ರಾಕೇಶ್ನನ್ನು ರಾಜಕೀಯಕ್ಕೆ ಕರೆತರುವುದು ಸಿದ್ದರಾಮಯ್ಯ ಕನಸಾಗಿತ್ತು
ಮೈಸೂರು, ಜುಲೈ 30 : ತಮ್ಮ ಪುತ್ರ ರಾಕೇಶ್ ಸಿದ್ದರಾಮಯ್ಯ ಅವರನ್ನು ರಾಜಕೀಯಕ್ಕೆ ಕರೆತರಬೇಕು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸು ಪುತ್ರ ರಾಕೇಶ್ ಅವರ ಅಕಾಲಿಕ ಮರಣದಿಂದಾಗಿ ಕೊನೆಯಾಗಿದೆ.
ಸಿದ್ದರಾಮಯ್ಯ ಅವರ ಸ್ವಕ್ಷೇತ್ರ ವರುಣಾದಲ್ಲಿ ರಾಕೇಶ್ ಸಿದ್ದರಾಮಯ್ಯ (39) ಸಕ್ರಿಯರಾಗಿದ್ದರು. ಬೆಂಗಳೂರಿನಲ್ಲಿ ಮತ್ತು ಮೈಸೂರಿನಲ್ಲಿ ಮುಖ್ಯಮಂತ್ರಿಗಳ ಜನತಾದರ್ಶನ ಕಾರ್ಯಕ್ರಮಗಳು ನಡೆದಾಗ ರಾಕೇಶ್ ಸಿದ್ದರಾಮಯ್ಯ ಅವರು ಆಗಾಗ ಕಾಣಿಸಿಕೊಳ್ಳುತ್ತಿದ್ದರು. [ಕರಳು ಬೇನೆ ಕಾಯಿಲೆಗೆ ಬಲಿಯಾದ ರಾಕೇಶ್ ಸಿದ್ದರಾಮಯ್ಯ]
'2013ರ ವಿಧಾನಸಭೆ ಚುನಾವಣೆಯಲ್ಲಿಯೇ ಸ್ಪರ್ಧಿಸಲು ರಾಕೇಶ್ ಬಯಸಿದ್ದ. ಆದರೆ, ಆತನ ರಾಜಕೀಯ ಪ್ರವೇಶದ ಕುರಿತು ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ 2016 ಜನವರಿಯಲ್ಲಿ ಹೇಳಿದ್ದರು.[ಪುತ್ರ ಪಟ್ಟಾಭಿಷೇಕದ ಸುಳಿವು ನೀಡಿದ ಸಿದ್ದರಾಮಯ್ಯ]
2018ರ ವಿಧಾನಸಭೆ ಚುನಾವಣೆಗೆ ರಾಕೇಶ್ ಅವರು ವರುಣಾ ಕ್ಷೇತ್ರ, ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರವನ್ನು ತೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಮಗನ ಬಗ್ಗೆ ಸಿದ್ದರಾಮಯ್ಯ ಏನು ಹೇಳಿದ್ದರು...ಚಿತ್ರಗಳಲ್ಲಿ ಮಾಹಿತಿ.
ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದಿದ್ದರು
'ತಮ್ಮ ಮಗ ರಾಕೇಶ್ ಸಕ್ರಿಯ ರಾಜಕೀಯ ಪ್ರವೇಶ ಮಾಡುವ ಕುರಿತು ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ನಾನು ಸಕ್ರಿಯ ರಾಜಕಾರಣದಲ್ಲಿರುವ ತನಕ ಮಗನನ್ನು ರಾಜಕಾರಣಕ್ಕೆ ಇಳಿಸಬಾರದು ಎಂಬುದು ನನ್ನ ಅನಿಸಿಕೆ' ಎಂದು 2016ರ ಜನವರಿಯಲ್ಲಿ ಮೈಸೂರಿನಲ್ಲಿ ಸಿದ್ದರಾಮಯ್ಯ ಹೇಳಿದ್ದರು.
'ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದರು'
'ಕಳೆದ ಎರಡು ಚುನಾವಣೆಗಳಿಂದಲೇ ವಿಧಾನಸಭೆಗೆ ಸ್ಪರ್ಧಿಸಲು ಬಯಸಿದ್ದಾನೆ. ಆದರೆ, ಈ ಕುರಿತು ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ' ಎಂದು ಸಿದ್ದರಾಮಯ್ಯ ಹೇಳಿದ್ದರು.
ಜನರು ನಿರ್ಧರಿಸಬೇಕು ಎಂದಿದ್ದರು
ಮಗನ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ್ದ ಸಿದ್ದರಾಮಯ್ಯ ಅವರು, 'ಯಾವುದೇ ರಾಜಕಾರಣಿಯನ್ನು ಮೇಲಿನಿಂದ ಹೇರಬಾರದು. ಜನರ ನಡುವಿನಿಂದ ಆರಿಸಿಬರಬೇಕು. ರಾಕೇಶ್ ರಾಜಕೀಯ ಪ್ರವೇಶವನ್ನೂ ಜನರೇ ನಿರ್ಧರಿಸಲಿದ್ದಾರೆ' ಎಂದು ಸಿದ್ದರಾಮಯ್ಯ ಹೇಳಿದ್ದರು.
ವರುಣಾ ಕ್ಷೇತ್ರದ ಅಭ್ಯರ್ಥಿ ಎಂಬ ಸುದ್ದಿ ಹಬ್ಬಿತ್ತು
2018ರ ವಿಧಾನಸಭೆ ಚುನಾವಣೆಗೆ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ವರುಣಾ ಕ್ಷೇತ್ರವನ್ನು ಪುತ್ರ ರಾಕೇಶ್ ಸಿದ್ದರಾಮಯ್ಯ ಅವರಿಗೆ ಬಿಟ್ಟು ಕೊಡಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.
ವರುಣಾ ಕ್ಷೇತ್ರವನ್ನು ಬಿಡುವುದಿಲ್ಲ ಎಂದಿದ್ದರು
'ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನು 7 ಸಲ ಜಯಗಳಿಸಿದ್ದೇನೆ. ಆದ್ದರಿಂದ ಕ್ಷೇತ್ರದ ಮೇಲೆ ಹೆಚ್ಚು ಪ್ರೀತಿ ಇದೆ. ಇದರ ಅರ್ಥ ನಾನು ಅಲ್ಲಿಂದಲೇ ಸ್ಪರ್ಧಿಸುತ್ತೇನೆ ಎಂದಲ್ಲ. ವರುಣಾ ಕ್ಷೇತ್ರವನ್ನು ನಾನು ತೊರೆಯುವುದಿಲ್ಲ' ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದರು.