ಘಟಿಕೋತ್ಸವ ನಡೆಸದಂತೆ 'ಭ್ರಷ್ಟ' ರಂಗಪ್ಪನಿಗೆ ಎಚ್ಚರಿಕೆ
ಮೈಸೂರು, ಡಿಸೆಂಬರ್ 10 : ಮೈಸೂರು ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಇದೇ ಬೆನ್ನಲ್ಲಿ ಇದಕ್ಕೆ ವಿರೋಧಿ ಬಣಗಳು ಘಟಿಕೋತ್ಸವ ನಡೆಸಿದ್ರೆ ಉಗ್ರ ಪ್ರತಿಭಟನೆ ನಡೆಸವುದಾಗಿ ಎಚ್ಚರಿಕೆ ಸಂದೇಶವನ್ನು ನೀಡಿದೆ.
ಅರೇ ಇದೇನಪ್ಪಾ ಅಂತೀರಾ.. ಹೌದು... ಭ್ರಷ್ಟಾಚಾರ ಆರೋಪವನ್ನು ಹೊತ್ತು ಜೊತೆ-ಜೊತೆಗೆ ಅಕ್ರಮ ಕಂಪ್ಯೂಟರ್ ಹಗರಣದಲ್ಲಿ ತಮ್ಮ ಹೆಸರನ್ನು ಬಹು ದಿನಗಳಿಂದ ತಳುಕು ಹಾಕಿಸಿಕೊಳ್ಳುತ್ತಿರುವ ಮೈಸೂರು ವಿವಿ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪರವರಿಗೆ ಘಟಿಕೋತ್ಸವ ನಡೆಸದಂತೆ ತಾಕೀತು ಮಾಡಿದೆ.
ಅಷ್ಟೇ ಅಲ್ಲದೇ ಡಿ.13ರಂದು ನಡೆಯಲಿರುವ ಸಮಾರಂಭದಲ್ಲಿ ನೀಡಲಾಗುವ ಗೌರವ ಡಾಕ್ಟರೇಟ್ ಪದವಿಯನ್ನು ಟಿಬೇಟಿಯನ್ ಧರ್ಮಗುರು ದಲೈಲಾಮ ಹಾಗೂ ರಾಣಿ ಪ್ರಮೋದಾದೇವಿ ತಿರಸ್ಕರಿಸಬೇಕು. ಭ್ರಷ್ಟಾಚಾರದ ಆರೋಪ ಹೊತ್ತಿರುವ ರಂಗಪ್ಪ ಅವರೊಂದಿಗೆ ದಲೈಲಾಮ ಮತ್ತ ಪ್ರಮೋದಾದೇವಿ ವೇದಿಕೆಯನ್ನು ಹಂಚಿಕೊಳ್ಳಬಾರದು ಎಂದು ಮನವಿ ಮಾಡಿದೆ. [ದಲೈಲಾಮಾ, ಪ್ರಮೋದಾ ದೇವಿಗೆ ಗೌರವ ಡಾಕ್ಟರೇಟ್]
ಆದಾಗ್ಯೂ ಈ ಘಟಿಕೋತ್ಸವ ನಡೆದರೆ ಎಲ್ಲಾ ಸಂಘಟನೆಗಳು ಮತ್ತು ವಿದ್ಯಾರ್ಥಿಗಳು ಸೇರಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಸಮಾಜವಾದಿ ಪಾರ್ಟಿಯ ಜಿಲ್ಲಾಧ್ಯಕ್ಷ ಸಿ.ಟಿ.ಆಚಾರ್ಯ ಅವರು ಶನಿವಾರ ಪತ್ರಿಕಾಗೋಷ್ಠಿ ನಡೆಸಿ ರಂಗಪ್ಪನವರನ್ನು ಎಚ್ಚರಿಸಿದರು.
ಭ್ರಷ್ಟರಾದ ವಿವಿ ಸಿಂಡಿಕೇಟ್ ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸಿ, ಇವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಸಂಘಟನೆಯ ಕಾರ್ಯಕರ್ತರು ಆಗ್ರಹಿಸಿದ್ದಲ್ಲದ್ದೇ ತಕ್ಷಣ ಕ್ರಮಕ್ಕೆ ಒತ್ತಾಯಿಸಿದರು. ಇನ್ನೇನು 3 ದಿನಗಳು ಬಾಕಿ ಇರುವ ಘಟಿಕೋತ್ಸವಕ್ಕೆಇದು ಪೂರಕವಾಗುತ್ತೋ ಅಥವಾ ಮಾರಕವಾಗುತ್ತೋ ಅನ್ನೋದು ಮಾತ್ರ ಪ್ರಶ್ನಾರ್ಥಕ. [ಮೈಸೂರಿನ ಮದುವೆಯೊಂದರಲ್ಲಿ ಫಲತಾಂಬೂಲ ಬದಲು ಮೀನು!]