ಫೆ. 5ರಿಂದ ಸುತ್ತೂರು ಜಾತ್ರೆ, ಹೋಗೋಣ ಬನ್ನಿ
ಮೈಸೂರು, ಫೆಬ್ರವರಿ,02: ಜಾತ್ರೆಗಳಲ್ಲೇ ವಿಶಿಷ್ಟ ಮತ್ತು ವಿಭಿನ್ನವಾಗಿರುವ ಸುತ್ತೂರು ಶ್ರೀ ಶಿವಯೋಗಿಗಳ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ಆರಂಭವಾಗಿವೆ. ಫೆ.5ರಿಂದ 10ರವರೆಗೆ ಬರೋಬ್ಬರಿ 6 ದಿನಗಳ ಕಾಲ ನಡೆಯುವ ಜಾತ್ರೆಯನ್ನು ಯಶಸ್ವಿಯಾಗಿ ನಡೆಸಲು ಜಾತ್ರಾ ಮಹೋತ್ಸವ ಸಮಿತಿ ಮುಂದಾಗಿದೆ.
ಸುತ್ತೂರಿನಲ್ಲಿ ನಡೆಯುವ ಜಾತ್ರೆ ಬರೀ ಜಾತ್ರೆಯಾಗಿರದೆ ಇದೊಂದು ಪರಂಪರೆ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಮಹೋತ್ಸವಗಳ ಸಂಗಮದೊಂದಿಗೆ ಗ್ರಾಮೀಣ ಸೊಗಡನ್ನು ಬಿಂಬಿಸುವ ಕಲೆಗಳ ಪ್ರದರ್ಶನವಿದು. ಕಪಿಲ ನದಿ ದಡದಲ್ಲಿ ನೆಲೆನಿಂತಿರುವ ಸುತ್ತೂರು ಕ್ಷೇತ್ರದಲ್ಲಿ ನಡೆಯುವ ಜಾತ್ರೆ ಒಂದು ದಿನದಲ್ಲಿ ಮುಗಿದು ಹೋಗುವ ಜಾತ್ರೆಯಲ್ಲ. ಸುಮಾರು ಆರು ದಿನಗಳ ಕಾಲ ನಡೆಯುವ ಜಾತ್ರೆ.
ಇದರಲ್ಲಿ ಆರೋಗ್ಯ ಮೇಳ, ಕೃಷಿ ಮೇಳ, ಉತ್ಪಾದಕ ಮತ್ತು ಗ್ರಾಹಕ ಮೇಳ, ಕ್ರೀಡಾ ಮೇಳ, ಸಾಂಸ್ಕೃತಿಕ ಮೇಳ, ಶೈಕ್ಷಣಿಕ ಮೇಳ, ಸಾಹಿತ್ಯ ಮತ್ತು ಪುಸ್ತಕ ಮೇಳ, ಸರ್ವಧರ್ಮ ಸಮ್ಮಿಲನ, ಸಾಮೂಹಿಕ ವಿವಾಹ, ವಿವಿಧ ವಸ್ತು ಪ್ರದರ್ಶನಗಳು, ದನಗಳ ಜಾತ್ರೆ, ಜಾನಪದ ಜಾತ್ರೆ, ಕುಸ್ತಿ ಪಂದ್ಯಾವಳಿ, ನಗೆ ಉತ್ಸವ, ನಾಟಕ, ನೃತ್ಯ, ವಚನಗಾಯನ, ಸುಗಮ ಸಂಗೀತ, ಯಕ್ಷಗಾನ..ಹೀಗೆ ನಾನಾ ವೈವಿಧ್ಯ ಕಾರ್ಯಕ್ರಮಗಳ ಸಂಗಮ.[ಹುಣಸೂರಿನ ಮೂರು ರಸ್ತೆಗಳಲ್ಲಿ ಮೆರವಣಿಗೆ ಬಂದ್]
ಈ ಜಾತ್ರೆಯಲ್ಲಿ ಏನೆಲ್ಲಾ ವಿಶೇಷಗಳಿರುತ್ತವೆ? ಯಾವ ದಿನ ಏನು ಕಾರ್ಯಕ್ರಮವಿರುತ್ತದೆ? ಮೈಸೂರು ಜಾತ್ರೆಗೆ ಹೇಗೆ ಸಜ್ಜಾಗುತ್ತಿದೆ? ಎಷ್ಟು ಮಂದಿ ಬರುವ ನಿರೀಕ್ಷೆ ಇದೆ ಹೀಗೆ ನಾನಾ ಮಾಹಿತಿ ಇಲ್ಲಿದೆ ನೋಡಿ.
