ಮೈಸೂರಿನಲ್ಲಿ ಇಂಧನ ಬೆಲೆ ಏರಿಕೆಗೆ ವಿರೋಧ: ಪ್ರತಿಭಟನೆ
ಮೈಸೂರು, ಜನವರಿ 17 : ಕೇಂದ್ರ ಸರ್ಕಾರ ಮತ್ತೆ ಮತ್ತೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮಾಡುತ್ತಿರುವುದನ್ನು ವಿರೋಧಿಸಿ ಕರ್ನಾಟಕ ಸೇನಾಪಡೆ ವತಿಯಿಂದ ಮಂಗಳವಾರ ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿ ಎದರು ಪ್ರತಿಭಟನೆ ನಡೆಸಿ ಮನವಿಯನ್ನು ಸಲ್ಲಿಸಿದರು.[ಪೆಟ್ರೋಲ್, ಡೀಸೆಲ್ ದರ, ಮತ್ತೊಮ್ಮೆ ಅಲ್ಪ ಪ್ರಮಾಣದ ಏರಿಕೆ]
ಕೇಂದ್ರ ಸರ್ಕಾರವು ಪ್ರತೀ ತಿಂಗಳು ಇಂಧನ ದರವನ್ನು ಏರಿಕೆ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದೆ. ಈ ಹಿಂದೆ 3 ತಿಂಗಳಿಗೋ ಅಥವಾ 6 ತಿಂಗಳಿಗೊಮ್ಮೆ ಇಂಧನ ದರಗಳಲ್ಲಿ ಏರಿಕೆಯಾಗುತ್ತಿತ್ತು. ಆದರೇ ಈಗ ಪ್ರತಿ ತಿಂಗಳಲ್ಲಿ ಎರಡು ಬಾರಿ ಏರಿಕೆಯಾಗುತ್ತಿರುವುದರಿಂದ ಗ್ರಾಹಕರು ತತ್ತರಿಸುತ್ತಿದ್ದಾರೆ. ಆದ ಕಾರಣ ಇನ್ನು ಮುಂದಾದರೂ ಕೇಂದ್ರ ಸರ್ಕಾರ ಇಂಧನ ದರದಲ್ಲಿ ಏರಿಕೆಯಾಗದಂತೆ ನೋಡಿಕೊಳ್ಳಬೇಕೆಂದು ಸೇನಾಪಡೆಯ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಒತ್ತಾಯಿಸಿದರು.
ಈ ಸಂದರ್ಭ ಇಂಧನ ದರ ಏರಿಕೆ ಮಾಡದಂತೆ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿ ಮೋದಿ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ 30 ಕ್ಕೂ ಅಧಿಕ ಮಂದಿ ಕಾರ್ಯಕರ್ತರು ಪಾಲ್ಗೊಂಡಿದ್ದರು.