ನಂಜನಗೂಡು ಶ್ರೀಕಂಠೇಶ್ವರ ಜಾತ್ರೆಗೆ ಹೋಗೋಣ ಬನ್ರೋ
ಮೈಸೂರು, ಫೆ. 5: ನಂಜನಗೂಡು ತಾಲೂಕಿನ ಶ್ರೀಕಂಠೇಶ್ವರ ಸ್ವಾಮಿಯ ದೊಡ್ಡ ಜಾತ್ರೆಯು ಮಾರ್ಚ್ 25ರಿಂದ ಏ. 5ರ ವರೆಗೆ ನಡೆಯಲಿದೆ. ಮಹೋತ್ಸವವನ್ನು ವ್ಯವಸ್ಥಿತವಾಗಿ ನಡೆಸಲು ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಅರ್ಚನಾ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಾತ್ರೆ ಮಹೋತ್ಸವ ಸಿದ್ಧತೆ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಂಜನಗೂಡಿನ ದೊಡ್ಡ ಜಾತ್ರೆಯಲ್ಲಿ ಲೋಪದೋಷಗಳಿಗೆ ಅವಕಾಶ ನೀಡದೆ ಅಧಿಕಾರಿಗಳು ಜವಾಬ್ದಾರಿಯನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕು. ಯಶಸ್ವಿಯಾಗಿ ಜಾತ್ರೆಯ ಕಾರ್ಯ ನಡೆಯುವಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ಜಾತ್ರೆ ಮಹೋತ್ಸವದಲ್ಲಿ ಮಾರ್ಚ್ 29 ರಂದು ಶ್ರೀಕಂಠಮುಡಿ ಉತ್ಸವ, ಏಪ್ರಿಲ್ 1ರಂದು ಶ್ರೀಕಂಠೇಶ್ವರಸ್ವಾಮಿ ಪಂಚ ಮಹಾರಥೋತ್ಸವ, ಏಪ್ರಿಲ್ 3ರಂದು ಶ್ರೀಕಂಠೇಶ್ವರಸ್ವಾಮಿ ತೆಪ್ಪೋತ್ಸವ ಹಮ್ಮಿಕೊಳ್ಳಲಾಗುತ್ತದೆ. ಜಾತ್ರೆಯ ಭದ್ರತೆ, ವಾಹನ ಸಂಚಾರ ಮತ್ತು ಪಾರ್ಕಿಂಗ್ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ರಸ್ತೆಗಳಲ್ಲಿ ಗುಂಡಿಯಿದ್ದರೆ ರಥೋತ್ಸವಕ್ಕೆ ತೊಂದರೆಯಾಗುತ್ತದೆ. ಆದ್ದರಿಂದ ಡಾಂಬರೀಕರಣ ಮಾಡಬೇಕು. ದೇವಾಲಯದ ಸುತ್ತ ಸ್ವಚ್ಛತೆಗೆ ಆದ್ಯತೆ ನೀಡಿ ಸಾಂಕ್ರಮಿಕ ರೋಗ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು. ಆರೋಗ್ಯ ಇಲಾಖೆಯಿಂದ ತಾತ್ಕಾಲಿಕ ಆರೋಗ್ಯ ಕೇಂದ್ರ ತೆರೆದು ವೈದ್ಯರು ಹಾಗೂ ಸಹಾಯ ಸಿಬ್ಬಂದಿ ನೇಮಿಸಬೇಕು ಎಂದರು. [ನಂಜುಂಡೇಶ್ವರನಾ? ಶ್ರೀಕಂಠೇಶ್ವರನಾ?]
