ವೇಶ್ಯಾವಾಟಿಕೆ, ಅಪಘಾತ ಸೇರಿ ಇತರ ಮೈಸೂರು ಜಿಲ್ಲಾ ಕ್ರೈಂ ಸುದ್ದಿಗಳು
ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ, ಅಪಘಾತ, ಬೆಟ್ಟಿಂಗ್ ದಂಧೆ ಮೇಲೆ ದಾಳಿ, ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು ಈ ಎಲ್ಲಾ ಮೈಸೂರು ಜಿಲ್ಲೆಯ ಅಪರಾಧ ಸುದ್ದಿಗಳ ವಿವರಣೆಗಳು ಈ ಒಂದೇ ಸುದ್ದಿ ತಿಳಿಸಲಾಗಿದೆ. ವಿವರಣೆಗಳಿಗಾಗಿ ಮುಂದೆ ಓದಿ.
ಮೈಸೂರು, ಜನವರಿ 22 : ಮೈಸೂರಿನಲ್ಲಿ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ದಾಳಿ ನಡೆಸಿದ ಪೊಲೀಸರು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಇಬ್ಬರು ಯುವಕರನ್ನು ಬಂಧಿಸಿ, ಓರ್ವ ಮಹಿಳೆಯನ್ನು ರಕ್ಷಿಸಿದ್ದಾರೆ.
ಬಂಧಿತರನ್ನು ಪಾಂಡವಪುರ ತಾಲೂಕಿನ ಬ್ಯಾಡರಹಳ್ಳಿಯ ಕಿರಣ್ ಅಲಿಯಾಸ್ ಭದ್ರ(28), ಕೆ.ಆರ್.ಪೇಟೆಯ ಭರತ್(23) ಎಂದು ಗುರುತಿಸಲಾಗಿದೆ.
ಇವರು ಸಿದ್ದಾರ್ಥನಗರದ ಸನ್ಮಾರ್ಗ ರಸ್ತೆಯ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇಲೆ ದಾಳಿ ನಡೆಸಿದ ಸಿಸಿಬಿ ಮತ್ತು ನಜರಾಬಾದ್ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿ, ಓರ್ವ ಮಹಿಳೆಯನ್ನು ರಕ್ಷಿಸಿದ್ದಾರೆ. ನಜರ್ ಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.[ಮೈಸೂರು, ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ : ಐವರ ಬಂಧನ]
ವಿದ್ಯುತ್ ಅವಘಡ: ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಮೈಸೂರಿನಲ್ಲಿ ನಡೆದಿದೆ. ಮೃತರನ್ನು ಮೈಸೂರು ಗಾಂಧಿನಗರ ನಿವಾಸಿ ಕುಮಾರ್(38) ಎಂದು ಗುರುತಿಸಲಾಗಿದೆ.
ಮೋಟಾರ್ ಗೆ ಚಾಲನೆ ನೀಡುವ ವೇಳೆ ವಿದ್ಯುತ್ ತಂತಿಯನ್ನು ಸ್ಪರ್ಶಿಸಿದ ಪರಿಣಾಮ ಸಾವು ಸಂಭವಿಸಿದೆ ಎಂದು ತಿಳಿದುಬಂದಿದೆ.
ಬೆಟ್ಟಿಂಗ್ ಪ್ರಕರಣ : ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕೆ.ಆರ್.ಮೊಹಲ್ಲಾ ರಾಮಾನುಜ ರಸ್ತೆಯ ನಿವಾಸಿ ಎಸ್.ಸ್ವಾಮಿ(61)ಎಂದು ಗುರುತಿಸಲಾಗಿದೆ. ಬಂಧಿತನಿಂದ ಟಿವಿ, ಮೊಬೈಲ್ ಹಾಗೂ 2,800 ರೂ.ವನ್ನು ವಶಪಡಿಸಿಕೊಂಡಿದ್ದಾರೆ.
ಮೈಸೂರಿನಲ್ಲಿ ಮನೆಯೊಂದರ 3ನೇ ಮಹಡಿ ಮೇಲೆ ಈತ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಎಂಬುದನ್ನು ತಿಳಿದು ಪೊಲೀಸರು ದಾಳಿ ನಡೆಸಿದ್ದಾರೆ. ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಸ್ತೆ ವಿಭಜಕಕ್ಕೆ ಗುದ್ದಿದ ಕಾರು: ಯರಗನಹಳ್ಳಿ ಕಡೆಯಿಂದ ಬೆಂಗಳೂರು ರಸ್ತೆಯ ಕಡೆ ಸಾಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಗುದ್ದಿದೆ. ಇದರಿಂದ ಕಾರಿನಲ್ಲಿದ್ದ ಐವರು ಪ್ರಯಾಣಿಕರಿಗೆ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿದ್ದಾರ್ಥನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.