ತಂದೆಯ ಮರ್ಮಾಂಗ ಕತ್ತರಿಸಿ ಕೊಲೆಗೈದಿದ್ದ ಮಗನಿಗೆ ಜೀವಾವಧಿ ಶಿಕ್ಷೆ
ಮೈಸೂರು, ಮಾರ್ಚ್ 19 : ಆಸ್ತಿಗಾಗಿ ಹೆತ್ತ ತಂದೆಯ ಮರ್ಮಾಂಗವನ್ನೇ ಕತ್ತರಿಸಿ, ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದ ಮಗನಿಗೆ ಮೈಸೂರು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ.
ಮೈಸೂರಿನ ಗೋಕುಲಂನ ನಿವಾಸಿ ರಾಜೇಶ್ (44) ಎಂಬಾತ 2015ರ ಆಗಸ್ಟ್ 6ರಂದು ತನ್ನ ತಂದೆ ಮಾದಯ್ಯ(82) ಎಂಬವರ ತಲೆಗೆ ಸುತ್ತಿಗೆಯಿಂದ ಹೊಡೆದು ಮರ್ಮಾಂಗ ಕತ್ತರಿಸಿ ಹತ್ಯೆ ಮಾಡಿದ್ದ.
ತಂದೆಯ ಅಸ್ಥಿಯನ್ನು ಶ್ರೀರಂಗಪಟ್ಟಣದ ಕಾವೇರಿ ನದಿಗೆ ಬಿಡಲು ತೆರಳಿದಾಗ ರಾಜೇಶ್ ನಡತೆ ಕುಟುಂಬದ ಸದಸ್ಯರಲ್ಲಿ ಅನುಮಾನ ಮೂಡಿಸಿತ್ತು. ಬಳಿಕ ಮನೆಗೆ ಮರಳಿದ ನಂತರ ಕುಟುಂಬದ ಸದಸ್ಯರೇ ರಾಜೇಶ್ ನನ್ನು ಪೊಲೀಸರಿಗೊಪ್ಪಿಸಿದ್ದರು.
ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದ. ಜಯಲಕ್ಷ್ಮಿಪುರಂ ಠಾಣೆಯ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಸಹೋದರರೇ ಈತನ ವಿರುದ್ಧ ಸಾಕ್ಷಿ ಹೇಳಿದರು.
ಇದನ್ನು ವಿಚಾರಣೆ ನಡೆಸಿದ ನ್ಯಾಯಾಧೀಶ ವಿಜಯಕುಮಾರ್ ಎಂ.ಆನಂದಶೆಟ್ಟಿ ತಂದೆ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ ನೀಡಿ ಆದೇಶ ಹೊರಡಿಸಿದರು.
ಸೊಸೆ ಮೇಲೆ ಕಳ್ಳತನ ದೂರು ದಾಖಲಿಸಿದ ಮಾವ : ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಸೊಸೆಯೇ ಅನ್ಯ ಪುರುಷನ ಸಹಾಯದೊಂದಿಗೆ ಕಳುವು ಮಾಡಿ ಬೇರೆಡೆಗೆ ಸಾಗಿಸಿದ್ದಾಳೆ ಎಂದು ಆರೋಪಿಸಿ ಆಕೆಯ ಮಾವ ವಿವಿಪುರಂ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ.
ಮೈಸೂರಿನ ಗೋಕುಲಂ ಮೂರನೇ ಕ್ರಾಸ್ ನಿವಾಸಿ ಎಂ.ವಿ.ಪ್ರಕಾಶ್ ಮಗ ವರದಪ್ರಭಾ ಪತ್ನಿ ಲಕ್ಷ್ಮಿಪ್ರಭಾ ಈ ಕೃತ್ಯವೆಸಗಿದ್ದಾರೆ ಎಂದು ಆರೋಪಿಸಲಾಗಿದೆ. ಈಕೆ ಒಂದು ಮಗುವಾಗುವವರೆಗೂ ಮನೆಯಲ್ಲಿಯೇ ಇದ್ದಳು.
ಬಳಿಕ ಲಕ್ಷ್ಮಿಕಾಂತ ಎಂಬವನ ಜೊತೆ ಸೇರಿ ಎರಡು ತಾಳಿ ಸಹಿತ ಚಿನ್ನದ ಗುಂಡು ಕರಿಮಣಿ ಸರ, 7ರತ್ನಗಳಿಂದ ಕೂಡಿದ ಒಂದು ನೆಕ್ಲೆಸ್, ನವರತ್ನ ಪದಕ, 4 ಚಿನ್ನದ ಪದಕ ಸಹಿತ ನವರತ್ನ ಪದಕ, ಅಸಲು ವಜ್ರದ ಎಂಟು ಓಲೆ, ಆರು ಅಷ್ಟಲಕ್ಷ್ಮಿ ಬೆಳ್ಳಿ ತಟ್ಟೆ, ಸೇರಿದಂತೆ ಇತರೆ ಒಡವೆಗಳನ್ನು ಕಳುವು ಮಾಡಿದ್ದಾಳೆ ಎಂದು ವಿವಿಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.