ಹುಲಿ ಕಾರ್ಯಾಚರಣೆಯಲ್ಲಿ ಗುಂಡೇಟು: ಓರ್ವ ಸಾವು, ಇಬ್ಬರಿಗೆ ಗಾಯ
ಹುಲಿ ಕಾರ್ಯಾಚರಣೆ ಮಾಡುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿಯ ಬಂದೂಕಿನಿಂದ ಆಕಸ್ಮಿಕವಾಗಿ ಹಾರಿದ ಗುಂಡಿಗೆ ವ್ಯಕ್ತಿಯೊಬ್ಬರು ಬಲಿಯಾಗಿ, ಇಬ್ಬರು ಗಾಯಗೊಂಡ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ
ಎಚ್.ಡಿ.ಕೋಟೆ, ಡಿಸೆಂಬರ್ 30: ಮಳಲಿ ಗ್ರಾಮದಲ್ಲಿ ಅಡಗಿಕೊಂಡಿರುವ ಹುಲಿಯ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಹಾರಿದ ಗುಂಡಿಗೆ ವ್ಯಕ್ತಿಯೊಬ್ಬ ಬಲಿಯಾಗಿ, ವಲಯ ಅರಣ್ಯಾಧಿಕಾರಿ ಸೇರಿ ಇಬ್ಬರು ಗಾಯಗೊಂಡ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಅಂತರಸಂತೆ ವನ್ಯಜೀವಿ ಅರಣ್ಯ ವಲಯದಲ್ಲಿ ನಡೆದಿದೆ.
ಎನ್.ಬೆಳತ್ತೂರು ಗ್ರಾಮದ ನಂಜಪ್ಪನವರ ಮಗ ಮೂರ್ತಿ (25) ಮೃತಪಟ್ಟ ದುರ್ದೈವಿ. ಗಂಭೀರ ಗಾಯಗೊಂಡ ಅಂತರಸಂತೆ ವಲಯ ಅರಣ್ಯಾಧಿಕಾರಿ ಮಹೇಶ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಬ್ಬ ಹೊಸಹೊಳಲು ಗ್ರಾಮದ ಕೆಂಪಯ್ಯ ಎಂಬುವರ ಕೈಗೆ ಗುಂಡೇಟು ಬಿದ್ದಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.[ಹೆಚ್.ಡಿ.ಕೋಟೆಯ ಮಗ್ಗೆ, ಮಳಲಿ ಗ್ರಾಮಗಳಲ್ಲಿ ಹುಲಿ ಭಯ!]
ಮಳಲಿ ಗ್ರಾಮದ ಕಿರಬಣ್ಣನ ಮಾಯ ಎಂಬುವರ ಬಾಳೆ ತೋಟದಲ್ಲಿ ಒಂದು ತಿಂಗಳಿನಿಂದ ಹುಲಿಯೊಂದು ಮರಿಯೊಂದಿಗೆ ವಾಸ್ತವ್ಯ ಹೂಡಿ, ಆಗಾಗ ಸಾರ್ವಜನಿಕರಿಗೆ ಕಾಣಿಸಿಕೊಳ್ಳುತ್ತಿತ್ತು. ನಾಲ್ಕು ಹಸುಗಳನ್ನು ಬಲಿ ಪಡೆದಿತ್ತು. ಇದರಿಂದ ಭೀತಗೊಂಡ ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಅರಣ್ಯ ಇಲಾಖೆ ನಾಲ್ಕೈದು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿತ್ತು.
ಸುಮಾರು 40 ಮಂದಿ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು. ಎಂದಿನಂತೆ ಗುರುವಾರವೂ ಕಾರ್ಯಾಚರಣೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಹುಲಿ ಅಡಗಿದ್ದ ಬಾಳೆತೋಟ ಮತ್ತು ಕಬಿನಿ ಹಿನ್ನೀರಿನ ಒಳಗೆ ಸಿಬ್ಬಂದಿ ಪಟಾಕಿ ಸಿಡಿಸುತ್ತಾ ಮತ್ತು ದಟ್ಟನೆ ಹೊಗೆ ಹಾಕುವ ಮೂಲಕ ಕಾರ್ಯಾಚರಣೆಯನ್ನು ನಡೆಸುತ್ತಿದ್ದರು.[ಬಂಡೀಪುರ ರಾಷ್ಟ್ರೀಯ ಉದ್ಯಾನದ ಆಕರ್ಷಣೆ ಹುಲಿ 'ಪ್ರಿನ್ಸ್'ಗೆ ಗಾಯ!]
ಈ ವೇಳೆ ಬಂದೂಕಿನಿಂದ ಆಕಸ್ಮಿವಾಗಿ ಸಿಡಿದ ಗುಂಡು ಕಾರ್ಯಾಚರಣೆಯಲ್ಲಿದ್ದ ಮೂರ್ತಿ ಮೇಲೆ ಹಾರಿದೆ. ಆ ನಂತರ ಅರಣ್ಯಾಧಿಕಾರಿ ಮಹೇಶ್ ಅವರಿಗೂ ತಗುಲಿ, ಮತ್ತೊಬ್ಬ ಕೆಂಪಯ್ಯ ಎಂಬುವರ ಕೈಗೆ ಹೊಕ್ಕಿದೆ. ಗುಂಡೇಟಿನಿಂದ ಗಂಭೀರ ಗಾಯಗೊಂಡ ಮೂರ್ತಿ ಮೃತಪಟ್ಟರೆ, ಗಂಭೀರ ಗಾಯಗೊಂಡ ಮಹೇಶ್ ಮತ್ತು ಕೆಂಪಯ್ಯ ಅವರಿಗೆ ಎಚ್.ಡಿ.ಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ.[ಹುಲಿ ಕಳೇಬರ ಪತ್ತೆ; ವಿಷವುಣಿಸಿ, ಉಗುರು- ಹಲ್ಲು ಹೊತ್ತೊಯ್ದರೆ?]
ಆ ನಂತರ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಕುರಿತಂತೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.