ಮೈಸೂರು ಶ್ರೀರಾಮ ಮಂದಿರದಲ್ಲಿ ಅಗ್ನಿ ಅವಘಡ
ಮೈಸೂರು, ಡಿಸೆಂಬರ್ 17 : ದೇವರಿಗೆ ಹಚ್ಚಿದ ದೀಪ ಆಕಸ್ಮಿಕವಾಗಿ ಕೆಳಗೆ ಬಿದ್ದು ದೇವರ ಭಾವಚಿತ್ರ ಸೇರಿ ದೇವರ ವಸ್ತುಗಳು ಸಂಪೂರ್ಣವಾಗಿ ಸುಟ್ಟುಹೋಗಿರುವ ಘಟನೆ ನಗರದ ಬಿ.ಬಿ.ಕೆರಿಯ ಮರಾಟ ಶ್ರೀರಾಮ ಮಂದಿರದಲ್ಲಿ ನಡೆದಿದೆ.
ನಗರದ ಪುಲಕೇಶಿ ರಸ್ತೆಯಲ್ಲಿರುವ ಬಿ.ಬಿ ಕೆರಿಯ ಮರಾಟ ಶ್ರೀರಾಮ ಮಂದಿರದಲ್ಲಿ ಶ್ರೀರಾಮ ದೇವರಿಗೆ ಸಂಜೆ ದೀಪ ಹಚ್ಚಿ ಪೂಜೆ ಸಲ್ಲಿಸಿ ಬಾಗಿಲು ಹಾಕಿಕೊಂಡು ಹೋಗಲಾಗಿತ್ತು. ಆದರೆ ರಾತ್ರಿ ದೀಪ ಆಕಸ್ಮಿಕವಾಗಿ ಕೆಳಗೆ ಬಿದ್ದು ಶ್ರೀರಾಮ ದೇವರ ಭಾವಚಿತ್ರ ಸೇರಿದಂತೆ ರಾಮ ಮಂದಿರದಲ್ಲಿದ್ದ ಎಲ್ಲಾ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ.[ಬೆಂಗಳೂರು: ಗೋಪಾಲನ್ ಆರ್ಕೆಡ್ನಲ್ಲಿ ಅಗ್ನಿ ಅವಘಡ]
ದಟ್ಟ ಹೊಗೆಯನ್ನ ಕಂಡು ಸುತ್ತ ಮುತ್ತಲ ಭಕ್ತರು ಬಂದು ಕೂಡಲೇ ಆಗ್ನಿ ಶಾಮಕ ದಳವನ್ನು ಸ್ಥಳಕ್ಕೆ ಕರೆಯಿಸಿ ಬೆಂಕಿ ನಂದಿಸಿದ್ದಾರೆ. ಘಟನಾ ಸ್ಥಳ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಯಾರೋ ಕಿಡಿಗೇಡಿಗಳು ಉದ್ದೇಶ ಪೂರ್ವಕವಾಗಿಯೇ ಈ ಕೆಲಸ ಮಾಡಿದ್ದಾರೆ ಎಂದು ಮಂದಿರದ ಆಡಳಿತ ಮಂಡಳಿಯ ಸದಸ್ಯರು ಆರೋಪಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.