ಗುರುವಾರದಿಂದ ಮೈಸೂರಲ್ಲಿ ಬಹುರೂಪಿ ನಾಟಕೋತ್ಸವ
ಮೈಸೂರು,ಜನವರಿ,14: ಪ್ರತಿವರ್ಷದಂತೆ ಈ ಬಾರಿಯು ಮೈಸೂರು ರಂಗಾಯಣದ ಆವರಣದಲ್ಲಿ ಬಹರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಸಜ್ಜಾಗಿದೆ. ಗುರುವಾರದಿಂದ 6 ದಿನಗಳ ಕಾಲ ನಡೆಯಲಿರುವ 13ನೇ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ನಗರದ ರಂಗಾಯಣ ನಾಟಕಪ್ರಿಯರನ್ನು ತನ್ನತ್ತ ಸೆಳೆಯುತ್ತಿದೆ.
ಈಗಾಗಲೇ ಕಲಾಮಂದಿರದ ಸುತ್ತಮುತ್ತ ಹಬ್ಬದ ವಾತಾವರಣ ಸೃಷ್ಟಿಯಾಗಿದ್ದು ಮೈಸೂರು ರಂಗಾಯಣ ಸಿಂಗಾರಗೊಂಡು ನಳನಳಿಸುತ್ತಿದೆ. ಸುಮಾರು 5 ಭಾಷೆಯಲ್ಲಿ ಒಟ್ಟು 31 ನಾಟಕಗಳು, ಚಲನಚಿತ್ರಗಳು ಪ್ರದರ್ಶನವಾಗಲಿದೆ. ವಿಚಾರಗೋಷ್ಠಿ, ಬೀದಿ ನಾಟಕೋತ್ಸವ, ಜನಪದೋತ್ಸವ, ಕರಕುಶಲ ವಸ್ತು ಪ್ರದರ್ಶನ ಹಾಗೂ ಮಾರಾಟ, ಪುಸ್ತಕ ಪ್ರದರ್ಶನ ಹಾಗೂ ಮಾರಾಟ, ಅಭಿವ್ಯಕ್ತಿ ಪ್ರದರ್ಶನ ಹಾಗೂ ಮಾರಾಟ ಮತ್ತು ಅಭಿವ್ಯಕ್ತಿ ಕಲಾಶಿಬಿರ ಮತ್ತು ಚಿತ್ರಕಲಾ ಪ್ರದರ್ಶನದ ಜತೆಗೆ ಭಿತ್ತಿಚಿತ್ರ ಪ್ರದರ್ಶನವೂ ನಾಟಕೋತ್ಸವಕ್ಕೆ ಮೆರಗು ನೀಡಲಿದೆ.[ಕರ್ನಾಟಕ ವಿವಿಯಲ್ಲಿ ಜ.22ರಿಂದ 'ಧಾರವಾಡ ಸಾಹಿತ್ಯ ಸಂಭ್ರಮ']
ನಾಟಕ ಪ್ರದರ್ಶನ ನಡೆಯುವ ಭೂಮಿಗೀತ ಕಲಾಮಂದಿರ, ವಿಚಾರ ಸಂಕಿರಣ ನಡೆಯುವ ಕಿರುರಂಗಮಂದಿರ, ಸಿನಿಮಾ ಪ್ರದರ್ಶನಕ್ಕೆ ಶ್ರೀರಂಗ ವೇದಿಕೆ ಸಜ್ಜುಗೊಂಡಿದ್ದು, ಕರಕುಶಲ ವಸ್ತು ಪ್ರದರ್ಶನ, ಮಾರಾಟಕ್ಕೆ ಈಗಾಗಲೇ 57 ಮಳಿಗೆಗಳನ್ನು ತೆರೆಯಲಾಗಿದೆ.
ದೇಶದ ವಿವಿಧ ರಾಜ್ಯಗಳ ನೂರಾರು ಕಲಾವಿದರು ಮೈಸೂರಿಗೆ ಬಂದಿದ್ದು ಅವರಿಗೆ ಕರಾಮುವಿ ಆವರಣ, ಚಾಮುಂಡಿ ಅತಿಥಿ ಗೃಹ ಹಾಗೂ ರಂಗಾಯಣದಲ್ಲಿ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡಲಾಗಿದೆ.
