ಬಟಾಬಯಲಾದ ಕೆಆರ್ಎಸ್ ನಲ್ಲಿ ಕ್ರಿಕೆಟ್ ಆಡೋಣ ಬನ್ನಿ
ರಾಜಧಾನಿ ಬೆಂಗಳೂರು ಸೇರಿದಂತೆ ನಾಲ್ಕು ಜಿಲ್ಲೆಗಳಿಗೆ ನೀರು ಒದಗಿಸುತ್ತಿದ್ದ ಕೆಆರ್ ಎಸ್ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದು, ಮಳೆ ಬಾರದಿದ್ದಲ್ಲಿ ಇಲ್ಲಿನ ಜನರು ನೀರಿನ ಅಭಾವ ಎದುರಿಸುವುದು ಖಂಡಿತ.
ಮೈಸೂರು, ಏಪ್ರಿಲ್ 19: ಈಗಾಗಲೇ ಅಲ್ಲಲ್ಲಿ ಮಳೆಯಾಗಿ ವಾತಾವರಣ ತಂಪಾಗುತ್ತಿದ್ದರೂ ದಿನದಿಂದ ದಿನಕ್ಕೆ ನೀರಿನ ಮಟ್ಟ ಕಡಿಮೆಯಾಗುತ್ತಾ ಡೆಡ್ ಸ್ಟೋರೆಜ್ ತಲುಪಿರುವ ಕೆಆರ್ ಎಸ್ ಜಲಾಶಯವನ್ನು ಗಮನಿಸಿದರೆ ಆತಂಕ ಎದುರಾಗದಿರದು.
ಕೆಆರ್ ಎಸ್ ಜಲಾಶಯದ ನೀರನ್ನೇ ನಂಬಿ ಬದುಕುತ್ತಿರುವ ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ನಗರಗಳ ಜನರಿಗೆ ಇದರಿಂದ ಸಮಸ್ಯೆ ತಪ್ಪಿದ್ದಲ್ಲ. ಇದುವರೆಗೆ ಹೇಗೋ ಆಯಿತು, ಮಳೆ ಬಾರದೆ ಇದ್ದರೆ ಮುಂದೆ ಹೇಗಪ್ಪಾ ಎಂಬ ಭಯ ಜನರನ್ನು ಕಾಡತೊಡಗಿದೆ. ಒಂದು ವೇಳೆ ಕಾವೇರಿ ಕಣಿವೆ ಪ್ರದೇಶ ಹಾಗೂ ಕಾವೇರಿಯ ತವರು ಕೊಡಗಿನಲ್ಲಿ ಉತ್ತಮವಾಗಿ ಮಳೆಯಾಗಿ ಕಾವೇರಿ ಮೈಕೈ ತುಂಬಿಕೊಂಡು ಹರಿದರೆ ಜಲಕ್ಷಾಮದಿಂದ ಪಾರಾಗಿ ಜನ ನೆಮ್ಮದಿಯಿಂದ ನೀರು ಕುಡಿಯಬಹುದೇನೋ.[ಮೈಸೂರು ವಿವಿ ಹಂಗಾಮಿ ಕುಲಪತಿಗೆ ಲೇಡಿಸ್ ಹಾಸ್ಟೇಲ್ ನಲ್ಲೇನು ಕೆಲಸ?!]
ಸದ್ಯದ ಪರಿಸ್ಥಿತಿಯಲ್ಲಿ ಕೊಡಗಿನಲ್ಲಿ ಸ್ವಲ್ಪ ಮಟ್ಟಿಗೆ ಮಳೆಯಾಗಿದ್ದು, ಅದು ಮುಂದಿನ ದಿನಗಳಲ್ಲಿ ಬಿರುಸುಗೊಂಡರಷ್ಟೇ ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ ಏರಿಕೆಯಾಗಿ ನೀರಿನ ಸಮಸ್ಯೆಗೆ ಪರಿಹಾರ ಸಿಗಬಹುದು. ಇಲ್ಲವಾದಲ್ಲಿ ಕೆಆರ್ ಎಸ್ ಅನ್ನೇ ಅವಲಂಬಿಸಿರುವ ಹಲವು ಜಿಲ್ಲೆಗಳು ನೀರಿನ ಅಭಾವವನ್ನು ಎದುರಿಸಲೇಬೇಕಾಗುತ್ತದೆ.[ಮೈಸೂರಿನಲ್ಲಿ ಬೆಂಕಿಯುಗುಳುವ ಭೂಮಿ: ಭೂವಿಜ್ಞಾನಿಗಳಿಗೇ ಸವಾಲು!]
