ಮಾರ್ಚ್ 2ನೇ ವಾರದಲ್ಲಿ ಕರ್ನಾಟಕ ಬಜೆಟ್: ಸಿದ್ದರಾಮಯ್ಯ
ಮೈಸೂರು, ಫೆಬ್ರವರಿ 1: ರಾಜ್ಯದ ಜನತೆಗೆ ಬೇಕು ಬೇಡಗಳ ಕುರಿತು ಬಜೆಟ್ ಪೂರ್ವಭಾವಿ ಸಭೆ ನಡೆಸಲಾಗುತ್ತಿದ್ದು, ಮಾರ್ಚ್ 2ನೇ ವಾರದಲ್ಲಿ ಬಜೆಟ್ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಬುಧವಾರ ಮಾತನಾಡಿ, ಅಧಿಕಾರಿಗಳಿಗೆ ಸಭೆಯಲ್ಲಿ ಸಮರ್ಪಕವಾಗಿ ಕೆಲಸ ಮಾಡಲು ಸೂಚನೆ ನೀಡಲಾಗಿದೆ .ಎಲ್ಲಾ ಯೋಜನೆಗಳನ್ನು ಜನರಿಗೆ ತಲುಪಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ. ಪರಿಹಾರ ಫಲಾನುಭವಿಗಳ ಮನೆಗೆ ತಲುಪಬೇಕು. ಬರಗಾಲದ ಕುರಿತು ಚರ್ಚೆ ಮಾಡಿದ್ದೇನೆ. ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಆಯಾ ಜಿಲ್ಲಾಧಿಕಾರಿಗಳ ಖಾತೆಗೆ ಅಗತ್ಯ ಹಣ ಜಮಾ ಮಾಡಲಾಗಿದೆ. ಅಗತ್ಯ ಬಿದ್ದರೆ ಮತ್ತಷ್ಟು ಹಣ ನೀಡಲಾಗುವುದು ಎಂದು ಭರವಸೆ ನೀಡಿದರು. ಕೇಂದ್ರದ ಬಜೆಟ್ ಕುರಿತ ಪ್ರಶ್ನೆಗೆ ಇನ್ನೂ ನೋಡಿಲ್ಲ. ನೋಡಿದ ಬಳಿಕ ಮಾತನಾಡುತ್ತೇನೆ ಎಂದು ತಿಳಿಸಿದರು.[ರೆಡ್ಡಿ ಸಮುದಾಯವನ್ನು 2ಎಗೆ ಸೇರಿಸುವ ಬಗ್ಗೆ ಚರ್ಚೆ: ಸಿದ್ದರಾಮಯ್ಯ]
ಇನ್ನು ಎಸ್.ಎಂ.ಕೃಷ್ಣ ಕಾಂಗ್ರೆಸ್ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಕೃಷ್ಣ ಅವರನ್ನು ಮನವೊಲಿಸುವ ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ. ಎಸ್.ಎಂ.ಕೃಷ್ಣ ಅವರ ಜೊತೆ ನಾನು ಇನ್ನೂ ಮಾತನಾಡಿಲ್ಲ. ಮುಂದೆ ಕೃಷ್ಣ ಅವರ ಜೊತೆ ಮಾತನಾಡ್ತೇನೆ. ಪಕ್ಷಕ್ಕೆ ಹಿರಿಯರೂ ಬೇಕು,ಯುವಕರೂ ಬೇಕು. ಪಕ್ಷದಲ್ಲಿ ಹಿರಿಯರನ್ನು ಎಲ್ಲಿಯೂ ಕಡೆಗಣಿಸಿಲ್ಲ ಎಂದರು.
ಕಾಂಗ್ರೆಸ್ ಸಮನ್ವಯ ಸಮಿತಿಯಲ್ಲಿ ಎಸ್.ಎಂ.ಕೃಷ್ಣ. ಅವರು ಇದ್ದಾರೆ. ಜಾಫರ್ ಷರೀಪ್ ಕೂಡ ಇದ್ದಾರೆ. ನಾವು ಅವರ ಸಲಹೆಯನ್ನೂ ಪಡೆದುಕೊಂಡಿದ್ದೇವೆ. ಪಕ್ಷಕ್ಕೆ ಎಲ್ಲರೂ ಅನಿವಾರ್ಯ. ಯಾರು ಅನಿವಾರ್ಯ ಅಲ್ಲ ಅನ್ನೋದನ್ನು ನಾನು ಒಪ್ಪುವುದಿಲ್ಲ. ಕಾಂಗ್ರೆಸ್ ಪಕ್ಷ ಎಲ್ಲಾ ವರ್ಗದವನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವ ಪಕ್ಷ ಎಂದು ಸ್ಪಷ್ಟಪಡಿಸಿದರು.