ರೈತನ ಬೆಳೆ ಮತ್ತು ಕನಸನ್ನು ಸರ್ವನಾಶ ಮಾಡಿದ ಕ್ರಿಮಿನಾಶಕ
ಮೈಸೂರು, ಜೂನ್ 23 : ಕಳೆದ ಕೆಲ ವರ್ಷಗಳಿಂದ ತಂಬಾಕು ಬೆಳೆಗಾರ ಮೈಸೂರು ಜಿಲ್ಲೆಯಲ್ಲಿ ಸಂಕಷ್ಟಮಯ ಪರಿಸ್ಥಿತಿ ಎದುರಿಸುತ್ತಿದ್ದಾನೆ. ದರ ಕುಸಿತ, ಮಳೆಹಾನಿ, ಬರ ಹೀಗೆ ಒಂದಿಲ್ಲೊಂದು ಸಮಸ್ಯೆಗಳಿಂದ ಬಳಲಿ ಬೆಂಡಾಗಿದ್ದಾನೆ.
ಹಣ ತರುವ ವಾಣಿಜ್ಯ ಬೆಳೆಯಾಗಿದ್ದ ತಂಬಾಕು ಇತ್ತೀಚೆಗಿನ ವರ್ಷಗಳಲ್ಲಿ ರೈತರಿಗೆ ಪಾಲಿಗೆ ಉರುಳಾಗಿ ಪರಿಣಮಿಸಿದೆ. ಲಕ್ಷಾಂತರ ರು. ಖರ್ಚು ಮಾಡಿ ಬೆಳೆ ಬೆಳೆದರೂ ಕೆಲವೊಮ್ಮೆ ಕೈಗೆ ಬಂದಿದ್ದು ಬಾಯಿಗೆ ಬಾರದ ಸ್ಥಿತಿಯಾಗಿ ಆತ್ಮಹತ್ಯೆಗೆ ಶರಣಾದ ಘಟನೆಗಳು ಬಹಳಷ್ಟು ನಡೆದಿವೆ.
ಇಂತಹ ಸಂಕಷ್ಟ ಎದುರಿಸುತ್ತಿರುವಾಗಲೇ ಆಗ್ರೋ ಕೇಂದ್ರದ ಮಾಲಿಕನೊಬ್ಬ ನೀಡಿದ ಔಷಧಿ, ಪಿರಿಯಾಪಟ್ಟಣ ತಾಲೂಕಿನ ಅರೇನಹಳ್ಳಿ ಗ್ರಾಮದಲ್ಲಿ ಬೆಳೆಗಾರ ಸೈಯದ್ ಬಾಬುಜಾನ್ ಎಂಬುವರ ತಂಬಾಕು ಬೆಳೆಗೆ ಕಂಟಕವಾಗಿ ಪರಿಣಮಿಸಿದೆ.
ತಂಬಾಕಿನ ಎಲೆಯನ್ನು ಕೀಟ ತಿನ್ನುತ್ತಿತ್ತು. ಇದನ್ನು ನಿಯಂತ್ರಿಸುವ ಸಲುವಾಗಿ ಆಗ್ರೋ ಕೇಂದ್ರವೊಂದಕ್ಕೆ ತೆರಳಿದ ಸೈಯದ್ ಬಾಬುಜಾನ್ ಅಲ್ಲಿನ ಮಾಲಿಕರ ಮಾತಿನಂತೆ ಎಎಕ್ಸ್ವೈ ಗೋಲ್ಡ್ ಎಂಬ ಔಷಧಿ ತಂದು ಸಿಂಪಡಿಸಿದ್ದಾರೆ. ಇನ್ನೇನು ತಂಬಾಕಿಗೆ ಅಂಟಿದ್ದ ಕೀಟ ಸರ್ವ ನಾಶವಾಯಿತು ಎಂದು ಖುಷಿಯಲ್ಲಿರುವಾಗಲೇ, ಕೀಟ ಮಾತ್ರವಲ್ಲ ಎಲೆಯೇ ನಾಶವಾಗಿದೆ! ಜೊತೆಗೆ ಆತನ ಕನಸು ಕೂಡ! [ದಾಳಿಂಬೆ ಕೈಕೊಟ್ಟು ಕೆಆರ್ ಪೇಟೆ ರೈತ ನೇಣಿಗೆ ಶರಣು]
ಸುಮಾರು ಎರಡೂವರೆ ಎಕರೆ ಬೆಳೆ ಒಣಗುತ್ತಿದ್ದು, ಸೈಯದ್ ಬಾಳಿನಲ್ಲಿ ಕಾರ್ಮೋಡ ಕವಿದಂತಾಗಿದೆ. ಆಗ್ರೋ ಸೆಂಟರ್ನಲ್ಲಿ ಮಾಲಿಕರ ಕೇಳಿದರೆ ನಮ್ಮದೇನು ತಪ್ಪಿಲ್ಲ ಎನ್ನುತ್ತಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಔಷಧಿ ಖರೀದಿಸಿದಕ್ಕೆ ಯಾವುದೇ ರಶೀದಿಯಿಲ್ಲ. ಈ ಸಂಬಂಧ ಸ್ಥಳಕ್ಕೆ ತಂಬಾಕು ಮಂಡಳಿ ವಿಸ್ತರಣಾಧಿಕಾರಿ ಮಂಜುನಾಥ್ ಭೇಟಿ ನೀಡಿ ಗಿಡಗಳನ್ನು ಪರೀಕ್ಷಿಸಿದ್ದು, ಗಿಡಗಳನ್ನು ತಂಬಾಕು ಮಂಡಳಿಯ ಪರೀಕ್ಷಣಾ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ. [ಉಡುಪಿಯಲ್ಲಿ ಖರ್ಜೂರ ಬೆಳೆದು ತೋರಿಸಿದ ಸಾಧಕ!]
ತಂಬಾಕು ಬೆಳೆಗಾಗಿ ಸೈಯದ್ ಬಾಬುಜಾನ್ ಎಡಿಬಿಐ ಮೈಸೂರು ಬ್ಯಾಂಕ್ನಲ್ಲಿ 4 ಲಕ್ಷ ರು.ನಷ್ಟು ಸಾಲ ಮಾಡಿಕೊದ್ದಾರಂತೆ. ಇದೀಗ ತಂಬಾಕು ನಾಶವಾದರೆ ಅವರ ಪರಿಸ್ಥಿತಿ ಏನಾಗಬೇಕು?
ಇನ್ನಾದರೂ ಬೆಳೆಗಾರರು ಬೆಳೆಗಳಿಗೆ ರೋಗ ಕಾಣಿಸಿಕೊಂಡರೆ ಸಂಬಂಧಿಸಿದ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿ ಅವರ ನಿರ್ದೇಶನದ ಮೇರೆಗೆ ಔಷಧಿ ಪಡೆಯುವುದು ಒಳಿತು ಇಲ್ಲವಾದರೆ ಭಾರೀ ನಷ್ಟ ಅನುಭವಿಸಬೇಕಾಗಬಹುದು. [ಮಳೆಗಾಲದ ಕಲ್ಪವೃಕ್ಷ, ರೈತರಿಗೆ ವರದಾನ ಪಣಂಪುಳಿ]