ನಾಟಕೋತ್ಸವದ ವಿಶೇಷತೆಗಳು:
ಬೆಳಿಗ್ಗೆ ಚಲನಚಿತ್ರೋತ್ಸವ
ರಂಗಾಯಣದ ಶ್ರೀರಂಗ ವೇದಿಕೆಯಲ್ಲಿ ಬೆಳಗ್ಗೆ 11ಕ್ಕೆ ಶ್ರೀರಂಗದಲ್ಲಿ ಬಹುರೂಪಿ ಚಲನಚಿತ್ರೋತ್ಸವ ನಡೆಯಲಿದೆ. ಚಲನಚಿತ್ರ ನಿರ್ದೇಶಕ ಎಮ್.ಎಸ್.ಸತ್ಯು ಉದ್ಘಾಟನೆ ಮಾಡುವರು. ನಂತರ ಮಧ್ಯಾಹ್ನ 12ರಿಂದ ಯಾನ್ಆರ್ತಸ್-ಬಟ್ರ್ಯಾಂಡ್ ನಿರ್ದೇಶನದ ಹ್ಯೂಮನ್ (ಭಾಗ-1), ಹಿಂದಿಯಲ್ಲಿ ಡಾ.ಎಮ್.ಎಸ್.ಸತ್ಯು ನಿರ್ದೇಶನದ 'ಗರಂ ಹವಾ ಸಿನಿಮಾಗಳು' ಪ್ರದರ್ಶನಗೊಳ್ಳಲಿವೆ. ನಂತರ ಸಂಜೆ 4ಕ್ಕೆ ಕರಕುಶಲ ವಸ್ತು ಮತ್ತು ಪುಸ್ತಕ ಪ್ರದರ್ಶನಕ್ಕೆ ಚಿತ್ರ ಕಲಾವಿದರಾದ ಸುದೇಶ್ ಮಹಾನ್ ಚಾಲನೆ ನೀಡುವರು.[ಕನ್ನಡದ 10 ಮೇರು ಸಾಧಕರಿಗೆ 'ಆಳ್ವಾಸ್ ನುಡಿಸಿರಿ ಪ್ರಶಸ್ತಿ']
ಬೀದಿ ನಾಟಕೋತ್ಸವ
ಮಧ್ಯಾಹ್ನ 3ಕ್ಕೆ ಮೈಸೂರು ಅರಮನೆ ಆವರಣದಲ್ಲಿ ನಡೆಯಲಿರುವ ರಾಜ್ಯಮಟ್ಟದ ಬೀದಿ ನಾಟಕೋತ್ಸವಕ್ಕೆ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಬಿ.ಎಂ.ರಾಮಚಂದ್ರ ಚಾಲನೆ ನೀಡಲಿದ್ದು, ಕಸಾಪ ನಿಕಟ ಪೂರ್ವ ಅಧ್ಯಕ್ಷ ಎಂ.ಚಂದ್ರಶೇಖರ್ ಉಪಸ್ಥಿತಿ ವಹಿಸುವರು. ಪ್ರತಿದಿನ ಸಂಜೆ 5.30ಕ್ಕೆ ರಂಗಾಯಣದ ಕಿಂದರಿಜೋಗಿ ಆವರಣದಲ್ಲಿ ವಿವಿಧ ರಂಗ ತಂಡದಿಂದ ಬೀದಿ ನಾಟಕ ಪ್ರದರ್ಶನವಾಗಲಿವೆ.
