ಮೈಸೂರಿನಲ್ಲಿ ತಮಿಳು ಚಿತ್ರ ಪ್ರದರ್ಶನಕ್ಕೆ ಹೋರಾಟಗಾರರ ಬ್ರೇಕ್
ಮೈಸೂರು, ಆಗಸ್ಟ್ 31: ತಮಿಳುನಾಡಿನಲ್ಲಿ ಕಾವೇರಿ ನೀರಿಗಾಗಿ ಬಂದ್ ನಡೆಸಿದರೆ, ಮೈಸೂರಿನಲ್ಲಿ ತಮಿಳು ಸಿನಿಮಾಗಳ ಪ್ರದರ್ಶನಕ್ಕೆ ಬ್ರೇಕ್ ಬಿದ್ದ ಘಟನೆ ಮಂಗಳವಾರ ನಡೆದಿದೆ. ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರು ಮತ್ತಿತರ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿ, ತಮಿಳು ಚಿತ್ರ ಪ್ರದರ್ಶನವನ್ನು ನಿಲ್ಲಿಸಿವೆ.
ಅಗ್ರಹಾರದ ಪದ್ಮಾ ಥಿಯೇಟರ್ ನಲ್ಲಿ 'ಭಯಂ ಒರು ಪಯಣಂ' ತಮಿಳು ಸಿನಿಮಾ ಪ್ರದರ್ಶನವಾಗುತ್ತಿತ್ತು. ಅದನ್ನು ಮಧ್ಯದಲ್ಲೇ ನಿಲ್ಲಿಸಲಾಗಿದೆ. ಪ್ರತಿಭಟನಾನಿರತರು ಚಿತ್ರದ ಪೋಸ್ಟರ್ ಗಳನ್ನು ಹರಿದು, ಬೆಂಕಿ ಹೊತ್ತಿಸಿದ್ದಾರೆ. ಆ ನಂತರ, ಕಾವೇರಿ ನೀರಿಗಾಗಿ ಒತ್ತಾಯಿಸುತ್ತಿರುವ ತಮಿಳುನಾಡು ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.[ತಮಿಳುನಾಡಿಗೆ ನೀರು ಬಿಡದಂತೆ ರೈತರ ಅರೆಬೆತ್ತಲೆ ಪ್ರತಿಭಟನೆ]
ಸಿನಿಮಾ ನೋಡುತ್ತಿದ್ದವರು ಪೊಲೀಸರ ಸಹಾಯದಿಂದ ಥಿಯೇಟರ್ ಹೊರಗೆ ಬಂದಿದ್ದಾರೆ. ಆಗಸ್ಟ್ 30ರ ನಂತರ ಬೆಳೆಗೆ ನೀರು ಹರಿಸುವುದನ್ನು ನಿಲ್ಲಿಸಲಿರುವ ಸರ್ಕಾರಕ್ಕೆ ರೈತರ ಸಂಕಷ್ಟಗಳು ಅರ್ಥವಾಗುವುದಿಲ್ಲ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.