ದಸರೆಗೆ ಮೈಸೂರಲ್ಲಿ ವಿಮಾನಯಾನ ಮತ್ತೆ ಶುರು ಮಾಡಿ: ಪ್ರತಾಪ್ ಸಿಂಹ
ಮೈಸೂರು, ಆಗಸ್ಟ್ 12: ವಿಮಾನ ನಿಲ್ದಾಣವಿದ್ದರೂ ವಿಮಾನ ಹಾರಾಡಲ್ಲ ಎಂಬ ಕೊರಗನ್ನು ನೀಗಿಸುವಂತೆ ಹಾಗೂ ಪ್ರವಾಸೋದ್ಯಮಕ್ಕೆ ಅನುಕೂಲವಾಗುವ ದೃಷ್ಟಿಯಿಂದ ವಿಮಾನಯಾನ ಪುನರಾರಂಭಿಸುವಂತೆ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ.
ದೆಹಲಿಯಲ್ಲಿ ಗುರುವಾರ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಅವರನ್ನು ಭೇಟಿ ಮಾಡಿದ ಸಂಸದ ಪ್ರತಾಪ್ ಸಿಂಹ, ಮೈಸೂರು ವಿಮಾನ ನಿಲ್ದಾಣದಲ್ಲಿ ವಿಮಾನಯಾನ ಮತ್ತೆ ಆರಂಭಿಸುವಂತೆ ಮನವಿ ಸಲ್ಲಿಸಿದರು.
ಅತ್ಯಂತ ಸ್ವಚ್ಛ ನಗರ ಎಂದು ಖ್ಯಾತವಾಗಿರುವ ಮೈಸೂರಿಗೆ ಸಾಂಸ್ಕೃತಿಕ ಮಹತ್ವ ಇದೆ, ಅನೇಕ ಪ್ರೇಕ್ಷಣೀಯ ಸ್ಥಳಗಳು, ಉದ್ಯಮ ಸ್ನೇಹಿ ವಾತಾವರಣ ಹಾಗೂ ಯೋಗ-ಶಿಕ್ಷಣ, ಪ್ರವಾಸೋದ್ಯಮ ಮೊದಲಾದ ಗುಣಗಳ ಕಾರಣ ದೇಶದ ಮಹತ್ವದ ನಗರಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಂತಿದೆ.
ಮೈಸೂರಿನ ವಾತಾವರಣ ಮತ್ತು ಪರಿಸರದ ಕಾರಣ ಇಲ್ಲಿಗೆ ವಾರ್ಷಿಕ 30 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ನಾಡ ಹಬ್ಬ ದಸರಾ ವಿಶ್ವವಿಖ್ಯಾತವಾಗಿದ್ದು, ಆ ಸಂದರ್ಭದಲ್ಲಿ ಪ್ರವಾಸಿಗರ ಸಂಖ್ಯೆ ಅತ್ಯಂತ ಹೆಚ್ಚಿರುತ್ತವೆ. ಈ ಎಲ್ಲ ಕಾರಣಗಳಿಂದ ಮೈಸೂರು ವಿಮಾನ ನಿಲ್ದಾಣಕ್ಕೆ ವಿಮಾನ ಸಂಪರ್ಕ ಕಲ್ಪಿಸಲು ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.
ಮೈಸೂರು ವಿಮಾನ ನಿಲ್ದಾಣದಲ್ಲಿ ಎಲ್ಲ ರೀತಿ ಮೂಲಸೌಲಭ್ಯಗಳಿವೆ. ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಿ, ಮೈಸೂರಿನ ಪ್ರವಾಸೋದ್ಯಮ ಮತ್ತು ಉದ್ಯಮಗಳಿಗೆ ಸಹಕಾರ ನೀಡಬೇಕು ಎಂದು ಪ್ರತಾಪ್ ಸಿಂಹ ಮನವಿ ಮಾಡಿದರು. .
1. ಮೈಸೂರು-ಗೋವಾ-ಮುಂಬೈ ಮತ್ತು ಮರಳಿ ಅದೇ ಮಾರ್ಗ.
2.ಮೈಸೂರು-ಕೊಚ್ಚಿ-ತಿರುವನಂತಪುರಂ ಮತ್ತು ಅದೇ ಮಾರ್ಗ
3.ಮೈಸೂರು-ಹೈದರಾಬಾದ್-ಮುಂಬೈ ಮತ್ತು ಮರಳಿ ಅದೇ ಮಾರ್ಗ
4.ಮೈಸೂರು-ದೆಹಲಿ-ಮೈಸೂರು
5. ಜೈಪುರ-ಮೈಸೂರು-ಗೋವಾ ಮತ್ತು ಮರಳಿ ಅದೇ ಮಾರ್ಗ
6.ಮೈಸೂರು-ಚೆನ್ನೈ-ಮೈಸೂರು
7.ಮೈಸೂರು-ಕೊಯಂಬತೂರು-ಮುಂಬೈ/ದೆಹಲಿ ಮತ್ತು ಮರಳಿ ಅದೇ ಮಾರ್ಗ
8.ಮೈಸೂರು-ಮಂಗಳೂರು-ಮೈಸೂರು
ಈ ಮಾರ್ಗಗಳಲ್ಲಿ ವಿಮಾನ ಸಂಚಾರ ಆರಂಭಿಸಿದರೆ ಮೈಸೂರಿನ ಪ್ರವಾಸೋದ್ಯಮಕ್ಕೆ ಅನುಕೂಲವಾಗುತ್ತದೆ ಎಂಬ ವಿಷಯವನ್ನು ಸಚಿವರ ಗಮನಕ್ಕೆ ತರಲಾಗಿದೆ.
ಮೈಸೂರಿನಲ್ಲಿ ಈ ಹಿಂದೆ ಕಿಂಗ್ ಫಿಶರ್ ಏರ್ ಲೈನ್ -1, ಅಕ್ಟೋಬರ್ 2010 ರಿಂದ 7ನೇ ನವೆಂಬರ್ 2011ರವರೆಗೆ, ಸ್ಪೈಸ್ ಜೆಟ್ ಏರ್ ಲೈನ್ಸ್ -14ನೇ ಜನವರಿ 2013ರಿಂದ 25ನೇ ಅಕ್ಟೋಬರ್ ವರೆಗೆ, ಅಲಿಯಾನ್ಸ್ ಏರ್ (ಏರ್ ಇಂಡಿಯಾ) 2015ರ ಸೆಪ್ಟೆಂಬರ್ 3ರಿಂದ 17ನೇ ನವೆಂಬರ್ 2015ರ ವರೆಗೆ ಹಾರಾಟ ನಡೆಸಿ, ಬಳಿಕ ಸ್ಥಗಿತಗೊಂಡಿದ್ದನ್ನು ಸ್ಮರಿಸಬಹುದು.