ಸಂಜೆ ಬಹುರೂಪಿಗೆ ಚಾಲನೆ
ಜನವರಿ.14ರ ಸಂಜೆ 5.30ಕ್ಕೆ ಆರಂಭವಾಗಲಿರುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ರಂಗಾಯಣದ ವನರಂಗದಲ್ಲಿ ರಂಗಾಯಣ ನಿರ್ದೇಶಕ ಎಚ್.ಜನಾರ್ಧನ್ (ಜನ್ನಿ) ಅಧ್ಯಕ್ಷತೆಯಲ್ಲಿ ನವದೆಹಲಿಯ ರಂಗ ನಿರ್ದೇಶಕ ಎಂ.ಕೆ.ರೈನ ಚಾಲನೆ ನೀಡಲಿದ್ದಾರೆ. ರಂಗಭೂಮಿ ಹಾಗೂ ಚಲನಚಿತ್ರ ನಟ ಬೆಂಗಳೂರಿನ ಅರುಣ್ ಸಾಗರ್ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಕಲಾಮಂದಿರದ ಕಿರುರಂಗ ಮಂದಿರದಲ್ಲಿ ಜನವರಿ 16, 17ರಂದು 'ಅಭಿವ್ಯಕ್ತಿ: ಸವಾಲುಗಳು ಮತ್ತು ಸಾಧ್ಯತೆಗಳು' ವಿಷಯ ಕುರಿತು ವಿಚಾರ ಸಂಕಿರಣ ನಡೆಯಲಿದೆ. ರಾಜಕೀಯ ವಿಶ್ಲೇಷಕ ಡಾ.ಯೋಗೇಂದ್ರ ಯಾದವ್ ಉದ್ಘಾಟಿಸಲಿದ್ದಾರೆ. 17ರ ಸಂಜೆ 4.15ಕ್ಕೆ ವಿಚಾರ ಸಂಕಿರಣದ ಸಮಾರೋಪ ಜರುಗಲಿದ್ದು, ರಂಗ ನಿರ್ದೇಶಕ ಪ್ರಸನ್ನ ಸಮಾರೋಪ ಭಾಷಣ ಮಾಡುವರು. ಅತಿಥಿಯಾಗಿ ವಿಚಾರವಾದಿ ಎಸ್.ಆರ್.ಹಿರೇಮಠ್ ಆಗಮಿಸುವರು.[ಜಮೈಕಾ ಲೇಖಕ ಮರ್ಲೋನ್ ಜೇಮ್ಸ್ ಗೆ ಬೂಕರ್ ಪ್ರಶಸ್ತಿ]
ಜೂಲಿಯಸ್ ಸೀಜರ್ ನಾಟಕದ ಟಿಕೆಟ್ ಈಗಾಗಲೇ ಮಾರಾಟ
ರಂಗಾಯಣದ ವನರಂಗದಲ್ಲಿ ಜನವರಿ 15ರ ಸಂಜೆ 7ಕ್ಕೆ ಪ್ರೊ.ಜಿ.ಕೆ.ಗೋವಿಂದರಾವ್ ನಿರ್ದೇಶಿಸಿರುವ ಮೈಸೂರಿನ ರಂಗಾಯಣದ ರೆಪರ್ಟರಿ ತಂಡ ಅಭಿನಯಿಸಿರುವ ಶೇಕ್ಸ್ ಪಿಯರ್ ಮಹಾಕವಿಯ ಜೂಲಿಯಸ್ ಸೀಜರ್ (ಕನ್ನಡ) ನಾಟಕ ಪ್ರದರ್ಶನವಾಗಲಿದ್ದು, ಈ ನಾಟಕಕ್ಕೆ ಟಿಕೆಟ್ ಗಳು ಈಗಾಗಲೇ ಮಾರಾಟವಾಗಿವೆ.[ಸಂಕ್ರಾಂತಿಗೆ ಹಳ್ಳಿಮನೆ ಹಬ್ಬದೂಟ]
ಬಾಯಿಚಪ್ಪರಿಸೋ ಖಾದ್ಯಗಳು
ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಆಹಾರ ಮೇಳದಲ್ಲಿ ಗ್ರಾಮೀಣ ಭಾಗದ ಆಹಾರ ಖಾದ್ಯಗಳು ಬೋಜನಪ್ರಿಯರ ಸೆಳೆಯಲಿವೆ. ಉತ್ತರ ಕರ್ನಾಟಕದ ಜೋಳದ ರೊಟ್ಟಿ, ಎಣ್ಣೆಗಾಯಿ, ವಿವಿಧ ಬಗೆಯ ಪಲ್ಯ, ಚಟ್ನಿಗಳು ರಂಗಪ್ರಿಯರ ಬಾಯಿ ಚಪ್ಪರಿಸುವಂತೆ ಮಾಡಲಿವೆ. ಉಳಿದಂತೆ ರಾಗಿ ಮುದ್ದೆ, ಉಪ್ಪು ಸಾಂಬಾರು ಇದ್ದೇ ಇರುತ್ತದೆ.