ಉತ್ತರ ಪ್ರದೇಶದ ಗೆಲುವು ಬಿಜೆಪಿಗೇ ತಿರುಗು ಬಾಣವಾಗಲಿದೆ-ದೇವನೂರು
'ಪ್ರಕೃತಿಯಲ್ಲಿ ಅತಿವೃಷ್ಟಿ, ಅನಾವೃಷ್ಟಿ ಸಹಜ. ಆದರೆ, ಯಾವುದೂ ಬಹಳ ಕಾಲ ನಿಲ್ಲುವುದಿಲ್ಲ,’ ಎಂದು ಸಾಹಿತಿ ದೇವನೂರ ಮಹಾದೇವ ಉತ್ತರ ಪ್ರದೇಶ ಚುನಾವಣೆಯ ಫಲಿತಾಂಶ ಕುರಿತು ಬಿಜೆಪಿಗೆ ಚಾಟಿ ಬೀಸಿದ್ದಾರೆ.
ಮೈಸೂರು, ಮಾರ್ಚ್ 14: 'ಪ್ರಕೃತಿಯಲ್ಲಿ ಅತಿವೃಷ್ಟಿ, ಅನಾವೃಷ್ಟಿ ಸಹಜ. ಆದರೆ, ಯಾವುದೂ ಬಹಳ ಕಾಲ ನಿಲ್ಲುವುದಿಲ್ಲ,' ಎಂದು ಸಾಹಿತಿ ದೇವನೂರ ಮಹಾದೇವ ಉತ್ತರ ಪ್ರದೇಶ ಚುನಾವಣೆಯ ಫಲಿತಾಂಶ ಕುರಿತು ಬಿಜೆಪಿಗೆ ಚಾಟಿ ಬೀಸಿದ್ದಾರೆ.
ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.25ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸ್ವರಾಜ್ ಇಂಡಿಯಾ ಪಕ್ಷದೊಂದಿಗೆ ಸರ್ವೋದಯ ಕರ್ನಾಟಕ ಪಕ್ಷ ವಿಲೀನಗೊಳ್ಳಲಿದೆ ಎಂದೂ ಹೇಳಿದರು. [ಎಸಿಬಿ ಬಲೆಗೆ ಬಿದ್ದ ಚೆಸ್ಕಾಂ ಅಧಿಕಾರಿ]
ಇವತ್ತಿನ ವಿಧ್ವಂಸಕ ರಾಜಕಾರಣದ ಅಟ್ಟಹಾಸದ ನಡುವೆ ರಚನಾತ್ಮಕ ರಾಜಕಾರಣವನ್ನು ಕಟ್ಟುವ ನಿಟ್ಟಿನಲ್ಲಿ ಸ್ವರಾಜ್ ಇಂಡಿಯಾ ಪಕ್ಷ ಮುಂದಾಗಿದ್ದು, ಸರ್ವೋದಯ ಕರ್ನಾಟಕ ಪಕ್ಷದ ಆಶಯಗಳಿಗೂ ರೆಕ್ಕೆ ಮೂಡಿದೆ. ಹಾಗಾಗಿ ನಮ್ಮ ಪಕ್ಷವನ್ನು ಸ್ವರಾಜ್ ಇಂಡಿಯಾದಲ್ಲಿ ವಿಲೀನಗೊಳಿಸಲು ನಿರ್ಧರಿಸಲಾಗಿದೆ ಎಂದು ಸರ್ವೋದಯ ಕರ್ನಾಟಕ ಪಕ್ಷದ ಅಧ್ಯಕ್ಷ, ಸಾಹಿತಿ ದೇವನೂರ ಮಹಾದೇವ ತಿಳಿಸಿದರು.
ಎಎಪಿಯಿಂದ ಹೊರಬಿದ್ದ ಯೋಗೇಂದ್ರ ಯಾದವ್, ಪ್ರಶಾಂತ್ ಭೂಷಣ್, ಪ್ರೊ.ಆನಂದ್ ಕುಮಾರ್ ಮತ್ತಿತರರು ತಳಮಟ್ಟದಿಂದ ರಾಜಕಾರಣ ಕಟ್ಟಲು ರಾಷ್ಟ್ರೀಯ ಮಟ್ಟದಲ್ಲಿ ಸ್ವರಾಜ್ ಅಭಿಯಾನ ಆರಂಭಿಸಿದ್ದರು. ಹಲವು ಆಂದೋಲನಗಳ ನಂತರ ಅಂತಿಮವಾಗಿ ಸ್ವರಾಜ್ ಇಂಡಿಯಾ ಪಕ್ಷವನ್ನು ಸ್ಥಾಪಿಸಿದ್ದಾರೆ ಎಂದು ದೇವನೂರು ವಿವರಿಸಿದರು.
ಇನ್ನು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಉತ್ತರ ಪ್ರದೇಶದ ಚುನಾವಣೆಯಲ್ಲಿ ಅತಿವೃಷ್ಟಿಯ ಫಲ ಅನುಭವಿಸುತ್ತಿರುವ ಪಕ್ಷಕ್ಕೆ, ಅಂತಿಮವಾಗಿ ಅತಿವೃಷ್ಟಿಯೇ ತಿರುಗುಬಾಣವಾಗಲಿದೆ ಎಂದು ಬಿಜೆಪಿಗೆ ಮಾರ್ಮಿಕವಾಗಿ ಚಾಟಿ ಬೀಸಿದರು.
ಸ್ವರಾಜ್ ಇಂಡಿಯಾ ಪಕ್ಷದಲ್ಲಿ ಮಾ.25ರಂದು ಹೊಸ ಸಮಿತಿಯನ್ನು ರಚಿಸಲಾಗುವುದು. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಆ ಪಕ್ಷ ಸ್ಪರ್ಧಿಸುವ ಬಗ್ಗೆ ಈ ಸಮಿತಿ ನಿರ್ಣಯ ತೆಗೆದುಕೊಳ್ಳಲಿದೆ. ಸಮಿತಿ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನೂ ಬದ್ಧನಾಗಿರುತ್ತೇನೆ. ಆದರೆ, ಚುನಾವಣೆಯಲ್ಲಿ ಸ್ಪರ್ಧೆಗಿಳಿಯಬೇಕು ಎಂಬುದು ನನ್ನ ವೈಯಕ್ತಿಕ ಆಶಯ ಎಂದು ದೇವನೂರು ಹೇಳಿದರು. [ಸಚಿವರ ಪುತ್ರ ಸುನಿಲ್ ಬೋಸ್ ವಿಚಾರಣೆ ಮಾ.21ಕ್ಕೆ ಮುಂದೂಡಿಕೆ]