ಕಬಿನಿ ಬಂದೋಬಸ್ತ್ಗೆ ಬಂದಿದ್ದ ಮುಖ್ಯಪೇದೆ ಸಾವು
ಮೈಸೂರು, ಸೆಪ್ಟೆಂಬರ್ 14 : ಕಬಿನಿ ಜಲಾಶಯದ ಬಂದೋಬಸ್ತ್ಗೆ ಬಂದಿದ್ದ ಮುಖ್ಯಪೇದೆಯೊಬ್ಬರು ಮೂರ್ಛೆ ರೋಗದಿಂದ ಮೃತಪಟ್ಟ ಘಟನೆ ಎಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಮೂಲತಃ ವಿಜಯಪುರ ಜಿಲ್ಲೆಯ ನಿವಾಸಿ ಅಪ್ಪಾ ಸಾಹೇಬ್ ಎಂ ಭಜಂತ್ರಿ (47) ಮೃತಪಟ್ಟ ಪೇದೆ. ಇವರು ಕಬಿನಿ ಜಲಾಶಯದ ಬಂದೋಬಸ್ತ್ ಗಾಗಿ ಸೆ. 5ರಂದು ಬೀಚನಹಳ್ಳಿಗೆ ಆಗಮಿಸಿದ್ದರು. ಅಂದಿನಿಂದ ಇಂದಿನವರೆಗೂ ಕಬಿನಿ ಜಲಾಶಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಎಂದಿನಂತೆ ಕಬಿನಿ ಹಿನ್ನೀರಿನಲ್ಲಿ ಬೋಟ್ ಹೌಸ್ ಬಳಿ ಬಟ್ಟೆ ಒಗೆದು ಒಣಗಲು ಹಾಕಿದ್ದರು. ನಂತರ ಬಟ್ಟೆ ತೆಗೆದು ಬರಲು ಹೋಗಿದ್ದ ವೇಳೆಯಲ್ಲಿ ಮೂರ್ಛೆ ರೋಗಕ್ಕೆ ತುತ್ತಾಗಿ ಒದ್ದಾಡುತಿದ್ದ ಇವರನ್ನು ಕಬಿನಿ ಹಿನ್ನೀರಿನಲ್ಲಿ ದನ ಮೇಯಿಸುತ್ತಿದ್ದ ವ್ಯಕ್ತಿಯೊಬ್ಬ ನೋಡಿ ಪಕ್ಕದಲ್ಲಿದ್ದ ಪೊಲೀಸ್ ಸಹದ್ಯೋಗಿಗಳಿಗೆ ಮಾಹಿತಿ ನೀಡಿದ್ದಾರೆ.
ಸಹದ್ಯೋಗಿಗಳು ಸ್ಥಳಕ್ಕೆ ಬರುವಷ್ಟರಲ್ಲಿ ಪೇದೆ ಮೃತ ಪಟ್ಟಿದ್ದು ತಿಳಿದು ಎಚ್.ಡಿ. ಕೋಟೆ ಪೊಲೀಸ್ ವೃತ್ತ ನಿರೀಕ್ಷಕರ ಗಮನಕ್ಕೆ ತಂದಿದ್ದಾರೆ. ವೃತ್ತನಿರೀಕ್ಷಕರು ಮತ್ತು ಸಿಬ್ಬಂದಿಗಳು ಪೇದೆಯ ಮೃತ ದೇಹವನ್ನು ಇಲಾಖಾ ವಾಹನದಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತಂದರು. ಸಂಬಂಧಿಕರು ಬರುವವರೆಗೆ ಮರಣೋತ್ತರ ಪರೀಕ್ಷೆ ನಡೆಸಲು ಆಗದ ಕಾರಣ ಮೃತ ದೇಹವನ್ನು ಮೈಸೂರಿನ ಕೆ.ಆರ್.ಆಸ್ಪತ್ರೆ ಶವಗಾರಕ್ಕೆ ಸಾಗಿಸಿದರು.
ಆಸ್ಪತ್ರೆಗೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಚನ್ನಣ್ಣನವರ್ ಭೇಟಿ ನೀಡಿ ವೃತ್ತ ನಿರೀಕ್ಷಕ ಹರೀಶ್ ಕುಮಾರ್ ಅವರಿಂದ ಮಾಹಿತಿ ಪಡೆದರು.