7ನೇ ವೇತನ ಆಯೋಗದ ತಾರತಮ್ಯ ಪರಿಹಾರಕ್ಕೆ ಪ್ರತಿಭಟನೆ
ಮೈಸೂರು, ಮಾರ್ಚ್ 16 : ಜಂಟಿ ಹೋರಾಟ ಸಮಿತಿ ಅಖಿಲ ಭಾರತ ಅಂಚೆ ನೌಕರರ ಸಂಘ, ರಾಷ್ಟ್ರೀಯ ಅಂಚೆ ನೌಕರರ ಸಂಘದ ಸಹಯೋಗದಲ್ಲಿ ರಾಷ್ಟ್ರೀಯ ಜಂಟಿ ಕ್ರಿಯಾ ಸಮಿತಿಯು 7ನೇ ವೇತನ ಆಯೋಗದ ವರದಿಯಲ್ಲಿನ ನ್ಯೂನತೆಗಳ ಪುನರ್ ಪರಿಶೀಲನೆಗಾಗಿ ಕೇಂದ್ರ ಸಂಪುಟ ಕಾರ್ಯದರ್ಶಿಗಳಿಗೆ ಸಲ್ಲಿಸಿದ ಬೇಡಿಕೆಗಳನ್ನು ಇತ್ಯರ್ಥಗೊಳಿಸುವಂತೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಚೆ ನೌಕರರು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ಮೈಸೂರಿನಲ್ಲಿಯೂ ಅಂಚೆ ನೌಕರರು ಪ್ರತಿಭಟನೆ ನಡೆಸಿದರು.
ಮನೆ ಬಾಡಿಗೆ ಭತ್ಯೆ ಹಾಲಿ ಇರುವ ಶೇಕಡಾವಾರು 30%, 20% ಹಾಗೂ 10ನ್ನು ಉಳಿಸಿಕೊಂಡು ಸಂಚಾರ ಭತ್ಯೆಯನ್ನು ರಾಷ್ಟ್ರೀಯ ಜಂಟಿ ಕ್ರಿಯಾ ಸಮಿತಿಯ ಬೇಡಿಕೆಯಂತೆ ಹೆಚ್ಚಿಸಬೇಕು. 7ನೇ ವೇತನ ಆಯೋಗದ ಶಿಫಾರಸ್ಸಿನಿಂದ ಉಂಟಾಗಿರುವ ಎಲ್ಲಾ ರೀತಿಯ ತಾರತಮ್ಯಗಳನ್ನು ಸಮಯ ಪರಿಮಿತಿಯೊಳಗೆ ಪರಿಹರಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.[ಮೈಸೂರಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ]
ಎಲ್ಲಾ ಕೇಂದ್ರ ನೌಕರರಿಗೂ ಒಂದೇ ರೀತಿಯ ಪಿಂಚಣಿ ಹಾಗೂ ಕುಟುಂಬ ಪಿಂಚಣಿಯನ್ನು ನೀಡಬೇಕು, ಗ್ರಾಮೀಣ ಅಂಚೆ ನೌಕರರನ್ನು ಖಾಯಂ ನೌಕರರಂತೆ ಪರಿಗಣಿಸಿ ವೇತನ ಹಾಗೂ ಎಲ್ಲಾ ಭತ್ಯೆಯನ್ನು ನೀಡಬೇಕು. ದಿನಗೂಲಿ, ಗುತ್ತಿಗೆ ಹಾಗೂ ಹಂಗಾಮಿ ನೌಕರರನ್ನು ಖಾಯಂಗೊಳಿಸಿ ಅವರಿಗೆ ಸಮಾನವೇತನ ಹಾಗೂ ಸೌಲಭ್ಯವನ್ನು ನೀಡಬೇಕು, ಸರ್ಕಾರಿ ಕೆಲಸಗಳನ್ನು ಖಾಸಗೀಕರಣಗೊಳಿಸಿ ಹೊರಗುತ್ತಿಗೆ ಕೊಡುವುದನ್ನು ನಿಲ್ಲಿಸಬೇಕು ಎಂಬಿತ್ಯಾದಿ ಬೇಡಿಕೆಗಳಿಗಾಗಿ ಒತ್ತಾಯಿಸಿದರು.[ಉಪಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿಸಲ್ಲ : ಹೆಚ್.ಡಿ.ದೇವೇಗೌಡ ಸ್ಪಷ್ಟನೆ]