ಕಂಬಳ, ಕಾವೇರಿ, ಮಹದಾಯಿ ಕುರಿತು ಸುಗ್ರೀವಾಜ್ಞೆ ಹೊರಡಿಸಲು ಒತ್ತಾಯ
ಮೈಸೂರು, ಜನವರಿ 22 : ತಮಿಳುನಾಡಿನಲ್ಲಿ ಜಲ್ಲಿಕಟ್ಟು ನಡೆಸಲು ಸುಗ್ರೀವಾಜ್ಞೆ ಹೊರಡಿಸಿರುವ ಹಿನ್ನೆಲೆಯಲ್ಲಿ, ಕರ್ನಾಟಕದಲ್ಲೂ ಕಂಬಳ ನಡೆಸುವಂತೆ ಹಾಗೂ ಕಾವೇರಿ, ಮಹದಾಯಿ ವಿಚಾರವಾಗಿ ಸುಗ್ರೀವಾಜ್ಞೆ ಹೊರಡಿಸುವಂತೆ ಆಗ್ರಹಿಸಿ ಕರ್ನಾಟಕ ಕಾವಲು ಪಡೆ ವತಿಯಿಂದ ಪ್ರತಿಭಟನೆ ನಡೆಯಿತು.
ಮೈಸೂರು ನ್ಯಾಯಾಲಯದ ಬಳಿಯಿರುವ ಮಹಾತ್ಮಾ ಗಾಂಧೀ ಪ್ರತಿಮೆ ಎದುರು ಕರ್ನಾಟಕ ಕಾವಲು ಪಡೆ ಭಾನುವಾರ ಕಂಬಳದಲ್ಲಿ ಪಾಲ್ಗೊಳ್ಳುವ ಕೋಣಗಳನ್ನು ಸಾಂಕೇತಿಕವಾಗಿ ತಂದು ಪ್ರತಿಭಟನೆ ನಡೆಸಿದರು.
ಮಹದಾಯಿ ಮತ್ತು ಕಾವೇರಿ ವಿಚಾರಗಳಲ್ಲಿ ಕೇಂದ್ರ ಸರ್ಕಾರ ಕರ್ನಾಟಕದ ಪರವಾಗಿ ಕಾಳಜಿ ತೋರಿಸಿಲ್ಲ. ರಾಜ್ಯದ ಹಿತಕ್ಕಾಗಿ ಹಲವಾರು ಬಾರಿ ಮುಖ್ಯಮಂತ್ರಿಗಳು ಸಮಯ ಕೋರಿದರೂ ಸಮಯ ನೀಡಿಲ್ಲ.
ಇದೀಗ ರಾಜ್ಯ-ರಾಜ್ಯಗಳ ನಡುವೆ ಮಲತಾಯಿ ಧೋರಣೆ ತಾಳಿದೆ ಎಂದು ಪ್ರತಿಭಟನಾಕಾರರು ಕೇಂದ್ರ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರಕ್ಕೆ ಒಬ್ಬ ಸಂಸದನನ್ನು ನೀಡದ ತಮಿಳುನಾಡು ಸರ್ಕಾರದ ಮುಂದೆ ಮಂಡಿಊರಿದೆ. ತಮಿಳುನಾಡಿನ ಜಲ್ಲಿಕಟ್ಟಿಗೆ ಸುಗ್ರೀವಾಜ್ಞೆ ಹೊರಡಿಸಿರುವುದು ಅನುಮಾನಕ್ಕೆ ಎಡೆಮಾಡಿದೆ.
ಕೇಂದ್ರ ಸರ್ಕಾರ ಕರಾವಳಿಯ ಕಂಬಳ ಕ್ರೀಡೆಗೂ ಹಾಗೂ ಕಾವೇರಿ ಮತ್ತು ಮಹದಾಯಿ ವಿಚಾರದಲ್ಲೂ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಒತ್ತಾಯಿಸಿದರು. ರಾಜ್ಯ ರಾಜ್ಯಗಳ ನಡುವೆ ತಾರತಮ್ಯ ತೋರಿಸಬಾರದು ಎಂದರು.
ಪ್ರತಿಭಟನೆಯಲ್ಲಿ ಚಂದ್ರಶೇಖರ್, ರಾಜ್ಯಾಧ್ಯಕ್ಷ ಎಂ.ಮೋಹನಕುಮಾರ್, ಗಿರೀಶ್ ನಾಯ್ಕ, ರಾಜ್ಯಕಾರ್ಯದರ್ಶಿ ಎಂ.ಮಂಜುನಾಥ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.