ಕಳೆದ ಬಾರಿಗೆ ಹೋಲಿಸಿದರೆ ಜನವರಿಯಿಂದ ಇಲ್ಲಿವರೆಗೆ ಉತ್ತಮ ಮಳೆಯಾಗಿದೆ. ಕಳೆದ ವರ್ಷ ವಾಡಿಕೆಯ ಮಳೆಯಾಗದ ಕಾರಣ ಜಲಾಶಯ ಭರ್ತಿಯಾಗಿರಲಿಲ್ಲ. ಇದರ ಪರಿಣಾಮ ರೈತರ ಬೆಳೆಗಳಿಗೂ ನೀರು ಸಿಗದೆ ರೈತರು ಸಂಕಷ್ಟದ ಜೀವನ ನಡೆಸುವಂತಾಗಿತ್ತು.[ಬಲಮುರಿಯಲ್ಲೂ ಸೊರಗಿದ್ದಾಳೆ ಕಾವೇರಿ!]
ಕುಡಿಯುವ ನೀರಿಗೂ ತತ್ವಾರ
ಈಗಾಗಲೇ ರೈತರ ಜಮೀನಿಗೆ ನೀರು ಹರಿಸದೆ, ಕೇವಲ ಕುಡಿಯಲ್ಲಷ್ಟೆ ನೀರನ್ನು ಬಳಸುತ್ತಿದ್ದರೂ ಜಲಾಶಯ ಡೆಡ್ ಸ್ಟೋರೆಜ್ ತಲುಪಿರುವುದು ಭಯದ ವಾತಾವರಣವನ್ನು ಸೃಷ್ಟಿಸಿದೆ.
ಜಲಾಶಯದ ನೀರಿನ ಮಟ್ಟ
ಇದೀಗ ಜಲಾಶಯದ ನೀರಿನ ಮಟ್ಟವನ್ನು ಗಮನಿಸಿದರೆ 124.80 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 73.95 ಅಡಿಗಿಂತಲೂ ಕಡಿಮೆಯಾಗಿದೆ. 74 ಅಡಿವರೆಗಿನ ನೀರಷ್ಟೇ ಬಳಕೆಗೆ ಯೋಗ್ಯವಾಗಿದೆ.
ತಳದ ನೀರು ಬಳಕೆಗೆ ಯೋಗ್ಯವಲ್ಲ
ಕುಡಿಯುವ ನೀರನ್ನು 68 ಅಡಿವರೆಗೂ ಬಳಸಬಹುದಾಗಿದ್ದು ಆ ನಂತರದ ನೀರು ಕುಡಿಯುವ ನೀರಿನ ಬಳಕೆಗೆ ಯೋಗ್ಯವಲ್ಲ ಎಂದು ಹೇಳಲಾಗುತ್ತದೆ. ಏಕೆಂದರೆ ಅದರಲ್ಲಿ ಪಾಚಿ, ಕಸ ಸೇರಿದಂತೆ ತ್ಯಾಜ್ಯಗಳಿರುವುದರಿಂದ ಬಳಸುವುದಕ್ಕಾಗುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಅದನ್ನು ಮೋಟಾರ್ ಪಂಪ್ ಬಳಸಿ ಮೇಲೆತ್ತಬೇಕಾಗುತ್ತದೆ. ಇಂತಹ ಪರಿಸ್ಥಿತಿ ಬಾರದಿರಲಿ ಎಂಬುದು ಈಗ ಎಲ್ಲರ ಪ್ರಾರ್ಥನೆ.
ರಾಜಧಾನಿಗೆ ಹೆಚ್ಚು ಬೇಡಿಕೆ
ಜಲಾಶಯದಿಂದ ಅತಿ ಹೆಚ್ಚು ಅಂದರೆ 800 ಕ್ಯೂಸೆಕ್ಸ್ ನೀರು ಕೇವಲ ರಾಜಧಾನಿ ಬೆಂಗಳೂರಿಗೇ ಬೇಕಾಗಿದೆ. ಕೆಆರ್ ಎಸ್ ತುಂಬದೇ ಇದ್ದಲ್ಲಿ ಉದ್ಯಾನ ನಗರಿಯ ಜನರು ಕುಡಿಯುವ ನೀರಿಗೂ ಪರದಾಡಬೇಕಾಗುತ್ತದೆ. ಈಗಾಗಲೇ ಹಲವೆಡೆ ಅಂಥ ಪರಿಸ್ಥಿತಿ ಇರುವುದನ್ನು ಅಲ್ಲಗಳೆಯುವಂತಿಲ್ಲ.
ಉತ್ತಮ ಮಳೆಯಾಗಲಿ
ಈ ಬಾರಿ ಉತ್ತಮ ಮಳೆಯಾಗಿ ಕೆಆರ್ ಎಸ್ ತುಂಬಿಕೊಂಡರೆ ಮಾತ್ರ ಜನರು ನೆಮ್ಮದಿಯ ನಿಟ್ಟುಸಿರು ಬಿಡಬಹುದು. ಅದಕ್ಕೆಂದೇ ಈ ಭಾಗದ ಜನರ ಪ್ರಾರ್ಥನೆಯೇನಿದ್ದರೂ ಮಳೆ ಬರಲಿ ಎಂಬುದೇ ಆಗಿದೆ.