ಸಂಸಾರ ಸರಿದೂಗಿಸದೆ ಹೊಂಡಕ್ಕೆ ಬಿದ್ದ ಗಂಡ ಹೆಂಡತಿ
ಮೈಸೂರು, ಏಪ್ರಿಲ್ 14 : ಗಂಡಹೆಂಡಿರ ಜಗಳ ಆತ್ಮಹತ್ಯೆಯಲ್ಲಿ ಅಂತ್ಯಗೊಂಡ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ. ಗ್ರಾಮದ ನಿವಾಸಿ ಪುಟ್ಟಸ್ವಾಮಿ (44) ಮತ್ತು ಸವಿತಾ (35) ದಂಪತಿ ಹೊಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು.
ಈ ದಂಪತಿಗೆ 10 ವರ್ಷದ ಗಂಡು ಹಾಗೂ 12 ವರ್ಷದ ಹೆಣ್ಣು ಮಕ್ಕಳಿದ್ದು, ಸಂಸಾರವನ್ನು ಸರಿತೂಗಿಸಿಕೊಂಡು ಹೋಗುವಲ್ಲಿ ಗಂಡ ಹೆಂಡತಿ ವಿಫಲರಾಗಿದ್ದರು. ಇವರ ನಡುವೆ ಮನಸ್ತಾಪಗಳು ಆಗಾಗ್ಗೆ ಉಂಟಾಗಿ ಕಲಹಗಳು ನಡೆಯುತ್ತಿದ್ದವು. ಮಕ್ಕಳಿಗೋಸ್ಕರವಾದರೂ ಹೊಂದಾಣಿಕೆ ಮಾಡಿಕೊಂಡು ಹೋಗದೆ ಕಿತ್ತಾಡಿಕೊಂಡೇ ಕಾಲ ಕಳೆಯುತ್ತಿದ್ದರು. [ಈ ದಂಪತಿಗಳ ಜೀವನದಲ್ಲಿ ಎಲ್ಲವೂ ವಿಶೇಷವೇ]
ಬುಧವಾರ ರಾತ್ರಿ ಮನೆಯಲ್ಲಿ ಗಂಡ ಹೆಂಡತಿ ಇಬ್ಬರಿಗೂ ಜಗಳ ನಡೆದಿದೆ. ಮುಂಜಾನೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಹೆಂಡತಿ ಸವಿತಾ ಗ್ರಾಮದ ಹೊರವಲಯದಲ್ಲಿದ್ದ ಹೊಂಡಕ್ಕೆ ಹಾರಿದ್ದಾಳೆ. ಈಕೆಯನ್ನು ರಕ್ಷಿಸಲು ಹೋದ ಗಂಡ ಕೂಡ ಹೊಂಡಕ್ಕೆ ಬಿದ್ದಿದ್ದಾನೆ. ಅದರೆ ಹೊಂಡ ಆಳವಿದ್ದರಿಂದ ಮತ್ತು ಹೂಳು ತುಂಬಿದ್ದ ಕಾರಣ ಇಬ್ಬರೂ ಹೊರಬರಲಾರದೆ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಅರೆಕೆರೆ ಪೊಲೀಸರು, ಸ್ಥಳ ಪರೀಶೀಲನೆ ನಡೆಸಿ ದಂಪತಿಯ ದೇಹವನ್ನು ಹೊರತೆಗೆಸಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಶವಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಿದರು. ಗಂಡಹೆಂಡಿರು ಜಗಳವಾಡಿಕೊಂಡು ಹೆಣವಾಗಿದ್ದು, ಏನೂ ಮಾಡದ ಮಕ್ಕಳು ಅನಾಥರಾಗಿದ್ದಾರೆ. [ರೈಲಿಗೆ ತಲೆಕೊಟ್ಟು ಪ್ರೇಮಿಗಳ ಆತ್ಮಹತ್ಯೆ]