ಪರಮೇಶ್ವರರಿಗೆ ಹಾರದ ಬದಲು ರೈತರ ಕಪ್ಪು ಬಾವುಟ!
ಶ್ರೀರಂಗಪಟ್ಟಣ, ಆಗಸ್ಟ್ 08 : ಇತ್ತೀಚೆಗೆ ಮಹದಾಯಿ ಯೋಜನೆಗಾಗಿ ಹೋರಾಟ ನಡೆಸಿದ ಯಮನೂರು ರೈತರ ಮೇಲೆ ದೌರ್ಜನ್ಯ ನಡೆಸಿದ ಪೊಲೀಸರ ವಿರುದ್ಧದ ಆಕ್ರೋಶವನ್ನು ರೈತರು ಗೃಹ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಧಿಕ್ಕಾರ ಕೂಗುವ ಮೂಲಕ ಪ್ರದರ್ಶಿಸಿದರು.
ಪಟ್ಟಣದಲ್ಲಿ ಸ್ಥಾಪನೆ ಮಾಡಲಾಗಿರುವ ಗ್ರಾಮಾಂತರ ಪೊಲೀಸ್ ಠಾಣೆಯ ಉದ್ಘಾಟನೆಗಾಗಿ ಸೋಮವಾರ ಆಗಮಿಸಿದ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರಿಗೆ ತಾಲೂಕು ರೈತ ಸಂಘದ ಕಾರ್ಯಕರ್ತರು ಪಟ್ಟಣದ ಚೆಕ್ಪೋಸ್ಟ್ ಬಳಿ ಕಪ್ಪು ಬಾವುಟ ಪ್ರದರ್ಶಿಸಿ ಧಿಕ್ಕಾರ ಕೂಗಿದರು.[ಪೊಲೀಸರ ದೌರ್ಜನ್ಯ ಖಂಡಿಸಿ ಜೆಡಿಎಸ್ ನಿಂದ ಪ್ರತಿಭಟನೆ]
ಸಾಮಾನ್ಯವಾಗಿ ಸಚಿವರು ಬರುವಾಗ ಹಾರ ಹಿಡಿದು ನೂಕು ನುಗ್ಗಲಿನಲ್ಲಿ ನಿಂತು ಹಾರ ಹಾಕಲು ಪೈಪೋಟಿ ನಡೆಸುತ್ತಿದ್ದವರು ಇವತ್ತು ಕಪ್ಪು ಬಾವುಟ ಹಿಡಿದು ನಿಂತ ರೈತರನ್ನು ಕಂಡು ಪೆಚ್ಚಾದರು.[ಸಿದ್ದರಾಮಯ್ಯ ಆಪ್ತ ಮರೀಗೌಡ ಕಾಂಗ್ರೆಸ್ನಿಂದ ಅಮಾನತು]
ಮಹದಾಯಿ ಯೋಜನೆಗಾಗಿ ನರಗುಂದ ಮತ್ತು ನವಲಗುಂದದಲ್ಲಿ ಹೋರಾಟ ನಡೆಸುತ್ತಿದ್ದ ರೈತರು ಮತ್ತು ಮಹಿಳೆಯರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದು, ಅಮಾಯಕ ರೈತರನ್ನು ಬಂಧಿಸಿದ್ದಾರೆ. ಕೂಡಲೇ ಬಂಧಿತ ರೈತರನ್ನು ಬಿಡುಗಡೆ ಮಾಡಿ, ರೈತರು ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿರುವ ಪೊಲೀಸ್ ಅಧಿಕಾರಿಗಳು ಹಾಗೂ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ರೈತರ ಅಹವಾಲು ಸ್ವೀಕರಿಸಿದ ಗೃಹ ಸಚಿವರು ಅಲ್ಲಿಂದ ಕಾರ್ಯಕ್ರಮ ಆಯೋಜನೆಗೊಂಡಿದ್ದ ಸ್ಥಳಕ್ಕೆ ತೆರಳಿದರು. ಮಂಡ್ಯದಲ್ಲಿ ರೈತರು ತಿರುಗಿ ಬಿದ್ದರೆ ಎಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬ ಅರಿವಿರುವುದರಿಂದ ಸಚಿವರ ಮುಖ ಪೆಚ್ಚಾದಂತೆ ಕಂಡುಬಂದಿತು.