ್ಷಾಂಗ ಕುಲಸಚಿವ ಪ್ರೊ.ಸೋಮಶೇಖರ್ ತಿಳಿಸಿದ್ದಾರೆ
ನೂತನ ವ್ಯವಸ್ಥೆಯ ಅನ್ವಯ ಅಂಕಪಟ್ಟಿ ಹಾಗೂ ಪ್ರಮಾಣ ಪತ್ರಗಳನ್ನು ವಿಶ್ವವಿದ್ಯಾನಿಲಯ ಮುದ್ರಣ ರೂಪದಲ್ಲಿ ನೀಡುವುದಿಲ್ಲ. ಪರೀಕ್ಷಾ ಫಲಿತಾಂಶಗಳನ್ನು ಅಂಕಪಟ್ಟಿಯಾಗಿ ಪರಿವರ್ತಿಸಿ ರಾಷ್ಟ್ರೀಯ ಶೈಕ್ಷಣಿಕ ದಾಖಲೆಯ ಕೇಂದ್ರಕ್ಕೆ ರವಾನಿಸಲಾಗುತ್ತದೆ.
ಡಿಜಿಟಲ್ ಅಂಕಪಟ್ಟಿಯನ್ನು ಮುದ್ರಣ ರೂಪದಲ್ಲಿ ಉಚಿತವಾಗಿ ಪಡೆಯಲು ಒಂದು ಬಾರಿ ಮಾತ್ರ ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗೆ ಇಷ್ಟವಾಗುವ ಕಾಗದದಲ್ಲಿ ಇದನ್ನು ಮುದ್ರಿಸಿಕೊಳ್ಳಬಹುದು.
ಮತ್ತೊಮ್ಮೆ ಮುದ್ರಣ ರೂಪದಲ್ಲಿ ಪಡೆಯಲು ಹಣ ಪಾವತಿಸಬೇಕಾಗುತ್ತದೆ. ಸದ್ಯ ವಿಶ್ವವಿದ್ಯಾನಿಲಯದ ಅಂಕಪಟ್ಟಿಯ ಬ್ಯಾಂಕ್ ಪೇಪರ್ ಗೆ 32 ರೂ ಹಾಗೂ ಪರೀಕ್ಷಾ ಫಲಿತಾಂಶವನ್ನು ಅಂಕಪಟ್ಟಿಯಾಗಿ ಪರಿವರ್ತಿಸುವ ಪ್ರಕ್ರಿಯೆಗೆ 25 ರೂ ವೆಚ್ಚ ಮಾಡುತ್ತಿದೆ. ಇನ್ನು ಮುಂದೆ ಈ ಹೊರೆ ತಪ್ಪಲಿದೆ ಎನ್ನುವುದು ಪ್ರೊ.ಸೋಮಶೇಖರ್ ಅವರ ಮಾತು.
ಡಿಜಿಟಲ್ ರೂಪದ ಅಂಕಪಟ್ಟಿ ಹಾಗೂ ಪ್ರಮಾಣಪತ್ರಗಳ ಸುರಕ್ಷತೆಗೆ ಸಂಬಂಧಿಸಿದಂತೆ ವಿಶ್ವವಿದ್ಯಾನಿಲಯ ವ್ಯಕ್ತಪಡಿಸಿದ್ದ ಆತಂಕವನ್ನು ನ್ಯಾಷನಲ್ ಸೆಕ್ಯೂರಿಟಿಸ್ ಡೆಪಾಸಿಟರಿ ಲಿಮಿಟೆಡ್ ದೂರ ಮಾಡಿದೆ.
ಸರ್ಕಾರಿ ಸ್ವಾಮ್ಯದ ಸಂಸ್ಥೆ ಸೇವೆ ಒದಗಿಸಲು ಮುಂದೆ ಬಂದಿದೆ. ಇದು ಅಭಿವೃದ್ಧಿಪಡಿಸಿರುವ ಮೊಬೈಲ್ ಅಪ್ ನಲ್ಲಿಯೂ ಡಿಜಿಟಲ್ ಅಂಕಪಟ್ಟಿಯನ್ನು ಇಟ್ಟುಕೊಳ್ಳಬಹುದಾಗಿದೆ.
ಉದ್ಯಾಗಾವಕಾಶ ಸಂಸ್ಥೆಗಳು ನಡೆಸುವ ಸಂದರ್ಶನಕ್ಕೆ ಮುದ್ರಣ ರೂಪದ ಅಂಕಪಟ್ಟಿ, ಪ್ರಮಾಣಪತ್ರ ಕೊಂಡ್ಯುವ ಅಗತ್ಯವಿಲ್ಲ. ಮೊಬೈಲ್ ಆಪ್ ಗಳಿಂದಲೇ ಇವುಗಳನ್ನು ಪ್ರದರ್ಶಿಸಬಹುದು.
ಇವುಗಳ ಅಸಲಿತನ ಪರಿಶೀಲಿಸುವುದು ಕೂಡ ಸುಲಭ. ಪ್ರಮಾಣಪತ್ರದಲ್ಲಿನ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ ಎನ್ ಎ ಡಿ ಜಾಲತಾಣದಲ್ಲಿ ಇವು ಲಭ್ಯವಾಗುತ್ತದೆ.
ಹೀಗಾಗಿ ಸಿಂಧುತ್ವ ಪರಿಶೀಲನೆ ಪ್ರಕ್ರಿಯೆಗೆ ಉಂಟಾಗುತ್ತಿದ್ದ ಸಮಸ್ಯೆಯೂ ನಿವಾರಣೆಯಾಗಲಿದೆ ಎಂಬುದು ಕುಲಸಚಿವರ ಅಭಿಪ್ರಾಯ.