ಮೈಸೂರಲ್ಲಿ ಅಕ್ರಮ ಮರಳು ದಂಧೆ, ಮರಳು ತುಂಬಿದ 2 ಲಾರಿ ವಶ
ಮೈಸೂರು,ಫೆಬ್ರವರಿ,29: ಅಕ್ರಮವಾಗಿ ಮರಳು ತೆಗೆದು ಸಾಗಾಟ ಮಾಡುತ್ತಿದ್ದ ಪ್ರಕರಣ ಪಿರಿಯಾಪಟ್ಟಣ ತಾಲೂಕು ವ್ಯಾಪ್ತಿಯ ಬೆಟ್ಟದಪುರದ ಬೆಣಗಾಲು ಗ್ರಾಮದಲ್ಲಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಎರಡು ಲಾರಿಗಳನ್ನು ವಶಪಡಿಸಿಕೊಂಡು ಜಮೀನು ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಗ್ರಾಮದ ನಿವಾಸಿಯೊಬ್ಬರ ಜಮೀನಿನಲ್ಲಿ ಅಕ್ರಮ ಮರಳು ತೆಗೆದು ಅದನ್ನು ಸಾಗಾಟ ಮಾಡಲಾಗುತ್ತಿತ್ತು. ಈ ಮರಳು ಕಟ್ಟಡ ನಿರ್ಮಾಣಕ್ಕೆ ಯೋಗ್ಯವಲ್ಲದಿದ್ದರೂ ಹಣದಾಸೆಗೆ ಈ ಅಕ್ರಮ ಎಸಗಲಾಗುತ್ತಿತ್ತು. ನದಿಯಲ್ಲಿ ಸಿಗುವ ಮರಳಿನೊಂದಿಗೆ ಬೆರಕೆ ಮಾಡಿ ಮಾರಾಟ ಮಾಡಲಾಗುತ್ತಿತ್ತು. ಈ ಅಕ್ರಮ ಸಾಗಣೆ ಕಳೆದೊಂದು ವಾರದಿಂದ ನಡೆಯುತ್ತಿದ್ದರೂ ಯಾರ ಗಮನಕ್ಕೂ ಬಂದಿರಲಿಲ್ಲ.[ಅಕ್ರಮ ಮರಳು ದಂಧೆ ವಿರುದ್ಧ ಏಕಾಂಗಿಯಾಗಿ ದನಿ ಎತ್ತಿದ ರೈತ]
ಅಕ್ರಮ ಮರಳು ಗಣಿಗಾರಿಕೆಯ ವಿಷಯ ತಿಳಿದ ಬೆಟ್ಟದಪುರ ಪೊಲೀಸ್ ಠಾಣೆ ಎಸ್ಐ ಅನಿಲ್ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿ ಎರಡು ಲಾರಿಗಳನ್ನು ವಶಕ್ಕೆ ತೆಗೆದುಕೊಂಡು ಜಮೀನಿನ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.[ಕಾವೇರಿ ನದಿಯೊಳಗೆ 15 ಕೊಪ್ಪರಿಕೆ ಪ್ರತ್ಯಕ್ಷ!]
ಅಕ್ರಮ ಕಲ್ಲುಗಣಿಗಾರಿಕೆ: ಬೆಟ್ಟದಪುರ ವ್ಯಾಪ್ತಿಯ ಕೆಲವು ಗಣ್ಯರು ಕೇವಲ ಅಕ್ರಮ ಮರಳು ಗಣಿಗಾರಿಕೆ ಮಾತ್ರವಲ್ಲದೆ ಕಲ್ಲು ಗಣಿಗಾರಿಕೆ ಮುಂದಾಗಿದ್ದಾರೆ. ಇದರ ವಿರುದ್ಧ ಮೈಸೂರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಇದರಿಂದ ಅಕ್ರಮ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.