ಕೆರೆಗಳಿಗೆ ನೀರು ತುಂಬಿಸಿ: ಮೈಸೂರಿನಲ್ಲಿ ವಾಟಾಳ್ ಪ್ರತಿಭಟನೆ
ಮೈಸೂರು, ಫೆಬ್ರವರಿ 15 : ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳ ಕೆರೆಗಳಿಗೆ ನೀರು ತುಂಬಿಸಬೇಕೆಂದು ಒತ್ತಾಯಿಸಿ ಕನ್ನಡ ಚಳುವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಖಾಲಿ ಅಂಡೆಗಳನ್ನು ಹಿಡಿದು ಮೈಸೂರಿನ ರೈಲ್ವೆ ನಿಲ್ದಾಣದ ಬಳಿ ಬುಧವಾರ ಪ್ರತಿಭಟಿಸಲಾಯಿತು.
ಖಾಲಿ ಹಂಡೆಗಳನ್ನು ಹಿಡಿದು ವಿನೂತನ ಪ್ರತಿಭಟನೆ ನಡೆಸಿದ ಮಾಜಿ ಶಾಸಕ ವಾಟಾಳ್ ನಾಗರಾಜ್ ಬಳಿಕ ಮಾತನಾಡಿ, ಚಾಮರಾಜನಗರಕ್ಕೆ ಕುಡಿಯುವ ನೀರಿನ ಸೌಲಭ್ಯ ಕೊಡಬೇಕು. ಒಂದು ತಿಂಗಳೊಳಗೆ ಕೆರೆಗಳನ್ನು ತುಂಬಿಸಲು ಗಡುವು ನೀಡಲಾಗುವುದು. ನೀರು ತುಂಬಿಸದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.[ಸದನಕ್ಕೆ ಜನಪ್ರತಿನಿಧಿಗಳ ಗೈರು: ವಾಟಾಳ್ ಕತ್ತೆ ಮೆರವಣಿಗೆ]
ಚಾಮರಾಜನಗರದಲ್ಲಿ ಸಂಪುಟ ಸಭೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಒತ್ತಾಯಿಸಿದರು. ಮಹದಾಯಿ ಯೋಜನೆಗೆ ಕೇಂದ್ರ ಮಧ್ಯೆ ಪ್ರವೇಶಿಸಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು.
ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಪ್ರತಿಭಟನೆ
ಮೈಸೂರು : ಕಾಂಗ್ರೆಸ್ ಹೈಕಮಾಂಡ್ ಗೆ ಸಾವಿರಾರು ಕೋಟಿ ರು. ನೀಡಿರುವ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಮತ್ತು ವಿಧಾನ ಸಭೆಯನ್ನು ವಿಸರ್ಜಿಸಬೇಕು ಎಂದು ಬಿಜೆಪಿ ಮುಖಂಡ ಎಸ್.ಸಿ.ರಾಜೇಶ್ ಒತ್ತಾಯಿಸಿದರು.
ಮೈಸೂರಿನ ಗಾಂಧಿ ಚೌಕ ಬಳಿ ಗಾಂಧಿ ಪ್ರತಿಮೆ ಎದುರು ಪ್ರತಿಭಟಿಸಿ ಮಾತನಾಡಿ, ಸಿದ್ದರಾಮಯ್ಯ ಸರ್ವಾಧಿಕಾರಿಯಲ್ಲ ಎಂಬುದನ್ನು ಅರಿಯಬೇಕು. ಹಣವನ್ನು ಲೂಟಿ ಮಾಡಲು ಇವರಿಗೆ ಯಾರೂ ಪರವಾನಗಿ ಕೊಟ್ಟಿಲ್ಲ. ಕಾಂಗ್ರೆಸ್ ನವರೇ ಕಾಂಗ್ರೆಸ್ ನ್ನು ಮುಳುಗಿಸುತ್ತಿದ್ದಾರೆ ಎಂದು ದೂರಿದರು.
ಪ್ರತಿಭಟನಾಕಾರರು ಸಿದ್ದರಾಮಯ್ಯನವರೇ ಸತ್ಯವನ್ನು ಹೇಳಿ ಕುರ್ಚಿ ಬಿಡಿ, ನಕಲಿ ಸಿಡಿ ಮಾಡಿ ಕಾಂಗ್ರೆಸ್ ನಕಲಿಯಾಯಿತು, ವಿಧಾನಸಭೆ ವಿಸರ್ಜನೆಯೇ ರಾಜಮಾರ್ಗ, ಆಣೆ ಮತ್ತು ಪ್ರಮಾಣದಲ್ಲಿ ನಂಬಿಕೆ ಇಲ್ಲದ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸಿದ್ದೇಕೆ ಇತ್ಯಾದಿ ಫಲಕಗಳನ್ನು ಪ್ರದರ್ಶಿಸಿದರು.
ಹಕ್ಕುಪತ್ರ ನೀಡಲು ಒತ್ತಾಯಿಸಿ ಪ್ರತಿಭಟನೆ
ಮೈಸೂರು: ವಿಕಲಚೇತನರ ಹಕ್ಕುಪತ್ರವನ್ನು ನೀಡಬೇಕೆಂದು ಒತ್ತಾಯಿಸಿ ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ವಿಕಲಚೇತನರ ಹಿತರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಿತು.
ಜನವರಿ 13ರಂದು ಹಕ್ಕುಪತ್ರಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸಿ ಮನವಿ ಪತ್ರ ನೀಡಲಾಗಿತ್ತು. ಆದರೆ ಫೈಲ್ ಗಳನ್ನು ವರ್ಗಾಯಿಸಿ ಸಮಯ ಹಾಳು ಮಾಡಲಾಗಿದೆಯೇ ವಿನಃ ಯಾವ ಕೆಲಸವೂ ಆಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ನಮ್ಮ ನಿವೇಶನಕ್ಕೆ ಸಂಬಂಧಿಸಿದಂತೆ ಬೇಕಾಗಿರುವ ಹಕ್ಕುಪತ್ರವನ್ನು ಕೂಡಲೇ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು