ಮೈಸೂರು ಮೃಗಾಲಯದಲ್ಲಿ ಎರಡು ಜಿಂಕೆ ಸಾವು
ಮೈಸೂರು, ಜನವರಿ 10 : ಮೈಸೂರು ಮೃಗಾಲಯದಲ್ಲಿನ ಪಕ್ಷಿಗಳಿಗೆ ಮಾರಕ ರೋಗ ತಗುಲಿದೆ ಎಂಬ ಕಾರಣಕ್ಕೆ ಮೃಗಾಲಯಕ್ಕೆ ಒಂದು ತಿಂಗಳು ರಜೆ ಘೋಷಣೆ ಮಾಡಿ ಕಟ್ಟೆಚ್ಚರವಹಿಸಲಾಗಿದೆ. ಇದರ ಮಧ್ಯದಲ್ಲಿ ಎರಡು ಜಿಂಕೆಗಳು ಮೃತಪಟ್ಟಿರುವುದು ಮೃಗಾಲಯದ ಆಡಳಿತ ವರ್ಗಕ್ಕೆ ಆತಂಕವನ್ನುಂಟು ಮಾಡಿದೆ.
ಮೃಗಾಲಯದಲ್ಲಿ ಆರಾಮಾಗಿ ವಿಹರಿಸಿಕೊಂಡಿರಬೇಕಿದ್ದ ಜಿಂಕೆಗಳು ಪರಸ್ಪರ ಜಗಳ ಮಾಡಿಕೊಂಡಿರುವುದು ಸಾವಿಗೆ ಕಾರಣವಾಗಿದೆ. ಬಲಾಢ್ಯ ಜಿಂಕೆಯೊಂದು, ಮತ್ತೊಂದು ಜಿಂಕೆಯ ಹೊಟ್ಟೆಗೆ ಬಲವಾಗಿ ತಿವಿದ ಪರಿಣಾಮ ಗಾಯಗೊಂಡ 8ವರ್ಷದ ಜಿಂಕೆಗೆ ಗಾಯಗಳಾಗಿದ್ದವು. ಕಾದಾಟದ ವೇಳೆ ಮರಿಜಿಂಕೆಯೊಂದು ಬಿದ್ದು ಗಾಯಗೊಂಡಿತ್ತು. ಅವುಗಳಿಗೆ ಚಿಕಿತ್ಸೆ ನೀಡಲಾಗಿತ್ತಾದರೂ ಚೇತರಿಸಿಕೊಳ್ಳದೆ ಎರಡೂ ಜಿಂಕೆಗಳು ಮೃತಪಟ್ಟಿವೆ ಎಂದು ಮೃಗಾಲಯದ ಉಪನಿರ್ದೇಶಕರು ತಿಳಿಸಿದ್ದಾರೆ.[ಸಾರ್ವಜನಿಕರಿಗೆ ಫೆಬ್ರವರಿ 2ರವರೆಗೆ ಮೈಸೂರು ಮೃಗಾಲಯ ಪ್ರವೇಶವಿಲ್ಲ]
ಏತನ್ಮಧ್ಯೆ ಹಕ್ಕಿಜ್ವರದಿಂದ 7 ಹಕ್ಕಿಗಳು ಮೃತಪಟ್ಟಿರುವುದರಿಂದ ಮೃಗಾಲಯದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಸಿಬ್ಬಂದಿಗಳ ಆರೋಗ್ಯ ತಪಾಸಣೆಯನ್ನೂ ನಡೆಸಲಾಗಿದೆ. ಆರೋಗ್ಯ ಸುರಕ್ಷತೆಯ ಕುರಿತು ಜಾಗೃತಿ ಶಿಬಿರವನ್ನೂ ಏರ್ಪಡಿಸಲಾಗಿತ್ತು. ಆದರೆ ಸಂತೋಷದ ವಿಷಯವೇನೆಂದರೆ ಕಾಡುನಾಯಿ ಹಾಗೂ ತೋಳ ತಲಾ ಆರುಮರಿಗಳನ್ನು ಹಾಕಿದ್ದು, ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನವಾದಂತಾಗಿದೆ.