ಮೈಸೂರು ಮೃಗಾಲಯದ ನಿರ್ದೇಶಕಿಯನ್ನು ವರ್ಗಾಯಿಸುವಂತೆ ಧರಣಿ
ಮೈಸೂರು, ಡಿಸೆಂಬರ್. 14 : ಶ್ರೀಜಯಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಹಕ ನಿರ್ದೇಶಕಿ ಕಮಲಾ ಕರಿಕಾಳನ್ ಅವರನ್ನು ಬೇರೆಡೆಗೆ ವರ್ಗಾಯಿಸುವಂತೆ ಒತ್ತಾಯಿಸಿ ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಕಮಲಾ ಕರಿಕಾಳನ್ ಅವರಿಗೆ ಜವಾಬ್ದಾರಿ ನಿರ್ವಹಿಸುವ ದಕ್ಷತೆ ಇಲ್ಲ. ಇಂತಹ ಅಧಿಕಾರಿಯಿಂದ ಮೈಸೂರಿನ ಮೃಗಾಲಯದ ಹಿರಿಮೆಗೆ ಧಕ್ಕೆಯುಂಟಾಗಲಿದೆ. ಅಮಾಯಕ ನೌಕರರು ವಿನಾಕಾರಣ ತೊಂದರೆ ಅನುಭವಿಸುವಂತಾಗಿದೆ.
ಎಂದು ಆರೋಪಿಸಿ ಮೈಸೂರು ವಿಭಾಗೀಯ ರಾಜ್ಯ ಮತ್ತು ಕೇಂದ್ರ ಸರ್ಕಾರಿ, ಅರೆ ಸರ್ಕಾರಿ ಹಾಗೂ ಅನುದಾನಿತ ಸಂಸ್ಥೆಗಳ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ನೌಕರರ ಪರಿಷತ್ ಸದಸ್ಯರು ಕಮಲಾ ಕರಿಕಾಳನ್ ಅವರನ್ನು ವರ್ಗಹಿಸುವಂತೆ ಉಪವಾಸ ಸತ್ಯಾಗ್ರಹವನ್ನು ಕೈಗೊಂಡರು.
ಮೃಗಾಲಯದಲ್ಲಿ ಆಗುತ್ತಿರುವ ಪ್ರಾಣಿಗಳ ಸರಣಿ ಸಾವನ್ನು ತಪ್ಪಿಸಲು ಕಮಲ ಅವರನ್ನು ಕೂಡಲೇ ವರ್ಗಾಯಿಸಿ, ಬೇರೊಬ್ಬ ಅನುಭವಿ, ದಕ್ಷ ಹಾಗೂ ಸೃಜನಶೀಲ ಭಾವನೆ ಹೊಂದಿರುವವರನ್ನು ನೇಮಿಸಬೇಕು.
ಹಾಗೂ ಅಮಾಯಕ ನೌಕರ ವರ್ಗಕ್ಕೆ ನೈಸರ್ಗಿಕ ನ್ಯಾಯ ಒದಗಿಸಿ, ಅಮಾನತುಗೊಂಡ ನೌಕರರನ್ನು ಮರು ನೇಮಕ ಮಾಡಿಕೊಳ್ಳಿ ಎಂದು ಒತ್ತಾಯಿಸಿದರು.
ಪಿರಿಯಾಪಟ್ಟಣದಲ್ಲಿ ಪ್ರತಿಭಟನೆ: ಪಿರಿಯಾಪಟ್ಟಣದಲ್ಲಿ ಅನಧಿಕೃತ ಸಿಬಿಎಸ್ ಇ ತರಗತಿಗಳನ್ನು ತೆರೆದು ಪೋಷಕರಿಗೆ ವಂಚನೆ ಮಾಡುತ್ತಿರುವುದನ್ನು ವಿರೋಧಿಸಿ ಪೋಷಕರು ಮತ್ತು ಸಾರ್ವಜನಿಕರು ಬುಧವಾರ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಧರಣಿ ಸತ್ಯಾಗ್ರಹ ನಡೆಸಿದರು.
ಸೈಂಟ್ ಥಾಮಸ್ ಎಜುಕೇಷನ್ ಸೊಸೈಟಿ ವತಿಯಿಂದ ನಡೆಯುತ್ತಿರುವ ಪುಷ್ಪವಿದ್ಯಾಸಂಸ್ಥೆಯವರು ಪುಷ್ಪಪಬ್ಲಿಕ್ ಶಾಲೆಯನ್ನು ತೆರೆಯಲು ಶಿಕ್ಷಣ ಇಲಾಖೆಯಿಂದ ಕೇವಲ ಎನ್ ಓಸಿಯನ್ನು ಪಡೆದುಕೊಂಡಿದ್ದಾರೆ.
ಇದನ್ನೇ ಅನುಮತಿ ಪತ್ರ ಎಂದು ಪೋಷಕರನ್ನು ನಂಬಿಸಿ ಸಿಬಿಎಸ್ ಇ ಮಂಡಳಿಯಿಂದ ಅನುಮೋದನೆ ಪಡೆಯದೇ ಎಲ್ ಕೆಜಿಯಿಂದ 5ನೇ ತರಗತಿಯವರೆಗೆ 343 ಮಕ್ಕಳನ್ನು ಅನಧಿಕೃತವಾಗಿ ದಾಖಲು ಮಾಡಿಕೊಂಡು ಕೋಟ್ಯಾಂತರ ರೂ. ವಸೂಲಿ ಮಾಡಿ ವಂಚಿಸಿದ್ದಾರೆ ಎಂದು ಆರೋಪಿಸಿದರು.