ಮೈಸೂರಿನ ಹೂ ಮಾರುವ ಮಹಿಳೆ ಖಾತೆಗೆ 5 ಕೋಟಿ!
ಬಡವರಿಗೆ ಮೊದಲೇ ಸಂಕಷ್ಟದ ಸಮಯ. ನೋಟು ನಿಷೇಧ, ಚಿಲ್ರೆ ಸಮಸ್ಯೆ, ವ್ಯಾಪಾರ ಡಲ್ಲು, ಸಾಲ ಸಿಗುತ್ತಿಲ್ಲ, ಕಿತ್ತು ತಿನ್ನುವ ಬಡತನ ಬೇರೆ. ಅಂಥದ್ದರಲ್ಲಿ ಬ್ಯಾಂಕ್ ಖಾತೆಗೆ 5 ಕೋಟಿ ಹಣ ಬಂದು ಬಿದ್ದರೆ! ಮೈಸೂರಿನ ಹೂಮಾರುವವಳ ಸ್ಥಿತಿ ಹೇಗಾಗಿರಬೇಡ?
ಮೈಸೂರು, ಜನವರಿ 13 : ಐನೂರು ಮತ್ತು ಸಾವಿರದ ನೋಟುಗಳ ಅಮಾನ್ಯದ ಬಳಿಕ ಜನಧನ್ ಖಾತೆಗಳನ್ನು ದುರುಪಯೋಗ ಪಡಿಸಿಕೊಂಡಿರುವ ಪ್ರಕರಣಗಳು ಹಸಿರಾಗಿರುವಾಗಲೇ ಹೂ ಮಾರುವ ಮಹಿಳೆಯೊಬ್ಬರು ತನ್ನ ಜನ್ಧನ್ ಖಾತೆಯಲ್ಲಿ 5 ಕೋಟಿಗೂ ಹೆಚ್ಚು ಹಣ ಜಮಾ ಆಗಿರುವುದನ್ನು ಕಂಡು ಬೆಚ್ಚಿಬಿದ್ದ ಘಟನೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿಯಲ್ಲಿ ನಡೆದಿದೆ.
ಹುಲ್ಲಹಳ್ಳಿಯ ನಿವಾಸಿ ನಾಗರಾಜು ಎಂಬುವರ ಪತ್ನಿ ನೀಲಾ ಎಂಬುವರೇ ತನ್ನ ಜನಧನ್ ಖಾತೆಗೆ ಕೋಟ್ಯಂತರ ಹಣ ಬಂದಿರುವುದನ್ನು ಕಂಡು ಬೆಚ್ಚಿಬಿದ್ದ ಮಹಿಳೆ. ಇವರು ಜೀವನೋಪಾಯಕ್ಕಾಗಿ ಹೂ ಮಾರಾಟದ ವೃತ್ತಿಯನ್ನು ಅವಲಂಬಿಸಿದ್ದಾರೆ. ಇತ್ತೀಚೆಗೆ ಕೇಂದ್ರ ಸರ್ಕಾರದ ಯೋಜನೆಯಡಿಯಲ್ಲಿ ಹುಲ್ಲಹಳ್ಳಿಯ ಕಾರ್ಪೋರೇಷನ್ ಬ್ಯಾಂಕ್ನಲ್ಲಿ ಜನಧನ್ ಖಾತೆಯನ್ನು ತೆರೆದು ತಾವು ಸಂಪಾದಿಸಿದರಲ್ಲಿ ಅಷ್ಟೋ ಇಷ್ಟೋ ಜಮಾ ಮಾಡಿದ್ದರು.
ಈ ನಡುವೆ ಬ್ಯಾಂಕ್ನಿಂದ ವೈಯಕ್ತಿಕ ಸಾಲ ಸಿಕ್ಕರೆ ಬದುಕಿಗೆ ಯಾವುದಾದರೊಂದು ರೀತಿಯಲ್ಲಿ ಆಸರೆಯಾಗಬಹುದೆಂಬ ಉದ್ದೇಶದಿಂದ ಬ್ಯಾಂಕ್ಗೆ ತೆರಳಿ ವಿಚಾರಣೆ ಮಾಡಿದ್ದಾರೆ. ಈ ಸಂದರ್ಭ ಅವರ ಪಾಸ್ಬುಕ್ನ್ನು ಪಡೆದ ಸಿಬ್ಬಂದಿ ಪರಿಶೀಲನೆ ಮಾಡಿ ಜಮಾವಾಗಿರುವ ಹಣವನ್ನು ನಮೂದಿಸಿ ಕೊಟ್ಟಿದ್ದಾರೆ. ಅದರಂತೆ ಅವರ ಖಾತೆಗೆ ಒಟ್ಟು 5 ಕೋಟಿ 81 ಲಕ್ಷ ರುಪಾಯಿ ಹಣ ಜಮೆಯಾಗಿರುವುದು ಕಂಡು ಬಂದಿದೆ. ಇದನ್ನು ಕಂಡ ನೀಲಾ ಅವರು ಆಘಾತಗೊಂಡಿದ್ದಾರೆ.
ಈ ವಿಚಾರ ಎಲ್ಲೆಡೆ ಹರಡಿ ಜನ ತಮ್ಮದೇ ಕತೆ ಕಟ್ಟಿ ಮಾತನಾಡ ತೊಡಗಿದ್ದಾರೆ. ಕೆಲವರು ಯಾರೋ ಕಪ್ಪು ಹಣವನ್ನು ಖಾತೆಗೆ ಹಾಕಿರಬೇಕೆಂದು ಹೆದರಿಸಿದ್ದಾರೆ. ಜನರ ಮಾತು ಕೇಳಿ ಭಯಗೊಂಡ ಮಹಿಳೆ ಬ್ಯಾಂಕ್ಗೆ ತೆರಳಿ ವಿಚಾರಿಸಿದಾಗ ಅಂತಹ ಯಾವುದೇ ಘಟನೆ ನಡೆದಿಲ್ಲ, ಪಾಸ್ ಪುಸ್ತಕದಲ್ಲಿ ನಮೂದು ಮಾಡುವಾಗ ತಾಂತ್ರಿಕ ತೊಂದರೆಯಿಂದ ತಪ್ಪಾಗಿ ಅಂಕಿಗಳು ಮುದ್ರಿತವಾಗಿವೆ ಎಂಬ ಸ್ಪಷ್ಟನೆಯನ್ನು ಅಧಿಕಾರಿಗಳು ನೀಡಿದ್ದಾರೆ.