ಸಿಎಂ ಸಿದ್ದರಾಮಯ್ಯ ವಿರುದ್ಧ ಶ್ರೀನಿವಾಸ ಪ್ರಸಾದ್ ವಾಗ್ದಾಳಿ
ಮೈಸೂರು, ಅಕ್ಟೋಬರ್, 12: ಮೈಸೂರಿನಲ್ಲಿ ತಮ್ಮ ರಾಜೀನಾಮೆ ನಿರ್ಧಾರ ಪ್ರಕಟಿಸಿದ ನಂಜನಗೂಡು ಶಾಸಕ ವಿ.ಶ್ರೀನಿವಾಸ ಪ್ರಸಾದ್ 'ನನ್ನ ರಾಜೀನಾಮೆ ನಿರ್ಧಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೇರ ಹೊಣೆ ಎಂದು ಸಿಎಂ ವಿರುದ್ಧ ನೇರ ವಾಗ್ದಾಳಿ ನಡೆಸಿದರು.
"ಸಚಿವ ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ನಡೆ ತೀವ್ರ ಅಸಮಧಾನ ತಂದಿದೆ. ಸಂಪುಟದಿಂದ ನನ್ನ ಕೈಬಿಡುವುದಕ್ಕೂ ಮುಂಚೆ ಯಾವುದೇ ಮಾಹಿತಿ ನೀಡದೆ ಏಕಾಏಕಿ ಸಚಿವ ಸ್ಥಾನದಿಂದ ನನ್ನನ್ನು ಕೆಳಗಿಳಿಸಿದ್ದು ಎಷ್ಟು ಸರಿ' ಎಂದು ಅವರು ಪ್ರಶ್ನಿಸಿದರು.
ಸಚಿವ ಸಂಪುಟ ಪುನರ್ ರಚನೆ ಸಂದರ್ಭದಲ್ಲಿ "ಪರಿಣಾಮಕಾರಿಯಾಗಿ ಕೆಲಸ ಮಾಡುವವರನ್ನು ಮಾತ್ರ ಸಂಪುಟದಲ್ಲಿ ಇರಿಸಿಕೊಳ್ಳುತ್ತಿದ್ದೇವೆ ಎಂದು ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನನುಭವಿ ಹಾಗೂ ಪ್ರಥಮ ಬಾರಿಗೆ ಶಾಸಕರಾಗಿರುವ ಪ್ರಿಯಾಂಕ್ ಖರ್ಗೆ ಅವರನ್ನು ಯಾವ ಆಧಾರದ ಮೇರೆಗೆ ಸಚಿವ ಸಂಪುಟಕ್ಕೆ ಸೇರ್ಪಡಿಸಿಕೊಂಡರು'' ಎಂದು ಅವರು ಕಿಡಿಕಾರಿದರು. [ಕಾಂಗ್ರೆಸ್ ಗೆ ರಾಜೀನಾಮೆ ನೀಡಲು ಶ್ರೀನಿವಾಸ್ ಪ್ರಸಾದ್ ನಿರ್ಧಾರ]
"42 ವರ್ಷ ರಾಜಕೀಯ ಅನುಭವದ ಹಿನ್ನೆಲೆಯಿರುವ ಮತ್ತು ಸಚಿವರಾಗಿ ಕೆಲಸ ಮಾಡಿರುವ ಹೋರಾಟಗಾರರಾಗಿ ಗುರುತಿಸಿಕೊಂಡಿರುವ ನನ್ನಂತಹ ನಾಯಕನನ್ನು ಮೂಲೆಗುಂಪು ಮಾಡುವ ಹಿಂದಿನ ಉದ್ದೇಶವಾದರೂ ಏನು" ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
"ಧರಂಸಿಂಗ್ ನೇತೃತ್ವದ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನ ಕಳೆದುಕೊಂಡು ಅಸಹಾಯಕರಾಗಿದ್ದ ಸಿದ್ದರಾಮಯ್ಯ ಅವರ ಸಹಾಯಕ್ಕೆ ಬಂದಿದ್ದು ಶ್ರೀನಿವಾಸ್ ಪ್ರಸಾದ್ ಒಬ್ಬರೇ. ಅವರ ಅಹಿಂದ ಸಂಘಟನೆ ನಿರ್ಮಾಣದಲ್ಲಿ ಶ್ರೀನಿವಾಸ್ ಪ್ರಸಾದ್ ಶ್ರಮವೂ ಸಾಕಷ್ಟಿದೆ. ಇದನ್ನೆಲ್ಲಾ ಅವರು ಮರೆತಿದ್ದಾರೆ" ಎಂದು ಅವರು ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.[ಭಿನ್ನಮತೀಯರ 'ರಾಜಕೀಯ'ದಲ್ಲಿ ಏಕಾಂಗಿಯಾದ ಶ್ರೀನಿವಾಸ ಪ್ರಸಾದ್]
ಇಂತಹ ವಿಚಾರಗಳು ಸಾಕಷ್ಟಿವೆ ಅವುಗಳನ್ನೆಲ್ಲಾ ಪಕ್ಷದಲ್ಲಿ ಇದ್ದುಕೊಂಡು ಹೇಳಬಾರದು. ರಾಜೀನಾಮೆ ನೀಡಿದ ನಂತರ ತಿಳಿಸುತ್ತೇನೆ ಎಂದು ಹೇಳಿದರು.
ರಾಜೀನಾಮೆ ನಿರ್ಧಾರವನ್ನು ಪಕ್ಷದ ಹೈ ಕಮಾಂಡ್ ಗೆ ತಿಳಿಸಲಾಗಿದೆ. ಈ ವಿಚಾರದಲ್ಲಿ ನಾವು ಅಸಹಾಯಕರು ಎಂದು ಹೇಳಿರುವ ಹೈಕಮಾಂಡ್ ರಾಜೀನಾಮೆ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದೆ ಎಂದು ಅವರು ಹೇಳಿದ್ದಾರೆ.