ಶಿರಡಿ-ಮೈಸೂರು ರೈಲಿನಲ್ಲಿ ಭಾರೀ ದರೋಡೆ
ಮೈಸೂರು, ಮೇ 27 : ಶಿರಡಿ-ಮೈಸೂರು ಎಕ್ಸ್ಪ್ರೆಸ್ ರೈಲಿಗೆ ನುಗ್ಗಿದ ದರೋಡೆಕೋರರ ಗುಂಪು ಹಣ ಮತ್ತು ಚಿನ್ನಾಭರಣವನ್ನು ದೋಚಿ ಪರಾರಿಯಾಗಿದೆ. ಮಹಾರಾಷ್ಟ್ರದ ಬಾಲಾಪುರ ಬಳಿ ಈ ಘಟನೆ ನಡೆದಿದೆ. ರೈಲ್ವೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆ ರಹತಾ ತಾಲೂಕಿನಲ್ಲಿರುವ ಶಿರಡಿಯಿಂದ ಮೈಸೂರಿಗೆ ವಾಪಸ್ ಆಗುತ್ತಿದ್ದ ರೈಲಿಗೆ ಮಂಗಳವಾರ ತಡರಾತ್ರಿ ನುಗ್ಗಿದ 30ಕ್ಕೂ ಹೆಚ್ಚು ದರೋಡೆಕೋರರು 14 ಬೋಗಿಗಳಲ್ಲಿನ ಪ್ರಯಾಣಿಕರಿಗೆ ಮಾರಕಾಸ್ತ್ರಗಳನ್ನು ತೋರಿಸಿ ಲಕ್ಷಾಂತರ ರೂ. ಮೌಲ್ಯದ ಹಣ ಮತ್ತು ಚಿನ್ನಾಭರಣವನ್ನು ದೋಚಿದ್ದಾರೆ.
ಮಹಾರಾಷ್ಟ್ರದ ಬಾಲಾಪುರ ನಿಲ್ದಾಣದ ಸಮೀಪದ ಈ ಘಟನೆ ನಡೆದಿದೆ. ರೈಲು ಬಾಲಾಪುರ ನಿಲ್ದಾಣಕ್ಕೆ ತಲುಪಿದ ನಂತರ ಪ್ರಯಾಣಿಕರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 5 ಗಂಟೆಗಳ ಕಾಲ ರೈಲನ್ನು ನಿಲ್ಲಿಸಿ ಪೊಲೀಸರು ಪ್ರಯಾಣಿಕರಿಂದ ಮಾಹಿತಿ ಸಂಗ್ರಹಣೆ ಮಾಡಿ ದೂರು ಸ್ವೀಕರಿಸಿದ್ದಾರೆ.
ಮಾರಕಾಸ್ತ್ರಗಳನ್ನು ತೋರಿಸಿ ಪ್ರಯಾಣಿಕರನ್ನು ದೋಚಿದ ಗುಂಪು ಬಾಲಾಪುರ ನಿಲ್ದಾಣದ ಸಮೀಪವೇ ಚೈನ್ ಎಳೆದು ರೈಲನ್ನು ನಿಲ್ಲಿಸಿ ಪರಾರಿಯಾಗಿದ್ದಾರೆ. ಶಿರಡಿಯಿಂದ ರೈಲು ರಾತ್ರಿ 11.50ಕ್ಕೆ ಹೊರಟಿತ್ತು. ದರೋಡೆಗೆ ಒಳಗಾದವರಲ್ಲಿ ಮಹಿಳೆಯರೇ ಹೆಚ್ಚು ಎಂದು ಪೊಲೀಸರು ಹೇಳಿದ್ದಾರೆ.