ರಮ್ಯಾ ಕಾಂಗ್ರೆಸ್ ಬಿಡ್ತಾರಾ? ಅವರ ತಾಯಿ ಉತ್ತರ ಹೀಗಿದೆ
ನಟಿ, ಮಾಜಿ ಸಂಸದೆ ರಮ್ಯ ಅವರು ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ಗುಸುಗುಸು ಕೇಳಿ ಬರುತ್ತಿದೆ.ಆದರೆ, ಅವರ ತಾಯಿ ರಂಜಿತಾ ಅವರು ಮಾತ್ರ ನನ್ನ ಮಗಳು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡುವುದಿಲ್ಲ ಎಂಬ ಸ್ಪಷ್ಟನೆಯನ್ನು ನೀಡಿದ್ದಾರೆ.
ನಂಜನಗೂಡು, ಏಪ್ರಿಲ್ 02: ಮಾಜಿ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಬೆನ್ನಲ್ಲೇ ಮಾಜಿ ಸಂಸದೆ, ನಟಿ ರಮ್ಯಾ ಅಲಿಯಾಸ್ ದಿವ್ಯಸ್ಪಂದನ ಅವರು ಕೂಡಾ ಕಮಲ ಪಕ್ಷ ಸೇರುತ್ತಾರೆ ಎಂಬ ಗುಸುಗುಸು ಪಿಸುಪಿಸು ಆರಂಭವಾಗಿತ್ತು.
ಈ ಗಾಳಿಸುದ್ದಿಗೆ ಇಂಬು ನೀಡುವಂತೆ ಉಪ ಚುನಾವಣೆ ಪ್ರಚಾರಕ್ಕೂ ಬಾರದೆ ಪಕ್ಷದ ವೇದಿಕೆಗಳಲ್ಲೂ ಕಾಣಿಸಿಕೊಳ್ಳದೆ ಕಾಂಗ್ರೆಸ್ನಿಂದ ರಮ್ಯಾ ದೂರವಿದ್ದರು. ಆದರೆ, ಇದಕ್ಕೆಲ್ಲ ಸ್ಪಷ್ಟನೆ ಈಗ ಸಿಕ್ಕಿದೆ.[ಏಪ್ರಿಲ್ ಫಸ್ಟ್ ಮಧ್ಯಾಹ್ನ ದಿಢೀರ್ ಜೆಡಿಎಸ್ ಸೇರಿದ ನಟಿ ರಮ್ಯಾ]
ರಮ್ಯಾ ಅವರ ತಾಯಿ ರಂಜಿತಾ ಅವರು ಮಾತ್ರ ನನ್ನ ಮಗಳು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡುವುದಿಲ್ಲ ಎಂಬ ಸ್ಪಷ್ಟನೆಯನ್ನು ನೀಡಿದ್ದಾರೆ. ನಂಜನಗೂಡಿಗೆ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮತಯಾಚನೆಗೆ ಬಂದಿರುವ ರಂಜಿತಾ ಅವರು ಮತಯಾಚನೆ ಮಾಡಿ ಮಾತನಾಡಿದರು.
'ನನ್ನ ಮಗಳಿಗೆ ಅನಾರೋಗ್ಯದ ಕಾರಣ ಪಕ್ಷದ ಚುನಾವಣಾ ಪ್ರಚಾರಕ್ಕೆ ಬರಲು ಸಾಧ್ಯವಾಗಿಲ್ಲ, ಆದರೆ ತಮಗಾಗದ ಕೆಲವರು ಬಿಜೆಪಿ, ಜೆಡಿಎಸ್ ಪಕ್ಷಗಳಿಗೆ ಸೇರಲಿದ್ದಾರೆ ಎಂಬ ಗಾಳಿಸುದ್ದಿಯನ್ನು ಹರಡುತ್ತಿದ್ದಾರೆ. ಇದು ಶುದ್ದ ಸುಳ್ಳು. ಇದನ್ನು ಯಾರು ನಂಬಬಾರದು. ಮಗಳು ರಮ್ಯ ಗುಣಮುಖಳಾದ ತಕ್ಷಣವೇ ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸಲಿದ್ದಾರೆಎಂದರು.
ನಂಜನಗೂಡು ವ್ಯಾಪ್ತಿಯಲ್ಲಿ ಮಹಿಳೆಯರು ಕಾಂಗ್ರೆಸ್ನತ್ತ ಒಲವು ತೋರುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಅವರ ಗೆಲುವು ಖಚಿತ ಎಂದು ಹೇಳಿದರು.