ಮೈಸೂರು: ಹಣ ಪಡೆದು ವಿದೇಶ ಪ್ರವಾಸ ರದ್ದುಗೊಳಿಸಿದ ಟ್ರಾವೆಲ್ ಏಜನ್ಸಿ
ಮೈಸೂರು, ಡಿಸೆಂಬರ್ 17 : ನಾಲ್ಕು ದಿನಗಳ ಕಾಲ ವಿದೇಶ ಪ್ರವಾಸಕ್ಕೆ ಕರೆದೊಯ್ಯಲು ಹಣ ಕಟ್ಟಿಸಿಕೊಂಡಿದ್ದ ಮೈಸೂರಿನ ಖ್ಯಾತ ಟ್ರಾವಲ್ ಏಜನ್ಸಿಯೊಂದು ಕೊನೆಯ ಗಳಿಗೆಯಲ್ಲಿ ಪ್ರವಾಸ ರದ್ದುಮಾಡಿ ಪ್ರವಾಸ ಹೊರಟ ಪ್ರಿಯರಿಗೆ ಶಾಕ್ ನೀಡಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ಮೈಸೂರಿನ ಟ್ರಾವಲ್ಸ್ ಏಜನ್ಸಿಯೊಂದು ಒಟ್ಟು 33 ಜನರಿಗೆ ದುಬೈ, ಶಾರ್ಜಾ ಪ್ರವಾಸಕ್ಕೆ ಕರೆದೊಯ್ಯಲು ತಲಾ 63 ಸಾವಿರ ರೂಪಾಯಿ ಹಣ ಪಡೆದಿತ್ತು. ಶುಕ್ರವಾರ ಮಧ್ಯ ರಾತ್ರಿ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ವಿದೇಶಕ್ಕೆ ಕರೆದೊಯ್ಯುವುದಾಗಿ ತಿಳಿಸಲಾಗಿತ್ತು. ಹೀಗಾಗಿ ಮೈಸೂರಿನಿಂದ ಬಸ್ ಮೂಲಕ ಬೆಂಗಳೂರಿಗೆ ಹೊರಡಲು ಸಜ್ಜಾಗಿದ್ದ ಪ್ರವಾಸಿಗರಿಗೆ ವಿದೇಶ ಪ್ರವಾಸ ರದ್ದುಗೊಂಡಿರುವುದಾಗಿ ಟ್ರಾವಲ್ಸ್ ಏಜನ್ಸಿ ಸಂಸ್ಥೆ ತಿಳಿಸಿದೆ. ವಿದೇಶ ಪ್ರವಾಸಕ್ಕೆ ಅಗತ್ಯವಾಗಿರುವ ವೀಸಾ ಲಭ್ಯವಾಗದ ಕಾರಣ ಪ್ರವಾಸ ರದ್ದುಗೊಳಿಸಲಾಗಿದೆ ಎಂದು ಟ್ರಾವಲ್ಸ್ ಏಜನ್ಸಿ ತಿಳಿಸಿದೆ.[ಮಾಜಿ ಪ್ರಧಾನಿ ಸಿಂಗ್ ಟ್ರಾವೆಲ್ ಶೀಟ್ ಬಹಿರಂಗ]
ಕೊನೆಯ ಗಳಿಗೆಯಲ್ಲಿ ಪ್ರವಾಸ ರದ್ದುಗೊಳಿಸಿದ ಟ್ರಾವಲ್ಸ್ ಏಜನ್ಸಿ ವಿರುದ್ಧ ಪ್ರವಾಸಿಗರು ಕಿಡಿಕಾರಿದ್ದಾರೆ. ದುಬೈ,ಶಾರ್ಜಾ ಸೇರಿದಂತೆ ಇತರೆಡೆ ಒಟ್ಟು ನಾಲ್ಕು ದಿನಗಳ ಕಾಲ ಪ್ರವಾಸಕ್ಕೆ ಕರೆದೊಯ್ಯುವುದಾಗಿ ಭರವಸೆ ನೀಡಿದ್ದ ಟ್ರಾವಲ್ಸ್ ಏಜನ್ಸಿಯಿಂದ ವಂಚನೆಯಾಗಿದೆ ಎಂದು ಪ್ರವಾಸಿಗರು ದೂರಿದ್ದಾರೆ.