ಲೈಂಗಿಕ ಕಿರುಕುಳ: ಮೈಸೂರಿನ ಶ್ರೀನಾಥ್ ಸಂಪಾದಕ ಪರಾರಿ
ಮೈಸೂರು,ಮಾರ್ಚ್,08: ಟ್ಯಾಬ್ಲ್ಯಾಯ್ಡ್ ಪತ್ರಿಕೆ ನಡೆಸುತ್ತಾ, ಕೆಲವು ಮಂದಿಗೆ ಟೋಪಿ ಹಾಕಿ ಚಾನಲ್ ಆರಂಭಿಸಿದ್ದ ಸಂಪಾದಕನೊಬ್ಬ ತನ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಸುದ್ದಿ ಬೆಳಕಿಗೆ ಬಂದಿದ್ದು, ಆರೋಪಿ ತಲೆ ಮರೆಸಿಕೊಂಡಿದ್ದಾನೆ.
ಮೈಸೂರಿನ ಶ್ರೀನಾಥ್ ಪತ್ರಿಕೆಯ ಸಂಪಾದಕ ಪಿ.ಶ್ರೀನಾಥ್ ಎಂಬಾತನೇ ಇದೀಗ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಗುರಿಯಾದವನು. ಈತ ಇತ್ತೀಚೆಗೆ ಸ್ಥಳೀಯ ಕೇಬಲ್ ಚಾನಲ್ ನ್ನು ಆರಂಭಿಸಿದ್ದನು. ಕೆಲಸಕ್ಕೆ ಕೆಲವು ಯುವತಿಯರನ್ನು ನೇಮಕ ಮಾಡಿಕೊಂಡ ಈತ ಕೆಲವು ದಿನಗಳ ಬಳಿಕ ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾ ಲೈಂಗಿಕ ಕಿರುಕುಳ ನೀಡುತ್ತಿದ್ದನು.[ಮಂಗಳೂರು: ಮಹಿಳೆ ಚುಡಾಯಿಸಿದ ವ್ಯಕ್ತಿಗೆ ಯುವಕರಿಂದ ಥಳಿತ]
ವೇತನವನ್ನು ನೀಡದೆ ಲೈಂಗಿಕ ಹಿಂಸೆ ನೀಡುತ್ತಿದ್ದ ಶ್ರೀನಾಥ್ ವಿರುದ್ಧ ತಿರುಗಿ ಬೀಳಲು ಸಾಧ್ಯವಾಗದೆ ಯುವತಿಯರು ಮೌನಕ್ಕೆ ಶರಣಾಗಿದ್ದರು. ಚಾನಲ್ ನ್ನು ಅದ್ಧೂರಿಯಾಗಿ ಹೊರತರಲು ಯೋಚಿಸಿದ್ದನಾದರೂ ಈತನ ಮೋಸಕ್ಕೆ ಬಲಿಯಾದ ವ್ಯಕ್ತಿಯೊಬ್ಬ ಅಪಸ್ವರ ಎತ್ತಿದ್ದನು. ಹೀಗಾಗಿ ಬಂಡವಾಳ ಹೂಡುವವರಿಲ್ಲದೆ ನೆನೆಗುದಿಗೆ ಬಿದ್ದಿತ್ತು.
ಯುವತಿಯರನ್ನು ಬಳಸಿ ಅವರ ಮೂಲಕ ಹಣ ವಸೂಲಿ ಮಾಡುವ ಉದ್ದೇಶದಿಂದ ಕಚೇರಿಯಲ್ಲಿದ್ದ ಯುವತಿಯರಿಗೆ ತುಂಡು ಬಟ್ಟೆ ಹಾಕುವಂತೆ ಒತ್ತಾಯ ಮಾಡುವುದು, ಹಣವಿರುವ ರಾಜಕಾರಣಿಗಳನ್ನು ಆಕರ್ಷಿಸಿ ಅವರಿಂದ ಹಣ ತರಲು ಪುಸಲಾಯಿಸುತ್ತಿದ್ದನಲ್ಲದೆ, ಯುವತಿಯರನ್ನು ಲೈಂಗಿಕ ಕ್ರಿಯೆಗೆ ಬಲತ್ಕರಿಸುತ್ತಿದ್ದನು.
ಕಳೆದ ಆರು ತಿಂಗಳಿನಿಂದ ಈತನ ಕಿರುಕುಳ ಅನುಭವಿಸುತ್ತ್ತಾ ಬಂದಿದ್ದ ಯುವತಿಯರ ಪೈಕಿ ಒಬ್ಬಳು ಇಂದು ಮೈಸೂರಿನ ಕೆ.ಆರ್.ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಯುವತಿ ಪೊಲೀಸರಿಗೆ ದೂರು ನೀಡುತ್ತಿದ್ದಂತೆ ಶ್ರೀನಾಥ್ ತಲೆಮರೆಸಿಕೊಂಡಿದ್ದಾನೆ.
ಸಿನಿಮಾ ಶೋಕಿಯನ್ನು ಹೊಂದಿದ್ದ ಆರೋಪಿ ಶ್ರೀನಾಥ್ ಸಿನಿಮಾ ಮಾಡುತ್ತೇನೆ ಎಂದು ಮೈಸೂರಿನ ವೆಂಕಟೇಶ್ ಮತ್ತು ಸಂಜೀವ್ ಶೆಟ್ಟಿ ಎಂಬುವರಿಂದ ಹಣ ಪಡೆದು ಉಂಡೆನಾಮ ತಿಕ್ಕಿದ್ದನು. ವಾರಪತ್ರಿಕೆಯವರನ್ನು ಸೇರಿಸಿ ಪ್ರೆಸ್ ಕ್ಲಬ್ ಎಂಬ ಸಂಘ ಸ್ಥಾಪಿಸಿ ಅದರಿಂದಲೂ ಹಣ ಮಾಡಿದ್ದನು. ಹೀಗೆ ಹಲವು ವಂಚನೆ ಮಾಡಿರುವ ಈತ ಸದ್ಯಕ್ಕೆ ತಲೆಮರೆಸಿಕೊಂಡಿರುವ ಈತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.