ಕುಕ್ಕರಹಳ್ಳಿ ಕೆರೆ: ಹದಿನೈದು ದಿನದೊಳಗೆ ಜಿಲ್ಲಾಧಿಕಾರಿಗೆ ವರದಿ
ಕೆರೆ ವೀಕ್ಷಣೆಗೆ ಆಗಮಿಸಿದ ನಿವೃತ್ತ ಪ್ರಾಧ್ಯಾಪಕ ಬೆಂಗಳೂರಿನ ರಾಂಪ್ರಸಾದ್, ನಿವೃತ್ತ ಮುಖ್ಯ ಇಂಜಿನಿಯರ್ ಮೈಸೂರಿನ ಸಿ.ಎನ್.ಬಾಬು ನೇತೃತ್ವದ ತಂಡ ಸ್ಥಳಕ್ಕೆ ತೆರಳಿ ಕೆರೆಯನ್ನು ವೀಕ್ಷಿಸಿತಲ್ಲದೇ ಮಾಹಿತಿಯನ್ನು ಕಲೆ ಹಾಕಿದೆ.
ಮೈಸೂರು, ಮಾರ್ಚ್ 15 : ಕುಕ್ಕರಹಳ್ಳಿ ಕೆರೆ ಸಂರಕ್ಷಣೆ ಕುರಿತಂತೆ ಹದಿನೈದು ದಿನಗಳ ಒಳಗಾಗಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಜ್ಞರ ತಂಡ ತಿಳಿಸಿದೆ.
ಕೆರೆ ವೀಕ್ಷಣೆಗೆ ಆಗಮಿಸಿದ ನಿವೃತ್ತ ಪ್ರಾಧ್ಯಾಪಕ ಬೆಂಗಳೂರಿನ ರಾಂಪ್ರಸಾದ್, ನಿವೃತ್ತ ಮುಖ್ಯ ಇಂಜಿನಿಯರ್ ಮೈಸೂರಿನ ಸಿ.ಎನ್.ಬಾಬು ನೇತೃತ್ವದ ತಂಡ ಸ್ಥಳಕ್ಕೆ ತೆರಳಿ ಕೆರೆಯನ್ನು ವೀಕ್ಷಿಸಿತಲ್ಲದೇ ಮಾಹಿತಿಯನ್ನು ಕಲೆ ಹಾಕಿದೆ. ಸಾರ್ವಜನಿಕರ ಪರ-ವಿರೋಧ ನಿಲುವನ್ನು ಕೂಡ ಕ್ರೋಢೀಕರಿಸಿದೆ.
ಕೆರೆಯ ಸಂರಕ್ಷಣೆ ಹೇಗಿರಬೇಕು, ಪರಿಸರ ಸ್ನೇಹಿ ಕಾಮಗಾರಿಯನ್ನು ಯಾವ ರೀತಿ ಕೈಗೊಳ್ಳಬೇಕು, ಇಲ್ಲಿನ ಜೀವ ವೈವಿಧ್ಯಕ್ಕೆ ಹಾನಿಯಾಗದಂತೆ ಯಾವ ರೀತಿ ಕ್ರಮಗಳನ್ನು ಕೈಗೊಳ್ಳಬಹುದು. ಕೆರೆಯ ಇಂದಿನ ಪರಿಸ್ಥಿತಿಗೆ ಕಾರಣವಾಗುವ ಅಂಶಗಳು ಯಾವುವು ಎಂಬುದನ್ನು ವರದಿಯಲ್ಲಿ ಸಂಪೂರ್ಣವಾಗಿ ಉಲ್ಲೇಖಿಸಲಾಗುವುದು ಎಂದಿದ್ದಾರೆ.
ಕೆರೆಯ ಸಂರಕ್ಷಣೆಗಾಗಿ ಶಾಶ್ವತ ಯೋಜನೆಯನ್ನು ತಿಳಿಸಲಾಗುವುದಲ್ಲದೇ, ಸಲಹೆ, ಮಾರ್ಗಸೂಚಿ, ಮಾರ್ಗದರ್ಶನವಿರುವ ವರದಿಯನ್ನು ಮಾರ್ಚ್ ಒಳಗೆ ಜಿಲ್ಲಾಧಿಕಾರಿ ಡಿ.ರಂದೀಪ್ ಅವರಿಗೆ ಸಲ್ಲಿಸಲಾಗುವುದು. ಕೆರೆಯ ಸಂರಕ್ಷಣೆಯು ಶುದ್ಧ ನೀರು ಸಂಗ್ರಹದಿಂದ ಮಾತ್ರ ಸಾಧ್ಯವಿದ್ದು, ಕೊಳಚೆ ನೀರನ್ನು ತಡೆದು ಶುದ್ಧ ನೀರನ್ನು ಹೇಗೆ ಸಂಗ್ರಹಿಸಬೇಕೆನ್ನುವುದರ ಕುರಿತು ಸಲಹೆಯನ್ನೂ ನೀಡಲಾಗುವುದು ಎಂದಿದ್ದಾರೆ.