ಕಬಿನಿ ನೀರಾವರಿ ಇಲಾಖೆಯವರು ಜಾತ್ರೆ ಉತ್ಸವ ಮುಗಿಯುವವರೆಗೂ ಭಕ್ತರು ಹಾಗೂ ಸಾರ್ವಜನಿಕರ ಸೌಕರ್ಯಕ್ಕೆ ನದಿ ಮತ್ತು ಹುಲ್ಲಹಳ್ಳಿ ನಾಲೆಯಲ್ಲಿ ಹೆಚ್ಚು ನೀರನ್ನು ಹರಿಯಲು ಬಿಡುವಂತೆ ಹಾಗೂ ಕಪಿಲಾ ನದಿಯಲ್ಲಿರುವ ಜೊಂಡು ಹಾಗೂ ಇತರೆ ವಸ್ತುಗಳನ್ನು ತೆಗೆಸಿ ಭಕ್ತರ ಸ್ನಾನಕ್ಕೆ ಅನುಕೂಲ ಮಾಡಿಕೊಡುವಂತೆ ತಿಳಿಸಿದರು.
ನಂಜನಗೂಡು ತಾಲ್ಲೂಕು ಪಂಚಾಯತ್ ನವರು ಜಾತ್ರೆಯ ಸಂದರ್ಭದಲ್ಲಿ ಭಕ್ತರಿಗೆ ತಾತ್ಕಾಲಿಕ ಕುಡಿಯುವ ನೀರಿನ ವ್ಯವಸ್ಥೆ, ತಾತ್ಕಾಲಿಕ ಶೌಚಾಲಯ ಹಾಗೂ ಉಡುಗೆ ಬದಲಾಯಿಸಲು ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಮಾಡಬೇಕೆಂದು ತಿಳಿಸಿದರು.
ಜಾತ್ರೆಯ ದಿನದಂದು ನಿರಂತರ ವಿದ್ಯತ್ ಸರಬರಾಜು ಮಾಡಬೇಕು. ಅಗತ್ಯ ಸ್ಥಳಗಳಲ್ಲಿ ಹೆಚ್ಚುವರಿ ವಿದ್ಯುತ್ ದೀಪ ಅಳವಡಿಸುವುದು. ರಥೋತ್ಸವದ ದಿನದಂದು ಬೆಳಗ್ಗೆ ರಥಗಳು ಹೊರಟು ವಾಪಸ್ಸು ಸ್ವ ಸ್ಥಾನಕ್ಕೆ ಬರುವವರೆಗೆ ರಥ ತೆರಳುವ ಬೀದಿಗಳಲ್ಲಿ ಅಡ್ಡಲಾಗಿ ಹಾಕಿರುವ ವಿದ್ಯುತ್ ಲೈನ್ಗಳನ್ನು ತೆರವುಗೊಳಿಸಿ ರಥೋತ್ಸವ ಮುಗಿದ ನಂತರ ಸಂಪರ್ಕ ಕಲ್ಪಿಸಲು ಕ್ರಮ ವಹಿಸಬೇಕು ಎಂದರು. [ರಥದ ಚಕ್ರ ಸಿಲುಕಿ ಆತಂಕ]
ಎಎಸ್ಪಿ ಪ್ರಕಾಶ್ ನಿಕಂ, ಮುಜರಾಯಿ ತಹಸೀಲ್ದಾರ್ ಯತಿರಾಜ್, ಶ್ರೀಕಂಠೇಶ್ವರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ರೂಪ, ಅಧ್ಯಕ್ಷ ಕೆ.ಎಸ್. ಮೋಹನ್, ಪ್ರಧಾನ ಅರ್ಚಕ ನಾಗಚಂದ್ರ ದೀಕ್ಷಿತ್, ಸದಸ್ಯರಾದ ಶವನಂಜಪ್ಪ, ಮಲ್ಲಿಕಾರ್ಜುನ, ಶಶಿಕಲಾ, ಡಿ. ರಾಮಣ್ಣ ಹಾಗೂ ಇತರೆ ಇಲಾಖೆ ಅಧಿಕಾರಿಗಳು ಸಭೆಯಲ್ಲಿದ್ದರು.