ಜಾತ್ರೆಯ ಮೆರಗು ಹೆಚ್ಚಿಸಲು ಬಣ್ಣ
ಜಾತ್ರೆಯ ಆವರಣ ಸುಂದರವಾಗಿ ಕಂಗೊಳಿಸಲೆಂಬ ಕಾರಣಕ್ಕೆ ಈಗಾಗಲೇ ಜಾತ್ರೆಯ ಆವರಣವನ್ನು ಬಣ್ಣದಿಂದ ಸುಂದರಗೊಳಿಸಲಾಗುತ್ತಿದೆ.
ಸುತ್ತೂರು ಶ್ರೀ ಶಿವಯೋಗಿಗಳ ಜಾತ್ರಾ ಹೇಗೆ ಆರಂಭವಾಗುತ್ತದೆ?
ಜಾತ್ರೆಯ ಆರು ದಿನಗಳ ಕಾಲಾವಧಿಯಲ್ಲಿ ಒಂದೊಂದು ರೀತಿಯ ವಿಶೇಷತೆಯಿರುತ್ತದೆ. ಸುತ್ತೂರಿನ ಶ್ರೀಮಠದಿಂದ ಆದಿಜಗದ್ಗುರು ಶಿವಯೋಗಿಗಳ ಉತ್ಸವಮೂರ್ತಿಯನ್ನು ಕರ್ತೃಗದ್ದುಗೆಗೆ ತರುವುದರೊಂದಿಗೆ ಜಾತ್ರೆ ಫೆಬ್ರವರಿ ೫ರಂದು ಆರಂಭಗೊಳ್ಳಲಿದೆ.
ಜಾತ್ರೆಯ ಎರಡನೇ ದಿನ ಏನಿದೆ ವಿಶೇಷ?
ಜಾತ್ರೆಯ ಎರಡನೇ ದಿನ ಫೆಬ್ರವರಿ 6ರಂದು ಸಹಸ್ರ ಕುಂಭೋತ್ಸವ ನಡೆಯುತ್ತದೆ. ಕುಂಭಗಳು ಶುಭದ ಸಂಕೇತ. ಸಹಸ್ರ ಕುಂಭೋತ್ಸವದ ಬಳಿಕ ಮಿಕ್ಕ ಎಲ್ಲಾ ಕಾರ್ಯಕ್ರಮಗಳು ಜರುಗಲಿವೆ.
ಮೂರನೇ ದಿನದ ವಿಶೇಷ ಏನು?
ಜಾತ್ರೆಯ ಮೂರನೇ ದಿನ ಫೆಬ್ರವರಿ 7ರಂದು ಬೆಳಿಗ್ಗೆ ರಥೋತ್ಸವ ನಡೆಯುತ್ತದೆ. ಸಹಸ್ರಾರು ಮಂದಿ ಸೇರುವ ನಿರೀಕ್ಷೆ ಇದೆ.
ನಾಲ್ಕನೇ ದಿನದ ವಿಶೇಷತೆ ಏನು?
ನಾಲ್ಕನೇ ದಿನ ಫೆಬ್ರವರಿ 8ರ ಸಂಜೆ ನಡೆಯುವ ಶ್ರೀ ಮಹದೇಶ್ವರ ಕೊಂಡೋತ್ಸವ ಮತ್ತು ಮುತ್ತಿನ ಪಲ್ಲಕ್ಕಿ ಉತ್ಸವ ಗಮನಸೆಳೆಯುತ್ತದೆ
ಐದನೇ ದಿನವೇ ಜಾತ್ರೆ ಕಳೆಗಟ್ಟಲಿದೆ
ಐದನೇ ದಿನ ಫೆಬ್ರವರಿ 9ರ ರಾತ್ರಿ ಲಕ್ಷದೀಪೋತ್ಸವ ಹಾಗೂ ತೆಪ್ಪೋತ್ಸವ ಏರ್ಪಡಿಸಲಾಗಿದೆ. ಇಡೀ ದೀಪಗಳ ಅಲಂಕಾರದಿಂದ ಕಳೆಗಟ್ಟಲಿದೆ.
