ಸ್ಪಂದಿಸಿದವರಿಗೆ ಕೃತಜ್ಞತೆ ಅರ್ಪಿಸಿದ ಗೀತಾ ಮಹದೇವ ಪ್ರಸಾದ್
ಮೈಸೂರು, ಜನವರಿ 6: ಸಚಿವ ಎಚ್.ಎಸ್.ಮಹದೇವಪ್ರಸಾದ್ ಅವರು ಅಕಾಲಿಕ ನಿಧನರಾದ ಸಂದರ್ಭ ನಮ್ಮ ಕುಟುಂಬಕ್ಕೆ ಆದ ಆಘಾತ, ಸಂಕಟ, ನೋವಿನಲ್ಲಿ ಭಾಗಿಯಾಗಿ ಅವರ ಅಂತ್ಯ ಸಂಸ್ಕಾರದವರೆಗೂ ನಮಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದ ಎಲ್ಲರಿಗೂ ಮಹದೇವಪ್ರಸಾದ್ ಅವರ ಪತ್ನಿ ಡಾ.ಗೀತಾ ಕೃತಜ್ಞತೆ ಅರ್ಪಿಸಿದ್ದಾರೆ.[ಮಹದೇವಪ್ರಸಾದ್ ಮೈಸೂರು ನಿವಾಸದಲ್ಲಿ ಮಡುಗಟ್ಟಿದ ಶೋಕ]
ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಸಹೋದ್ಯೋಗಿಯ ಅಗಲಿಕೆ ಕಾರಣ ತಮ್ಮ ಎಲ್ಲ ಕೆಲಸಗಳನ್ನು ಬದಿಗೊತ್ತಿ, ಉಸ್ತುವಾರಿ ವಹಿಸಿ ಪಾರ್ಥಿವ ಶರೀರವನ್ನು ತರುವುದರಿಂದ ಹಿಡಿದು ಅಂತ್ಯಕ್ರಿಯೆ ನಡೆಯುವವರೆಗೂ ಜೊತೆಯಲ್ಲಿದ್ದು, ದು:ಖದಲ್ಲಿ ಭಾಗಿಯಾಗಿ ಅವರ ಸಮಯವನ್ನು ಮುಡುಪಾಗಿಟ್ಟಿದ್ದಕ್ಕಾಗಿ ಧನ್ಯವಾದ ಸಲ್ಲಿಸಿದ್ದಾರೆ.[ಸರಕಾರಿ ಗೌರವದೊಂದಿಗೆ ಮಹದೇವ ಪ್ರಸಾದ್ ಅಂತ್ಯಕ್ರಿಯೆ]
ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಜ್ಯದ ಕಾಂಗ್ರೆಸ್ ಪಕ್ಷದ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರು ದೂರವಾಣಿ ಮೂಲಕ ಸಂತಾಪ ಸೂಚಿಸಿ ಧೈರ್ಯ ತುಂಬಿದ್ದರು. ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧಿಪತಿಗಳು, ಧಾರ್ಮಿಕ ಮುಖಂಡರು, ಸಚಿವ ಸಂಪುಟದ ಎಲ್ಲಾ ಹಿರಿಯ ಸಚಿವರು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪಕ್ಷಾತೀತವಾಗಿ ರಾಜಕೀಯ ಪ್ರಮುಖರು,ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ಧೈರ್ಯ ತುಂಬಿದ್ದು, ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.