ಬಿಇಎಂಎಲ್ ಖಾಸಗೀಕರಣ, ಮೇ 30ರಂದು ಮೈಸೂರು ಬಂದ್ ಗೆ ಕರೆ
ಮೈಸೂರು, ಮೇ 24 : ರಕ್ಷಣಾವಲಯದಲ್ಲಿ ವಿಶಿಷ್ಠ ಸೇವೆ ಒದಗಿಸುತ್ತಿರುವ ನಗರದ ಪ್ರತಿಷ್ಠಿತ ಬಿ.ಇ.ಎಂ.ಎಲ್ ಸಂಸ್ಥೆಯನ್ನು ಕೇಂದ್ರ ಸರಕಾರ ಖಾಸಗೀಕರಣಗೊಳಿಸುತ್ತಿರುವ ನೀತಿಯನ್ನು ವಿರೋಧಿಸಿ ಮೇ 30ರಂದು ಹರತಾಳವನ್ನು ಆಚರಿಸಲು ಭಾರತ್ ಅರ್ತ್ ಮೂವರ್ಸ್ ಎಂಪ್ಲಾಯೀಸ್ ಅಸೋಸಿಯೇಷನ್, ಬಿ.ಇ.ಎಂ.ಎಲ್ ಅಧಿಕಾರಿಗಳ ಒಕ್ಕೂಟ ಹಾಗೂ ಬಿ.ಇ.ಎಂ.ಎಲ್. ಖಾಸಗೀಕರಣ ವಿರೋಧಿ ವೇದಿಕೆ ನಿರ್ಧರಿಸಿದೆ.
ಈ ಬಗ್ಗೆ ಬುಧವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ದೇವದಾಸ್, ಬಿ.ಇ.ಎಂ.ಎಲ್. ಭಾರತದ ಪ್ರಮುಖ ಕೈಗಾರಿಕೆಗಳಲ್ಲೊಂದಾಗಿದ್ದು ಕೇಂದ್ರ ಸರ್ಕಾರದ ಸಾರ್ವಜನಿಕ ವಲಯದಲ್ಲಿದೆ.[ಮೈಸೂರು ಕೋರ್ಟ್ ಸ್ಫೋಟ ಪ್ರಕರಣ, ಅಲ್ ಉಮ್ಮಾ ವಿರುದ್ಧ ಚಾರ್ಜ್ ಶೀಟ್!]
ರಕ್ಷಣಾ ಇಲಾಖೆಯ ಅಧೀನದಲ್ಲಿರುವ ಇದು, ದೇಶಕ್ಕೆ ಬೇಕಾಗುವ ರಕ್ಷಣಾ ಸಾಮಗ್ರಿ, ಗಣಿಗಾರಿಕೆ ಮತ್ತು ನಿರ್ಮಾಣ ಕ್ಷೇತ್ರಕ್ಕೆ ಬೇಕಾಗುವ ಉಪಕರಣಗಳು, ರೈಲ್ವೆ ಇಲಾಖೆಗೆ ಬೇಕಾಗುವ ರೈಲು ಬೋಗಿ ಮತ್ತು ಮೆಟ್ರೋ ಕೋಚ್ ಗಳನ್ನು ತಯಾರಿಸುತ್ತಿದೆ.[ಮೈಸೂರು ವಿವಿಗೆ ಪ್ರಪ್ರಥಮ ಮಹಿಳಾ ಉಪಕುಲಪತಿ?]
ಇಂತಹ ಬೃಹತ್ ಉದ್ದಿಮೆಯನ್ನು ಇಂದು ಕೇಂದ್ರ ಸರ್ಕಾರ ತನ್ನ ಶೇ.54 ರಷ್ಟು ಷೇರುಗಳಲ್ಲಿ ಶೇ.26 ನ್ನು ಏಕಮಾಲೀಕತ್ವದ ಖಾಸಗಿ ಬಂಡವಾಳಗಾರರಿಗೆ ಕೊಡಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಖಾನೆಯ ಸಮಸ್ತ ಕಾರ್ಮಿಕರು, ಅಧಿಕಾರಿ ವರ್ಗದವರು, ಗುತ್ತಿಗೆ ಕಾರ್ಮಿಕರು ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ವಿರೋಧಿಸಿ ಈಗಾಗಲೇ ಹಲವಾರು ಹಂತಗಳ ಹೋರಾಟವನ್ನು ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಆದರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮನವಿಗೆ ಸ್ಪಂದಿಸಿಲ್ಲ ಎಂದು ಆಪಾದಿಸಿದರು.
ಆದ್ದರಿಂದ ಬಿ.ಇ.ಎಂ.ಎಲ್. ನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ನೀತಿಯನ್ನು ವಿರೋಧಿಸಿ ಮೇ 30 ರಂದು ಮೈಸೂರು, ಬೆಂಗಳೂರು, ಕೋಲಾರ ಮತ್ತು ಶಿವಮೊಗ್ಗದಲ್ಲಿ ಹರತಾಳವನ್ನು ಆಚರಿಸುತ್ತಿದ್ದೇವೆ.
ನಮ್ಮ ಈ ಹೋರಾಟಕ್ಕೆ ಎಲ್ಲಾ ಸಂಘಟನೆಗಳು ಬೆಂಬಲ ನೀಡಿವೆ. ಅಲ್ಲದೇ ಮೇ 30 ರಂದು ಮೈಸೂರು ಬಂದ್ ಗೆ ಕರೆ ನೀಡುವುದಾಗಿ ತಿಳಿಸಿದರು. ಮೇ 27 ರಂದು ಶನಿವಾರ ಮೈಸೂರಿನಲ್ಲಿ ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದ್ದು, ನಗರದ ಪ್ರಮುಖ ಬೀದಿಗಳಲ್ಲಿ ರ್ಯಾಲಿ ಸಾಗುತ್ತದೆ. ಈ ಮೂಲಕ ಜನರ ಗಮನ ಸೆಳೆದು ಅವರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತೇವೆ ಎಂದರು.