ಕೊನೆಯದಿನ ಏನೆಲ್ಲಾ ಕಾರ್ಯಕ್ರಮಗಳಿವೆ?
ಆರನೇ ದಿನ ಅಂದರೆ ಕೊನೆ ದಿನ ಫೆಬ್ರವರಿ 10ರಂದು ಅನ್ನ ಬ್ರಹ್ಮೋತ್ಸವ, ಶ್ರೀ ವೀರಭದ್ರೇಶ್ವರ ಕೊಂಡೋತ್ಸವಗಳು ನಡೆಯುತ್ತವೆ.
ಜಾತ್ರೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಏನು?
ಜಾತ್ರೆಯ ಸಂದರ್ಭ ನಡೆಯುವ ಕಲಾತಂಡಗಳ ಮೆರವಣಿಗೆ ಛತ್ರಿ, ಚಾಮರ, ಸೂರಾಪಾನಿ, ಗಾರುಡಿಗೊಂಬೆ, ಮರಗಾಲು ಕುಣಿತ, ನೃತ್ಯ, ವೀರಗಾಸೆ, ಡೊಳ್ಳು ಹಾಗೂ ಪೂಜಾ ಕುಣಿತ, ಕರಡಿ ಮೇಳ, ನಾದಸ್ವರ ಸೇರಿ ವಿವಿಧ ಜನಪದ ಕಲಾತಂಡಗಳೊಂದಿಗೆ ಸಾಗುತ್ತಿದ್ದರೆ ಅದನ್ನು ನೋಡುವುದೇ ಕಣ್ಣಿಗೊಂದು ಹಬ್ಬವಾಗುತ್ತದೆ.
ಅನ್ನದಾಸೋಹವೂ ಇದೆ.
ಈ ಸುತ್ತೂರು ಜಾತ್ರೆಗೆ ಬರುವ ಜನರಿಗೆ ದಾಸೋಹದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗುತ್ತಿದ್ದು, ಯಾವುದೇ ಕುಂದು ಕೊರತೆ ಎದುರಾಗದಂತೆ ನೋಡಿಕೊಳ್ಳಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ.
ಜಾತ್ರೆಯಲ್ಲಿ ಇನ್ನು ಯಾವ ಉತ್ಸವಗಳು ಜರುಗಲಿವೆ?
ಜಾತ್ರೆಯ ಸಂದರ್ಭ ಶ್ರೀ ಕ್ಷೇತ್ರದಲ್ಲಿರುವ ಕರ್ತೃಗದ್ದುಗೆ ಮತ್ತು ಪುರಾಣ ಪ್ರಸಿದ್ಧ ದೇವಾಲಯಗಳಾದ ಶ್ರೀ ಸೋಮೇಶ್ವರ, ಶ್ರೀ ಮಹದೇಶ್ವರ, ಶ್ರೀ ಶಂಕರನಾರಾಯಣ, ಶ್ರೀ ವೀರಭದ್ರೇಶ್ವರ, ಶ್ರೀ ನಾರಾಯಣಸ್ವಾಮಿ ದೇವಾಲಯಗಳಲ್ಲಿ ತ್ರಿಕಾಲ ಪೂಜೆ, ಮಹಾರುದ್ರಾಭಿಷೇಕ, ನವನೀತಾಲಂಕಾರ, ಹಸಿರುವಾಣಿ ಅಲಂಕಾರ ಹಾಗೂ ಗುರುಪರಂಪರೆಯ ಸಂಸ್ಮರಣೋತ್ಸವಗಳು ಕೂಡ ನಡೆಯುತ್ತವೆ.