ಮೈಸೂರು ಕಾಗದ ಕಾರ್ಖಾನೆ ಶೀಘ್ರ ಖಾಸಗಿ ಆಡಳಿತಕ್ಕೆ
ಮೈಸೂರು, ಜ. 29: ರಾಜ್ಯ ಸರ್ಕಾರಿ ಒಡೆತನದ ಮೈಸೂರು ಪೇಪರ್ ಮಿಲ್ಸ್ ಲಿ. ಹಲವು ವರ್ಷಗಳಿಂದ ನಷ್ಟದಲ್ಲಿದೆ. ಆದ್ದರಿಂದ ಅನಿವಾರ್ಯವಾಗಿ ಪೇಪರ್ ಹಾಗೂ ಸಕ್ಕರೆ ಮಿಲ್ಗಳನ್ನು ಖಾಸಗಿ ವಲಯದ ಆಡಳಿತಕ್ಕೆ ಒಪ್ಪಿಸಲು ರಾಜ್ಯ ಸರ್ಕಾರ ತಯಾರಿ ನಡೆಸಿದೆ.
ಪ್ರಸ್ತುತ ಕಾರ್ಖಾನೆ 475 ಕೋಟಿ ರು. ನಷ್ಟದಲ್ಲಿದೆ. ಈ ಮೊತ್ತವನ್ನು ಭರಿಸುವುದು ಹಾಗೂ ಕಾರ್ಖಾನೆ ನಿರ್ವಹಣೆ ಕಷ್ಟವಾಗಿರುವ ಕಾರಣ ಆಡಳಿತವನ್ನು ಖಾಸಗಿ ವಲಯಕ್ಕೆ ಒಪ್ಪಿಸಲು ರಾಜ್ಯ ಸರ್ಕಾರ ಯೋಚಿಸುತ್ತಿದೆ. [ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ಕೈಬಿಡಿ]
ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಮೈಸೂರು ಪೇಪರ್ ಮಿಲ್ ನಿರ್ದೇಶಕಿ ಕೆ. ರತ್ನಪ್ರಭಾ, "ಕಂಪನಿಯಲ್ಲಿ ನಷ್ಟ ಕಡಿಮೆ ಮಾಡಲು ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ. ಲೀಸ್ ಆಧಾರದಲ್ಲಿ ಖಾಸಗಿ ಆಡಳಿತಕ್ಕೆ ವಹಿಸಿಕೊಡುವ ಯೋಚನೆ ಇದೆ. ಸಚಿವ ಸಂಪುಟದಿಂದ ಅನುಮೋದನೆ ಸಿಕ್ಕ ಮೇಲೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ. [ಭದ್ರತಾ ಸಿಬ್ಬಂದಿಗೆ ಬಾಂಬ್ ದಾಳಿ ತಡೆ ತರಬೇತಿ]
"ಲೀಸ್ ಆಧಾರದಲ್ಲಿ ಖಾಸಗಿ ವಲಯಕ್ಕೆ ಆಡಳಿತ ಮಂಡಳಿ ಒಪ್ಪಿಸಿದರೂ ಕಂಪನಿಯ ಆಸ್ತಿ ಹಾಗೂ ಜಮೀನುಗಳು ರಾಜ್ಯ ಸರ್ಕಾರದ ಒಡೆತನದಲ್ಲಿಯೇ ಇರುತ್ತವೆ" ಎಂದು ತಿಳಿಸಿದ್ದಾರೆ.
ಕೆಲಕಾಲ ಮುಚ್ಚಿತ್ತು : ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶದಂತೆ ಈಚೆಗಷ್ಟೇ ಕಂಪನಿಯಲ್ಲಿ ಕಾಗದ ತಯಾರಿಕೆ ಘಟಕದ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಈ ಆದೇಶ ಪ್ರಶ್ನಿಸಿ ಕಂಪನಿಯು 'ರಾಷ್ಟ್ರೀಯ ಹಸಿರು ನ್ಯಾಯಾಲಯ'ಕ್ಕೆ ಮೊರೆ ಹೋಗಿತ್ತು. ಕಂಪನಿಯ ಮನವಿ ಪರಿಗಣಿಸಿದ ನ್ಯಾಯಾಲಯ ಕಂಪನಿಯ ಪುನರುಜ್ಜೀವನಕ್ಕೆ ಕ್ರಮ ಕೈಗೊಳ್ಳಲು ಕಾಲಾವಕಾಶ ನೀಡಿತ್ತು. [ಹೃದಯ ನಿಂತರೂ ಕರ್ತವ್ಯ ಪ್ರಜ್ಞೆ ಮೆರೆದ ಚಾಲಕ]
ಮೈಸೂರು ಪೇಪರ್ ಮಿಲ್ ಅನ್ನು 1937ರಲ್ಲಿ ಅಂದಿನ ಮಹಾರಾಜರಾಗಿದ್ದ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ್ದರು. 1977ರಲ್ಲಿ ರಾಜ್ಯ ಸರ್ಕಾರಿ ಒಡೆತನಕ್ಕೆ ಸಿಕ್ಕಿದೆ. ಕಂಪನಿಯ ಷೇರುಗಳು ಮುಂಬೈ ಷೇರು ಮಾರುಕಟ್ಟೆಯ ಪಟ್ಟಿಗೂ ಸೇರಿವೆ. [ಮೈಸೂರಲ್ಲಿ ಮತ್ತೊಂದು ಜೂ ಶೀಘ್ರ]
ರಾಜ್ಯ ಸರ್ಕಾರ ಶೇ. 65ರಷ್ಟು ಷೇರುಗಳನ್ನು ಹೊಂದಿದೆ. ಶೇ. 18ರಷ್ಟು ಷೇರು IDBI ಮತ್ತು ಇತರ ಆರ್ಥಿಕ ಸಂಸ್ಥೆಗಳ ಒಡೆತನದಲ್ಲಿವೆ. ಉಳಿದ ಶೇ. 17ರಷ್ಟು ಷೇರುಗಳನ್ನು ಸಾರ್ವಜನಿಕರು ಹೊಂದಿದ್ದಾರೆ.